ಕೊಡಗಿನ ಕಾಫಿ ತೋಟಗಳಲ್ಲಿ ಪೊಲೀಸರಿಂದ ವಲಸಿಗರ ಪರಿಶೀಲನೆ
ಕೊಡಗು, ಜನವರಿ 23: ಕೊಡಗಿನಲ್ಲಿ ಉಗ್ರರ ವಾಸ್ತವ್ಯದ ಶಂಕೆ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ಕೊಡಗಿನ ಕಾಫಿ ತೋಟಗಳಲ್ಲಿರುವ ವಲಸಿಗರ ಗುರುತು ಪರಿಶೀಲನಾ ಕಾರ್ಯವನ್ನು ಕೈಗೊಂಡಿದ್ದಾರೆ.
ಕೊಡಗು ಜಿಲ್ಲಾ ಪೊಲೀಸರಿಂದ ಜಿಲ್ಲೆಯಲ್ಲಿ ನೆಲೆಸಿರುವ ವಲಸಿಗರ ದಾಖಲಾತಿಗಳ ಪರಿಶೀಲನೆ ನಡೆಯುತ್ತಿದ್ದು, ಜಿಲ್ಲೆ ಹಾಗೂ ದೇಶದ ಭದ್ರತಾ ಹಿತದೃಷ್ಟಿಯಿಂದ ದಾಖಲಾತಿ ಪರಿಶೀಲನೆಯಲ್ಲಿ ತೊಡಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜೊತೆಗೆ ಕಾಫಿ ತೋಟಗಳಲ್ಲಿ ಅಸ್ಸಾಂ, ಬಾಂಗ್ಲಾದ ಅಕ್ರಮ ವಲಸಿಗರು ನೆಲೆಸಿದ್ದಾರೆ ಎಂಬ ದೂರು ಕೇಳಿಬಂದ ಮೇರೆಗೆ ಹಾಗೂ ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಉಗ್ರ ಚಟುವಟಿಕೆ ಸುಳಿವು ಹಿನ್ನೆಲೆ ಕೊಡಗು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸುಮನ್ ಡಿ ಪನ್ನೇಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಕಾಫಿ ಎಸ್ಟೇಟ್ಗಳಲ್ಲಿ ನೆಲೆಸಿರುವ ಹೊರ ರಾಜ್ಯಗಳ ಕಾರ್ಮಿಕರ ದಾಖಲೆ ಪರಿಶೀಲನೆ ನಡೆದಿದೆ. ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ತಾಲ್ಲೂಕುಗಳಲ್ಲಿ ನೂರಾರು ಮಂದಿಯ ದಾಖಲೆ ಪರಿಶೀಲನೆ ಸಾಗುತ್ತಿದೆ.
ದಾಖಲಾತಿ ಹೊಂದಿಲ್ಲದ ಬಗ್ಗೆ ಅನುಮಾನವಿರುವ ವ್ಯಕ್ತಿಗಳನ್ನು ಕರೆತಂದು ದಾಖಲೆ ಪರಿಶೀಲನೆ ನಡೆಸಲಾಗುವುದು.
ಮೂರೂ ತಾಲ್ಲೂಕುಗಳಲ್ಲಿ ಆನ್ಲೈನ್ ಮೂಲಕ ಆಧಾರ್, ಓಟರ್ ಐಡಿ, ಡಿಎಲ್, ಪಾನ್ ಮೊದಲಾದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ವಲಸಿಗರ ಮೇಲೆ ಹೆಚ್ಚಿನ ನಿಗಾ ಇಡಲು, ವಲಸಿಗರಿಂದ ಅಪರಾಧ ಪ್ರಕರಣಗಳು ನಡೆಯದಂತೆ ತಡೆಯಲು ಕ್ರಮವಹಿಸಲಾಗಿದೆ. ಈ ಕಾರ್ಯಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಅವರಿಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.












Click it and Unblock the Notifications