ಸಾಧುಗಳ ಸೋಗಿನಲ್ಲಿ ಬಂದು ಬೂದಿ ನೀಡಿದವರೀಗ ಪೊಲೀಸರ ಅತಿಥಿ
ಮಡಿಕೇರಿ, ಡಿಸೆಂಬರ್ 3: ಸಾಧುಗಳ ವೇಷದಲ್ಲಿ ಕೊಡಗಿಗೆ ಬಂದಿದ್ದ ಈ ಗುಂಪು ಮನೆ, ಅಂಗಡಿಗಳಿಗೆ ತೆರಳಿ ಆಶೀರ್ವಾದ ನೀಡಿ ಹಣ ಸಂಗ್ರಹಿಸಿದ್ದಲ್ಲದೇ ಭಾರೀ ಹಣವನ್ನು ಲಪಟಾಯಿಸಲು ಪ್ಲಾನ್ ಕೂಡ ಮಾಡಿಕೊಂಡು ಬಂದಿತ್ತು.
ಅಷ್ಟಕ್ಕೂ ಇವರ ಮೋಸ ಬಯಲಿಗೆ ಬಂದಿರುವುದು ನವೆಂಬರ್ 24ರಂದು ಕುಶಾಲನಗರದ ಉದ್ಯಮಿಯನ್ನು ಮರುಳು ಮಾಡಿ 20 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಮತ್ತು ನಗದು ಎಗರಿಸಿದ್ದ ಪ್ರಕರಣದಿಂದ. ಇದೀಗ ಪೊಲೀಸರು ಈ ಆರೋಪಿಗಳನ್ನು ಬಂಧಿಸಿದ್ದಾರೆ.
ಫೈನಾನ್ಷಿಯರ್ ಗೆ ಪಂಗನಾಮ ಹಾಕಿದ್ದರು
ಕಳೆದ 24ರಂದು ಪಟ್ಟಣದ ಜನಶ್ರೀ ಫೈನಾನ್ಸ್ ಗೆ ಬಂದಿದ್ದ ಸ್ವಾಮಿ ವೇಷಧಾರಿಗಳಿಬ್ಬರು ಫೈನಾನ್ಸ್ ಮಾಲೀಕ ಬಿ.ಎ.ನಾಗೇಗೌಡ ಅವರ ಕೈಗೆ ಕೆಂಪು ಪುಡಿ ನೀಡಿ ಮರುಳು ಮಾಡಿ ಅವರ ಬೆಲೆಬಾಳುವ ಮೊಬೈಲ್ ಮತ್ತು ನಗದು ಅಪಹರಿಸಿದ್ದರು. ಅದನ್ನು ಸ್ವತಃ ನಾಗೇಗೌಡ ಅವರೇ ಈ ಕಳ್ಳರ ಕೈಗೆ ನೀಡಿದ್ದರು. ಅಂದು ಇಡೀ ದಿನ ವಶೀಕರಣದ ಪ್ರಭಾವದಲ್ಲೇ ಇದ್ದ ನಾಗೇಗೌಡ ಅವರಿಗೆ ಮಾರನೇ ದಿನ ತಮ್ಮ ಬಳಿ ಮೊಬೈಲ್ ಇಲ್ಲದಿರುವುದು ಗಮನಕ್ಕೆ ಬಂದಿದೆ. ನಂತರ ಫೈನಾನ್ಸ್ ಗೆ ತೆರಳಿ ಸಿಸಿ ಟಿವಿ ಪರಿಶೀಲಿಸಿದಾಗ ತಾವೇ ಕೈಯಾರೆ ಮೊಬೈಲ್ ನ ಸಿಮ್ ಬಿಚ್ಚಿಕೊಂಡು ಮೊಬೈಲನ್ನು ಸಾಧುಗಳಿಗೆ ನೀಡಿರುವುದು, ಜತೆಗೆ 5 ಸಾವಿರದಷ್ಟು ಹಣವನ್ನು ನೀಡಿರುವುದೂ ದಾಖಲಾಗಿದೆ.
ಬೂದಿ ಕೊಟ್ಟು ಹಣದೊಂದಿಗೆ ಮಾಯವಾದ ನಾಗಾ ಸಾಧು!
ರಾಸಾಯನಿಕ ಪುಡಿಯಿಂದ ಎಲ್ಲವೂ ಸರಾಗ
ಈ ಸಾಧು ವೇಷಧಾರಿಗಳು ಮತ್ತು ಬರುವ ಪುಡಿಯೊಂದನ್ನು ಸಿಂಪಡಿಸಿ ವಶೀಕರಣಕ್ಕೆ ಒಳಪಡಿಸಿಕೊಂಡಿರುವುದು ಸಿಸಿ ಟಿವಿ ಮೂಲಕ ತಿಳಿದುಬಂದಿದೆ. ಈ ಘಟನೆ ನಡೆಯುವಾಗ ನಾಗೇಗೌಡರ ಸ್ನೇಹಿತರೊಬ್ಬರು ಅಲ್ಲಿಗೆ ಬಂದಿದ್ದರೂ ಅವರಿಗೂ ಈ ವಂಚಕರ ವಂಚನೆ ಗೊತ್ತಾಗಲಿಲ್ಲ.
ಎಲ್ಲಿಂದ ಬಂದವರು?
ಈ ಕಳ್ಳರೆಲ್ಲರೂ ರಾಜಸ್ಥಾನ ಮೂಲದವರು. ಅಲ್ಲಿಂದಲೇ ಬಾಡಿಗೆಗೆ ಕಾರನ್ನು ಪಡೆದುಕೊಂಡು ರಾಜ್ಯಕ್ಕೆ ಬಂದಿದ್ದಾರೆ. ಜತೆಯಲ್ಲಿ ರಾಸಾಯನಿಕ ಪುಡಿಯನ್ನೂ ಇಟ್ಟುಕೊಂಡಿದ್ದು, ಜನರನ್ನು ಮರಳು ಮಾಡಿ ಬೆಲೆ ಬಾಳುವ ವಸ್ತುಗಳನ್ನು ದೋಚುವುದೇ ಇವರ ಕಾರ್ಯ ವಿಧಾನ. ಬಂಧಿತರನ್ನು ನಾಗನಾಥ್, ಮಜೂರ್ ನಾಥ್, ಸುರಬ್ ನಾಥ್ ಮತ್ತು ಉಮೇಶ್ ನಾಥ್ ಎಂದು ಗುರ್ತಿಸಲಾಗಿದೆ. ಇವರು ಬಳಸುತ್ತಿದ್ದ ರಾಸಾಯನಿಕ ಪುಡಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದೆ.
ವಿಧವೆ ಮದುವೆಯಾಗುವೆನೆಂದು ಬಂದ, ಸರ ದೋಚಿ ಎಸ್ಕೇಪ್ ಆದ
ಹೆಡೆಮುರಿ ಕಟ್ಟಿದ ಪೊಲೀಸರು
ಆರೋಪಿಗಳು ಕುಶಾಲನಗರಿಂದ ಹೊರಹೋಗುವ ಸಂದರ್ಭ ಮೈಸೂರು- ಕೊಡಗಿನ ಗಡಿಯ ಕೊಪ್ಪ ತಪಾಸಣಾ ಗೇಟ್ ನಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ನಾಗೇಗೌಡ ಅವರು ಕೊಟ್ಟಿದ್ದ ದೂರಿನ ಮೇರೆಗೆ ಕಾರ್ಯ ಪ್ರವೃತ್ತರಾದ ಕುಶಾಲನಗರ ಡಿವೈಎಸ್ ಪಿಪಿಕೆ ಮುರಳೀಧರ್ ಮತ್ತು ತಂಡ ಸಾಕಷ್ಟು ಹುಡುಕಾಟ ನಡೆಸಿ ಕೊನೆಗೂ ಸೋಮವಾರ ತಂಡದ ಹೆಡೆಮುರಿ ಕಟ್ಟಿದೆ.