ಕೊಡಗು ಜಿಲ್ಲೆಯಲ್ಲಿ ಮರುಕಳಿಸಿದ ಪ್ರವಾಸಿಗರ ಕಲರವ
ಮಡಿಕೇರಿ, ಡಿಸೆಂಬರ್ 27: ಕಳೆದ ಎರಡು ವರ್ಷಗಳಿಂದ ಭೂಕುಸಿತ ಮತ್ತು ಈ ವರ್ಷ ಮಹಾಮಾರಿ ಕೋವಿಡ್ ಕಾರಣದಿಂದಾಗಿ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆ ಸ್ತಬ್ಧವಾಗಿತ್ತು. ಕಳೆದ ದಸರಾ ಹಬ್ಬದ ಸಂದರ್ಭದಲ್ಲಿಯೂ ಜಿಲ್ಲೆಯ ಹೋಂ ಸ್ಟೇ, ರೆಸಾರ್ಟ್, ಹೋಟೆಲ್ಗಳು ಖಾಲಿ ಹೊಡೆಯುತ್ತಿದ್ದವು.
ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಪ್ರವಾಸೋದ್ಯಮ ಮತ್ತೆ ಗರಿಗೆದರಿದೆ. ಆತಿಥ್ಯ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರು ಸಂತಸಗೊಂಡಿದ್ದಾರೆ. ಕ್ರಿಸ್ಮಸ್ ರಜೆಯ ಹಿನ್ನೆಲೆಯಲ್ಲಿ ಅತ್ಯಂತ ಹೆಚ್ಚು ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದಾರೆ.
ಕಳೆದ ಮೂರು ದಿನಗಳಲ್ಲಿ ಸುಮಾರು 5000 ಕ್ಕೂ ಹೆಚ್ಚು ಪ್ರವಾಸಿಗರು ಕುಶಾಲನಗರದ ಕಾವೇರಿ ನಿಸರ್ಗ ಧಾಮಕ್ಕೆ ಭೇಟಿ ನೀಡಿದ್ದಾರೆ. ಸಾವಿರಾರು ಪ್ರವಾಸಿಗರು ದುಬಾರೆ ಮತ್ತು ತಲಕಾವೇರಿಗೂ ಭೇಟಿ ನೀಡಿದ್ದಾರೆ.

ಅಕ್ಟೋಬರ್ನಲ್ಲಿ ನಡೆದ ತುಲಾ ಸಂಕ್ರಮಣ ಸಮಯದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ತಲಕಾವೇರಿಯಲ್ಲಿ ಜಿಲ್ಲಾಡಳಿತವು ಭಕ್ತಾದಿಗಳಿಗೆ ನಿರ್ಬಂಧ ಹೇರಿತ್ತು. ಇದೇ ಮೊದಲ ಬಾರಿಗೆ ತಲ ಕಾವೇರಿಯು ಜಾತ್ರೆಯ ದಿನ ಜನರಿಲ್ಲದೆ ಭಣಗುಡುತಿತ್ತು.
ಆದರೆ, ಇದೀಗ ಶುಕ್ರವಾರ ಮತ್ತು ಶನಿವಾರ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದು, ತುಲಾ ಸಂಕ್ರಮಣ ದಿನವನ್ನೇ ಜ್ಞಾಪಿಸುತ್ತಿತ್ತು ಎಂದು ಸ್ಥಳೀಯರೊಬ್ಬರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದರು.
ಮಡಿಕೇರಿಯ ರಾಜಾ ಸೀಟು ಕೂಡ ಎರಡು ದಿನಗಳಿಂದ ಸಂಜೆ ವೇಳೆ ಪ್ರವಾಸಿಗರಿಂದ ಭರ್ತಿ ಆಗಿತ್ತು. ಪ್ರತಿ ವರ್ಷವೂ ನೂತನ ವರ್ಷಾಚರಣೆಗೆ ರಾಜಾ ಸೀಟ್ ನಲ್ಲಿ 4-5 ಸಾವಿರ ಜನರು ಸೇರುತ್ತಾರೆ. ಆದರೆ, ಈ ಬಾರಿ ಜಿಲ್ಲಾಡಳಿತ ನಿರ್ಬಂಧ ವಿಧಿಸಿರುವುದರಿಂದ, ಪೋಲೀಸ್ ಕಾವಲೂ ಇರುವುದರಿಂದ ಹೊಸ ವರ್ಷಾಚರಣೆ ಸರಳವಾಗಿರಲಿದೆ.
ಸರ್ಕಾರದ ಮಾರ್ಗಸೂಚಿಯ ನಡುವೆಯೂ ಶನಿವಾರ ಸಾವಿರಾರು ಪ್ರವಾಸಿಗರು ಮಾಸ್ಕ್ ಇಲ್ಲದೆ ನಿಸರ್ಗಧಾಮ, ದುಬಾರೆ ಮತ್ತೆ ಕೆಲವೆಡೆ ಕಾಣಿಸಿಕೊಂಡಿದ್ದಾರೆ. ಇದರಿಂದ ಕೋವಿಡ್ ಹರಡುವಿಕೆಯ ಆತಂಕವೂ ಇದೆ ಎಂದು ಹೋಂ ಸ್ಟೇ ಮಾಲೀಕರೊಬ್ಬರು ಹೇಳಿದ್ದಾರೆ.
ಜಿಲ್ಲೆಯ ಹೋಂ ಸ್ಟೇ, ಹೋಟೆಲ್ ಗಳಲ್ಲಿ ಶೇಕಡಾ 60 ಕ್ಕೂ ಹೆಚ್ಚು ಕೊಠಡಿಗಳು ಡಿಸೆಂಬರ್ 31ಕ್ಕೆ ಮುಂಗಡ ಬುಕ್ಕಿಂಗ್ ಆಗಿವೆ. ದುಬಾರೆ, ನಿಸರ್ಗ ಧಾಮ, ಅಬ್ಬಿ ಫಾಲ್ಸ್ ನಲ್ಲಿ ಪ್ರವಾಸಿಗರು ನೀರಿನಲ್ಲಿ ಆಟವಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.












Click it and Unblock the Notifications