ಆರಂಭವಾಗಿದೆ ಐತಿಹಾಸಿಕ ಮಡಿಕೇರಿ ಕೋಟೆಗೆ ಕಾಯಕಲ್ಪ ನೀಡುವ ಕೆಲಸ
ಮಡಿಕೇರಿ, ಜೂನ್ 14: ದಕ್ಷಿಣ ಕಾಶ್ಮೀರ, ಮಂಜಿನ ನಗರಿ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಈ ನಗರವು ಇಂದು ರಾಜ್ಯದ ಪ್ರಸಿದ್ಧ ಪ್ರವಾಸೀ ತಾಣಗಳಲ್ಲಿ ಒಂದು. ಅಷ್ಟೇ ಅಲ್ಲ ಸಿಲಿಕಾನ್ ಸಿಟಿಗೆ ಅತ್ಯಂತ ಹತ್ತಿರದಲ್ಲಿರುವ ಗಿರಿಧಾಮವೂ ಹೌದು. ನಗರದಲ್ಲಿ ಎಲ್ಲೇ ಹೋದರೂ ಎತ್ತರದ ಪ್ರದೇಶದಲ್ಲಿರುವ ಈ ಐತಿಹಾಸಿಕ ಕೋಟೆ ಕಣ್ಣಿಗೆ ಬೀಳುತ್ತದೆ.
Recommended Video
ಐದು ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿ ಸೇರಿ ಕೊಡಗಿನ ಎಲ್ಲ ಸರ್ಕಾರಿ ಕಚೇರಿಗಳೂ ಇಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದವು. ನಂತರ ಈ ಕೋಟೆಯ ಉಸ್ತುವಾರಿ ಹೊಂದಿರುವ ಪ್ರಾಚ್ಯವಸ್ತು ಇಲಾಖೆಯು ಕಚೇರಿಗಳನ್ನು ತೆರವು ಮಾಡಲು ಸೂಚಿಸಿದ ನಂತರ ಎಲ್ಲ ಕಚೇರಿಗಳೂ ಒಂದೊಂದಾಗಿ ಬೇರೆ ಕಡೆಗೆ ಸ್ಥಳಾಂತರಗೊಂಡವು. ಶಿಥಿಲಗೊಂಡಿರುವ ಈ ಕೋಟೆಯೊಳಗಿನ ಅರಮನೆಯನ್ನು ಪ್ರಾಚ್ಯವಸ್ತು ಇಲಾಖೆ ದುರಸ್ಥಿಗೊಳಿಸುತ್ತಿದೆ.
ಶಿಥಿಲಾವಸ್ಥೆ ತಲುಪಿದ್ದ ಕೋಟೆ
ಸುಮಾರು 20 ಸಾವಿರ ಚದರ ಅಡಿಗಳಷ್ಟು ವಿಸ್ತಾರವಾಗಿರುವ ಮಹಡಿಯನ್ನು ಒಳಗೊಂಡ ಈ ಕೋಟೆಯೊಳಗಿರುವ ಅರಮನೆ ತೀವ್ರ ನಿರ್ಲಕ್ಷ್ಯದ ಕಾರಣದಿಂದ ಶಿಥಿಲಾವಸ್ಥೆ ತಲುಪಿತ್ತು. ಒಂದು ಆಕರ್ಷಣೀಯ ಪ್ರವಾಸಿ ತಾಣವಾಗಿತ್ತು ಈ ಕೋಟೆ. ಕೋಟೆಯ ಒಳಗಿರುವ ಎರಡು ಆನೆಗಳ ಶಿಲ್ಪ, ಕೋಟೆ ಗಣಪತಿ ದೇವಾಲಯ, ಮರಣ ಬಾವಿ, ವಸ್ತುಸಂಗ್ರಹಾಲಯ, ಬೃಹತ್ ಗೋಡೆ ಗಡಿಯಾರ, ಜೈಲು, ತೋಪುಗಳನ್ನಿಡಲು ನಿರ್ಮಿಸಿದ್ದ ಗವಿಗಳು, ಹೀಗೆ ಹತ್ತು ಹಲವು ರೀತಿಯ ಆಕರ್ಷಣೆಗಳು ಇದ್ದು, ಪ್ರವಾಸಿಗರು ಇವೆಲ್ಲವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು.
ಮತ್ತೊಂದು ಮಳೆಗಾಲ ಬಂದರೂ ಹೀಗೇ ಇದೆಯಲ್ಲ ಮಡಿಕೇರಿ ಅರಮನೆ
ಅರಮನೆ ಅಭಿವೃದ್ಧಿಗೆ ಕೇಳಿಬಂದಿದ್ದ ಕೂಗು
ಆದರೆ ಕಾಲಾನಂತರ ಕೋಟೆ ಆಕರ್ಷಣೆ ಕಳೆದುಕೊಳ್ಳುತ್ತಾ ಹೋಯಿತು. ಈ ಕುರಿತಾಗಿ ಹಲವು ಬಾರಿ ವಿಷಯವನ್ನು ಮುನ್ನೆಲೆಗೆ ತಂದಿದ್ದರೂ ಅದಕ್ಕೆ ಸ್ಪಂದನೆ ದೊರೆಯುತ್ತಿರಲಿಲ್ಲ. ಜನರು ಸರ್ಕಾರದ ಈ ಮೌನಕ್ಕೆ ಸಿಡಿಮಿಡಿಗೊಂಡಿದ್ದರು. ಇತಿಹಾಸದ ಕುರುಹಾಗಿ ಉಳಿದಿರುವ ಕೋಟೆ ಹಾಗು ಅರಮನೆಯನ್ನು ರಕ್ಷಣೆ ಮತ್ತು ಅಭಿವೃದ್ಧಿ ಮಾಡಬೇಕೆಂಬ ಕೂಗು ಕೇಳಿಬರುತ್ತಲೇ ಇದ್ದವು.
ಅಭಿವೃದ್ಧಿಗೆ ಒಲವು ತೋರಿದ್ದ ಡಿಸಿ ಅನುರಾಗ್ ತಿವಾರಿ
ಕೆಲ ವರ್ಷಗಳ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಅನುರಾಗ್ ತಿವಾರಿಯವರು ಈ ವಿಷಯದ ಕುರಿತಾಗಿ ಹೆಚ್ಚಿನ ಒಲವು ತೋರಿದ್ದರು. 2014ರಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಬೆಂಗಳೂರು ವಲಯದ ಅಧೀಕ್ಷಕರಾದ ಟಿ.ಎಂ.ಕೇಶವ ಹಾಗು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಕುರಿತಾಗಿ ಯೋಜನೆಯನ್ನು ತಯಾರಿಸುವಂತೆ ಒತ್ತಡ ತಂದಿದ್ದರು. ಆದರೆ ಅವರು ವರ್ಗಾವಣೆಗೊಂಡ ನಂತರ ಈ ಕಾರ್ಯ ನನೆಗುದಿಗೆ ಬಿದ್ದಿತ್ತು.
ಗತವೈಭವಕ್ಕೆ ಮರಳಲು ಕಾಯುತ್ತಿದೆಯಾ ಮಡಿಕೇರಿ ಅರಮನೆ?
ಪ್ರವಾಸಿಗರ ಸ್ವಾಗತಕ್ಕೆ ಸಜ್ಜಾದ ಕೋಟೆ
ಇದೀಗ ಇಲಾಖೆಯು ಕೋಟೆಯೊಳಗಿನ ಅರಮನೆಗೆ ಕಾಯಕಲ್ಪ ನೀಡುವ ಕಾರ್ಯಕ್ಕೆ ಮುಂದಾಗಿದ್ದು, ಪ್ರವಾಸಿಗರಿಗೆ ಸಂತಸದ ಸಂಗತಿ. ಕಾಯಕಲ್ಪ ಕಾರ್ಯ ಆರಂಭವಾಗಿದ್ದು, ಈಗಾಗಲೇ ಅರಮನೆಯ ಹಳತಾದ ಮರಮುಟ್ಟು, ಚಾವಣಿ, ಹೆಂಚುಗಳನ್ನು ಬದಲಾಯಿಸುವ ಕಾರ್ಯ ನಡೆಯುತ್ತಿದೆ. ಸರ್ಕಾರಿ ಕಚೇರಿಗಳಿಗಾಗಿ ಮಾಡಿಕೊಂಡಿದ್ದ ಮಾರ್ಪಾಟುಗಳನ್ನು ಸಂಪೂರ್ಣ ಕಳಚಿ ಹಿಂದೆ ಇದ್ದ ಸ್ಥಿತಿಗೆ ತರುವ ಕಾರ್ಯ ನಡಯುತ್ತಿದೆ. ಈಗಾಗಲೇ ಭಾಗಶಃ ಕೆಲಸ ಪೂರ್ಣಗೊಂಡಿದ್ದು ಇನ್ನುಳಿದ ಕೆಲಸಗಳನ್ನು ಮುಗಿಸಲು ಮಳೆ ಅಡಚಣೆ ಆಗಿದೆ. ಅಂತು ಮುಂದಿನ ಎರಡು ತಿಂಗಳಿನಲ್ಲಿ ಐತಿಹಾಸಿಕ ಕೋಟೆ ತನ್ನ ಗತ ವೈಭವವನ್ನು ಪಡೆಯಲಿದ್ದು, ಪ್ರವಾಸಿಗರ ಸ್ವಾಗತಕ್ಕೆ ಸಜ್ಜಾಗುತ್ತಿದೆ.