ಕೊಡಗಿನಲ್ಲಿ ಏಕಾಏಕಿ ನಿಂತ ಮಳೆ; ಮಳೆ ನಿಂತರೂ ಕುಸಿಯುತ್ತಿದೆ ರಸ್ತೆ
ಮಡಿಕೇರಿ, ಆಗಸ್ಟ್ 12: ಕೊಡಗು ಜಿಲ್ಲೆಯಲ್ಲಿ ಮಳೆಯೇನೋ ಕೊಂಚ ಕಡಿಮೆಯಾದಂತೆ ಕಾಣುತ್ತಿದೆ. ನದಿಗಳ ನೀರಿನ ಮಟ್ಟವೂ ಇಳಿಕೆಯಾಗಿ ಪ್ರವಾಹವೂ ತಗ್ಗಿದೆ. ಆದರೆ ಮಳೆಯ ಪರಿಣಾಮ ಮಾತ್ರ ಇನ್ನೂ ನಿಂತಿಲ್ಲ.
ಕೆಲವೆಡೆ ಸತತ ವಾರದಿಂದ ಸುರಿದ ಭಾರೀ ಮಳೆಯಿಂದ ಒದ್ದೆಯಾದ ಭೂಮಿ ಕುಸಿಯುತ್ತಿದೆ. ಹೀಗಾಗಿ ಮಳೆ ನಿಂತರೂ ಜನರಲ್ಲಿ ಆತಂಕ ಮಾತ್ರ ಇದ್ದೇ ಇದೆ. ಇದರ ಜೊತೆಗೆ ಮಳೆ ಉಳಿಸಿ ಹೋದ ಹಾನಿಯನ್ನು ಸರಿಪಡಿಸಿಕೊಳ್ಳುವುದೂ ಜನರಿಗೆ ಇದೀಗ ಸವಾಲೆನಿಸಿದೆ. ಕೆಲವರ ಮನೆಗೆ ಹಾನಿಯಾಗಿದ್ದರೆ, ಕೆಲವರು ಬೆಳೆ ಕಳೆದುಕೊಂಡಿದ್ದಾರೆ. ಜೊತೆಗೆ ಅಲ್ಲಲ್ಲಿ ಬರೆ ಕುಸಿತದಂಥ ಅವಘಡಗಳು ಇನ್ನೂ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕುಸಿಯುತ್ತಿರುವ ಗುಹ್ಯಾ ರಸ್ತೆ
ಸಿದ್ದಾಪುರದಿಂದ ಗುಹ್ಯ ಗ್ರಾಮದ ಸಂಪರ್ಕ ಕಲ್ಪಿಸುವ ರಸ್ತೆ ಕ್ಷಣ ಕ್ಷಣಕ್ಕೂ ಕುಸಿಯುತ್ತಿದೆ. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸಲು ಸ್ಥಳೀಯ ನಿವಾಸಿಗಳು ಹಿಂದೇಟು ಹಾಕುತ್ತಿದ್ದಾರೆ. ವಾರದ ಮಳೆಯಿಂದಾಗಿ ಪ್ರವಾಹದ ನೀರಿನಿಂದ ರಸ್ತೆ ಸಡಿಲಗೊಂಡಿದ್ದು, ಇದೀಗ ಕುಸಿಯುತ್ತಲೇ ಇದೆ. ಹೀಗಾಗಿ ಮಳೆ ನೀಂತರೂ ಜನರ ಭಯ ಮಾತ್ರ ನಿಂತಿಲ್ಲ.

ಮನೆಗಳ ಸ್ವಚ್ಛತೆಗೆ ಮುಂದಾಗಿರುವ ಜನ
ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಎಲ್ಲವೂ ಅಲ್ಲೋಲ ಕಲ್ಲೋಲವಾಗಿದೆ. ಮಳೆಯಿಂದ ಕಾವೇರಿ ನದಿ ಉಕ್ಕಿ ಹರಿದು ಹಲವು ಗ್ರಾಮಗಳು ಪ್ರವಾಹದಲ್ಲಿ ಮುಳುಗಿ ಹೋಗಿದ್ದವು. ಇದೀಗ ನೀರು ಇಳಿದಿದ್ದು, ಜನರು ಮನೆಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮನೆಯಲ್ಲಿರು ವಸ್ತುಗಳನ್ನು ತೆಗೆದು ಶುದ್ಧಗೊಳಿಸುತ್ತಿದ್ದಾರೆ.

ಮನೆಗಳತ್ತ ಮುಖ ಮಾಡಿದ ಜನ
ಕೊಡಗಿನಲ್ಲಿ ಮಳೆ ಬಿರುಸು ಪಡೆಯುತ್ತಿದ್ದಂತೆ ಪ್ರವಾಹದ ಆತಂಕ ಎದುರಾಗಿ ಜನರು ಮನೆ ತೊರೆದಿದ್ದರು. ಕೊಡಗಿನ ಕುಶಾಲನಗರದ ಹಲವು ಬಡಾವಣೆಗಳು, ನಾಪೋಕ್ಲು ಸಮೀಪದ ಚೆರಿಯಪರಂಬು, ಸಿದ್ದಾಪುರ ಕರಡಿಗೋಡು, ಕುಂಬಾರಗುಂಡಿ, ಬೆಟ್ಟದಕಾಡು, ಗುಹ್ಯ ಸೇರಿದಂತೆ ಹಲವು ಗ್ರಾಮಗಳು ಪ್ರವಾಹದ ನೀರಿನಲ್ಲಿ ಮುಳುಗಿದ್ದವು. ಈಗ ನೀರಿನ ಪ್ರಮಾಣ ಕಡಿಮೆ ಆಗಿದೆ. ಹೀಗಾಗಿ ಜನರು ತಮ್ಮ ಮನೆಗಳತ್ತ ಮುಖ ಮಾಡಿದ್ದಾರೆ.

ಬಡಾವಣೆಗಳಲ್ಲಿ ಬ್ಲೀಚಿಂಗ್ ಸಿಂಪಡಣೆ
ಪ್ರವಾಹದ ನೀರು ತಗ್ಗಿದ್ದರೂ ಆ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಹೀಗಾಗಿ ಕುಶಾಲನಗರ ಪಟ್ಟಣ ಪಂಚಾಯಿತಿ ಸಿಬ್ಬಂದಿ ಪ್ರತೀ ಬೀದಿಗಳಿಗೆ ಬ್ಲೀಚಿಂಗ್ ಸಿಂಪಡಿಸುತ್ತಿದ್ದಾರೆ. ಪ್ರವಾಹದಲ್ಲಿ ಕೆಸರು ಕಸಕಡ್ಡಿ ತೇಲಿ ಬಂದಿದ್ದು, ಸಾಂಕ್ರಾಮಿಕ ರೋಗ ತಡೆಯುವ ಉದ್ದೇಶದಿಂದ ಪ್ರತೀ ಬಡಾವಣೆಯಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ಬ್ಲೀಚಿಂಗ್ ಸಿಂಪಡಣೆ ಮಾಡಿದ್ದಾರೆ.












Click it and Unblock the Notifications