ನಿಸರ್ಗ ಜೇಸಿ ಕೆಸರು ಗದ್ದೆ ಕ್ರೀಡೋತ್ಸವಕ್ಕೆ ಬಿಟ್ಟಂಗಾಲ ಸಜ್ಜು!
ಮಡಿಕೇರಿ, ಜು.29: ದಕ್ಷಿಣ ಕೊಡಗಿನ ಜೆ.ಸಿ.ಐ ಪೊನ್ನಂಪೇಟೆ ನಿಸರ್ಗ ಘಟಕದ ಆಶ್ರಯದಲ್ಲಿ ಪ್ರಾಯೋಜಕರ ನೆರವಿನೊಂದಿಗೆ ಜು. 30ರಂದು ಬಿಟ್ಟಂಗಾಲದಲ್ಲಿ 5ನೇ ವರ್ಷದ ರಾಜ್ಯ ಮಟ್ಟದ ನಿಸರ್ಗ ಜೇಸಿ ಕೆಸರು ಗದ್ದೆ ಕ್ರೀಡೋತ್ಸವ 2017ಕ್ಕೆ ಸಜ್ಜುಗೊಂಡಿದೆ. ಕ್ರೀಡೋತ್ಸವಕ್ಕಾಗಿ ಕಳೆದೊಂದು ತಿಂಗಳಿನಿಂದ ಶ್ರಮಿಸುತ್ತಿರುವ ಪೊನ್ನಂಪೇಟೆಯ ನಿಸರ್ಗ ಜೇಸಿಸ್ ತಂಡ ಗದ್ದೆಯನ್ನು ಸಂಪೂರ್ಣ ಸಜ್ಜುಗೊಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಜೆ.ಸಿ.ಐ ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷರಾದ ಎ.ಎಸ್.ಟಾಟು ಮೊಣ್ಣಪ್ಪ ಅವರು, ಕ್ರೀಡೋತ್ಸವವು ವಿರಾಜಪೇಟೆ-ಗೋಣಿಕೊಪ್ಪಲು ಮುಖ್ಯ ರಸ್ತೆ ಬದಿಯಲ್ಲಿರುವ ಬಿಟ್ಟಂಗಾಲದ ನಿವೃತ್ತ ಮೇ.ಜ. ಕುಪ್ಪಂಡ ಪಿ.ನಂಜಪ್ಪ ಅವರ ಭತ್ತದ ಗದ್ದೆಯಲ್ಲಿ ನಡೆಯುತ್ತಿದೆ. ಕಳೆದ 4 ವರ್ಷಗಳಿಂದ ಘಟಕದ ವತಿಯಿಂದ ಆಯೋಜಿಸುತ್ತಿರುವ ಕೆಸರುಗದ್ದೆ ಕ್ರೀಡೋತ್ಸವಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದಾಗಿ ತಿಳಿಸಿದ್ದಾರೆ.

ಯೋಜನಾ ನಿರ್ದೇಶಕರಾದ ಕುಪ್ಪಂಡ ದಿಲನ್ ಬೋಪಣ್ಣ ಅವರು ಮಾತನಾಡಿ ಕೆಸರು ಗದ್ದೆ ಪುಟ್ಬಾಲ್ ಪಂದ್ಯಾವಳಿಗೆ 48 ತಂಡಗಳಿಗೆ ಆದ್ಯತೆ ನೀಡಲಾಗುತ್ತಿದೆ.. ಪುರುಷರ ಮತ್ತು ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಗೆ ರಾಜ್ಯ ಕೆಲವು ಪ್ರತಿಷ್ಟಿತ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಂಡ್ಯ ಮತ್ತು ಕೊಡಗು ಪೊಲೀಸ್ ತಂಡ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಬಹುತೇಕ ಖಚಿತವಾಗಿದೆ. ವಿವಿಧ ವಿಭಾಗದ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು ಬೆಳಗ್ಗೆ 10 ಗಂಟೆಯೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಕೆಸರು ಗದ್ದೆ ಓಟದ ಸ್ಪರ್ಧೆ ಒಟ್ಟು 8 ವಿಭಾಗಗಳಲ್ಲಿ ನಡೆಯಲಿದೆ. 1ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳ ಸಬ್ ಜುನಿಯರ್ ಬಾಲಕ ಬಾಲಕಿಯರ ತಂಡಗಳಿಗೆ, 6ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳ ಜುನಿಯರ್ ಬಾಲಕ ಬಾಲಕಿಯರ ತಂಡಗಳಿಗೆ, 10ರಿಂದ ದ್ವಿತೀಯ ಪಿ.ಯು.ಸಿ ತರಗತಿವರೆಗಿನ ವಿದ್ಯಾರ್ಥಿಗಳ ಸಿನಿಯರ್ ಬಾಲಕ ಬಾಲಕಿಯರ ತಂಡಗಳಿಗೆ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪುರುಷ ಮತ್ತು ಮಹಿಳೆಯರ ಮುಕ್ತ ತಂಡಗಳಿಗೆ ಪ್ರತ್ಯೇಕವಾಗಿ ಓಟದ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದು, ಹೆಚ್ಚಿನ ಮಾಹಿತಿಗಾಗಿ 9481883738ನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.












Click it and Unblock the Notifications