ಕುಡಿಯಲು ಹಣ ಕೊಟ್ಟಿಲ್ಲವೆಂದು ಮಡಿಕೇರಿಯಲ್ಲಿ ತಂದೆಯನ್ನೇ ಕೊಲೆಗೈದ ಮಗ
ಮಡಿಕೇರಿ, ಜನವರಿ 19: ಕುಡಿತದ ದಾಸನಾಗಿದ್ದ ವ್ಯಕ್ತಿಯೊಬ್ಬ, ತನಗೆ ಕುಡಿಯಲು ಹಣ ನೀಡಲಿಲ್ಲವೆಂದು ತಂದೆಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಸೋಮವಾರಪೇಟೆ ಸಮೀಪದ ಗೋಣಿಮರೂರು ಗ್ರಾಮದಲ್ಲಿ ಲೋಕೇಶ ಎಂಬಾತ ತನಗೆ ಕುಡಿಯಲು ಹಣ ನೀಡಬೇಕೆಂದು ತಂದೆ ತಾಯಿ ಮೇಲೆ ಹಲ್ಲೆ ಮಾಡಿದ್ದು, ತಂದೆ ಸಾವನ್ನಪ್ಪಿದ್ದಾರೆ.
ಜೇನುಕುರುಬರ ಕರಿಯಪ್ಪ (46) ಎಂಬುವವರೇ ಮಗನಿಂದ ಹತ್ಯೆಗೀಡಾದ ದುರ್ದೈವಿ. ತಾಯಿ ಲೀಲಾ ಎಂಬುವವರು ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ಲೋಕೇಶ್ ಶುಕ್ರವಾರ ರಾತ್ರಿ ಕಂಠಪೂರ್ತಿ ಕುಡಿದು ಮನೆಗೆ ಬಂದು ತಂದೆ ತಾಯಿ ಬಳಿ ಕುಡಿಯಲು ಹಣಕ್ಕಾಗಿ ಪೀಡಿಸಿದ್ದಾನೆ. ಆದರೆ ಹಣ ಕೊಡಲು ಅವರು ಒಪ್ಪದಿದ್ದಾಗ ಮರದ ತುಂಡಿನಿಂದ ಇಬ್ಬರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ತಂದೆ ಕರಿಯಪ್ಪರವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತಾಯಿ ಲೀಲಾ ಅವರನ್ನು ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಸೇರಿಸಲಾಗಿದೆ.
ಘಟನೆ ನಂತರ ತಲೆಮರೆಸಿಕೊಂಡಿದ್ದ ಲೋಕೇಶ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.












Click it and Unblock the Notifications