ಮಡಿಕೇರಿ : ಪ್ರವಾಹ ಸಂತ್ರಸ್ತರಿಗೆ ಸ್ವ ಉದ್ಯೋಗ ತರಬೇತಿ
ಮಡಿಕೇರಿ, ಸೆಪ್ಟೆಂಬರ್ 20 : ಕೊಡಗು ಜಿಲ್ಲಾಡಳಿತ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಸ್ವ-ಉದ್ಯೋಗ ಮಾಡಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಸಂತ್ರಸ್ತರ ಕೇಂದ್ರದಲ್ಲಿರುವ ಜನರಿಗೆ ಸ್ವ ಉದ್ಯೋಗ ತರಬೇತಿಯನ್ನು ನೀಡಲಾಗುತ್ತಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಮಡಿಕೇರಿ ನಗರದ ಬಾಲಕಿಯರ ಬಾಲಮಂದಿರದ ಪರಿಹಾರ ಕೇಂದ್ರದಲ್ಲಿ ಕಾಗದದಿಂದ ಬ್ಯಾಗ್, ಕವರ್, ಉಡುಗೊರೆ ಪದಾರ್ಥಗಳು, ಪೋಟೋ ಪ್ರೇಂ, ಅಲ್ಬಂ ಇತರೆ ಸಾಮಗ್ರಿಗಳನ್ನು ತಯಾರಿಸುವ ಸಂಬಂಧ ತರಬೇತಿ ನೀಡಲಾಯಿತು.
ಮೈಸೂರು ಕಾಗದ ಉತ್ಪಾದನಾ ಸಂಸ್ಥೆಯ ತರಬೇತುದಾರ ಎಸ್.ರವಿಶಂಕರ್ ಅವರು ಕಾಗದದಿಂದ ವಿವಿಧ ರೀತಿಯ ಪದಾರ್ಥಗಳನ್ನು ತಯಾರು ಮಾಡುವ ಬಗ್ಗೆ ಹಲವು ಮಾಹಿತಿ ನೀಡಿದರು. 'ಕಡಿಮೆ ಬಂಡವಾಳದಲ್ಲಿ ಗರಿಷ್ಠ ಆದಾಯ ಪಡೆಯುವುದು ಗುಡಿ ಕೈಗಾರಿಕೆಯ ಉದ್ದೇಶವಾಗಿದೆ' ಎಂದರು.

'ಮನೆಯಲ್ಲಿಯೇ ಕುಳಿತು ಉದ್ಯೋಗ ಪಡೆಯುವುದರ ಜೊತೆಗೆ ಆದಾಯ ಗಳಿಸುವ ನಿಟ್ಟಿನಲ್ಲಿ ಸಂತ್ರಸ್ತರು ಮನಸ್ಸು ಮಾಡಬೇಕು. ಮನಸ್ಸಿದ್ದರೆ ಮಾರ್ಗ ಎಂಬಂತೆ ಕ್ರೀಯಾಶೀಲತೆ ಇದ್ದಲ್ಲಿ ಬದುಕನ್ನು ವೇಗವಾಗಿ ರೂಪಿಸಿಕೊಳ್ಳಬಹುದು' ಎಂದರು.
ಉದ್ಯೋಗ ಮೇಳ : ಕೊಡಗು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸೆಪ್ಟೆಂಬರ್ 22 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಡಿಕೇರಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಉದ್ಯೋಗ ಮೇಳ ನಡೆಯಲಿದೆ.

ಕ್ಲಬ್ ಮಹೀಂದ್ರ, ಹಿಂದುಜಾ ಗ್ಲೋಬಲ್ ಸೊಲೂಷನ್ಸ್, ದಿ ಫೋರ್ಟ್ ಮರ್ಕರಾ, ವುಡ್ ಸ್ಟಾಕ್ ವಿಲ್ಲಾಸ್, ತಾಜ್ ರೆಸಾರ್ಟ್, ಪರ್ಪಲ್ ಪಾಮ್ಸ್, ವುಡ್ ಲ್ಯಾಂಡ್, ಬಿಎಸ್ಎಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಪಿಎಂಕೆವಿವೈ, ಇಬ್ಬನಿ ರೆಸಾರ್ಟ್ ಮತ್ತು ಸ್ಪಾ ಕೋಜೆಂಟ್ ಇನ್ನಿತರ ಸಂಸ್ಥೆಗಳು ಭಾಗವಹಿಸಲಿವೆ.
ಎಸ್.ಎಸ್.ಎಲ್.ಸಿ, ಪಿ.ಯು.ಸಿ., ಐ.ಟಿ.ಐ, ಡಿಪ್ಲೋಮ ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿದೆ. ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ಅನುಭವ ಪ್ರಮಾಣಪತ್ರ ಹಾಗೂ ಸ್ವ-ವಿವರಗಳ ಪ್ರತಿಗಳೊಂದಿಗೆ ಉದ್ಯೋಗಮೇಳದಲ್ಲಿ ಪಾಲ್ಗೊಳ್ಳಬಹುದು.












Click it and Unblock the Notifications