ಬೇಕಿದ್ದರೆ ಮರಗಳ್ಳರನ್ನು ಶೂಟ್ ಮಾಡಿ: ಸಚಿವ ದೇಶಪಾಂಡೆ ಸೂಚನೆ
ಮಡಿಕೇರಿ, ಜೂನ್ 19: ಅಧಿಕಾರಿಗಳು ಮರಗಳ್ಳರಿಗೆ ಬೆಂಬಲ ನೀಡಬಾರದು. ಅಗತ್ಯಬಿದ್ದರೆ ಅವರನ್ನು ಶೂಟ್ ಮಾಡಿ ಎಂದು ಕಂದಾಯ ಸಚಿವ ಆರ್ ವಿ ದೇಶಪಾಂಡೆ ಹೇಳಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅರಣ್ಯ ಭಾಗದ ಜಿಲ್ಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವಾಗ ಅಧಿಕಾರಿಗಳು ಜನರ ಮೇಲೆ ಮಾನವೀಯತೆ ತೋರಿಸಬೇಕು. ಅವರಿಗೆ ಅಡ್ಡಿಪಡಿಸಬಾರದು. ನಾವು ಅರಣ್ಯಾಧಿಕಾರಿಗಳನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿಲ್ಲ. ಕಾನೂನು ಪರಿಪಾಲನೆ ಜತೆಗೆ ಮಾನವೀಯತೆಯನ್ನೂ ಹೊಂದಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ತೋಟದ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ನೀಡದ ವಿರಾಜಪೇಟೆಯ ಪ್ರೊಬೇಷನರಿ ತಹಶೀಲ್ದಾರ್ ಗೋವಿಂದರಾಜ್ ವಿರುದ್ಧ ದೇಶಪಾಂಡೆ ಹರಿಹಾಯ್ದರು. 'ನಿನ್ನನ್ನು ಸಸ್ಪೆಂಡ್ ಮಾಡಬೇಕೇ ಅಥವಾ ವರ್ಗಾವಣೆ ಮಾಡುವುದೇ? ನಿನ್ನ ಮೇಲೆ ಸಾಕಷ್ಟು ದೂರುಗಳು ಬಂದಿವೆ. ಶಾಸಕರ ಮಾತು ಕೇಳ್ತಿಲ್ಲ, ಸಭೆಗೂ ಬರುತ್ತಿಲ್ಲ. ನಾನು ಎಷ್ಟು ಒಳ್ಳೆಯವನೋ ಅಷ್ಟೇ ಕೆಟ್ಟ ಮನುಷ್ಯ ಕೂಡ. ಇನ್ನು ಮುಂದೆ ನಿನ್ನ ಬಗ್ಗೆ ದೂರು ಬರಬಾರದು' ಎಂದು ಕಟುವಾಗಿ ಎಚ್ಚರಿಕೆ ನೀಡಿದರು.

ಕಳೆದ ಬಾರಿ ಮಳೆಯಿಂದ ನೆಲೆ ಕಂಡುಕೊಂಡಿರುವ ನೆರೆ ಸಂತ್ರಸ್ತರಿಗಾಗಿ ಎರಡು ಪುನರ್ ವಸತಿ ಸ್ಥಳಗಳಲ್ಲಿ ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಮೂಲಸೌಕರ್ಯ ಕಾಮಗಾರಿ ಮುಗಿದ ಕೂಡಲೇ ಅವರಿಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದರು.
ಕೊಡಗು ಸಂತ್ರಸ್ತರಿಗೆ ನಿರ್ಮಿಸಿರುವ ಮನೆಗಳು ಕಳಪೆಯಾಗಿವೆ ಎಂದು ನಟಿ ಹರ್ಷಿಕಾ ಪೂಣಚ್ಚ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು. 'ರಾಜೀವ್ ಗಾಂಧಿ ವಸತಿ ನಿಗಮದಿಂದ ಸರ್ಕಾರ ನಿರ್ಮಿಸುತ್ತಿರುವ ಮನೆಗಳ ಕಾಮಗಾರಿ ಗುಣಮಟ್ಟ ಚೆನ್ನಾಗಿಯೇ ಇದೆ. ದೇವರು ಆ ನಟಿಗೆ ಒಳ್ಳೆಯದನ್ನು ಮಾಡಲಿ' ಎಂದು ಹೇಳಿದರು.












Click it and Unblock the Notifications