ಕೊಡಗಿನ ಜನರನ್ನು ಕಂಗೆಡಿಸುತ್ತಿದೆ ಭಾರೀ ಗಾಳಿ, ಮಳೆ!

ಮಡಿಕೇರಿ,ಜುಲೈ 14 : ಕೊಡಗಿನಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರೆದಿದೆ. ಈ ಬಾರಿ ಮಳೆ ಜತೆಯಲ್ಲಿಯೇ ಭಾರಿ ಗಾಳಿ ಬೀಸುತ್ತಿರುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಕಾರಣ ಜಿಲ್ಲೆಯಲ್ಲಿರುವ ಹೆಚ್ಚಿನವರ ಮನೆ ತೋಟಗಳ ಮಧ್ಯೆ, ಮರಗಳ ನಡುವೆ ಇದೆ. ಹೀಗಿರುವಾಗ ಮಳೆಗಾಳಿಗೆ ಮರಗಳು ಉರುಳಿ ಬಿದ್ದರೆ ಎಂಬ ಭಯ ಎಲ್ಲರನ್ನು ಕಾಡಲಾರಂಭಿಸಿದೆ.

ಈಗಾಗಲೇ ಜಿಲ್ಲೆಗೊಂದು ಸುತ್ತುಹೊಡೆದರೆ ಅಲ್ಲಲ್ಲಿ ಕುಸಿದ ಮನೆಗಳು, ಗುಡ್ಡ, ಬರೆ(ಮನೆಯ ಹಿಂಭಾಗದ ಎತ್ತರದ ಪ್ರದೇಶ)ಗಳು, ಎಲ್ಲೆಂದರಲ್ಲಿ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳ, ಹೊಳೆ, ತೊರೆಗಳು, ನದಿಗಳು, ಜಲಾವೃತವಾದ ಭತ್ತದ ಪ್ರದೇಶಗಳು, ತೋಟಗಳು, ಮುರಿದು ಬಿದ್ದ ವಿದ್ಯುತ್ ಕಂಬಗಳು ಹೀಗೆ ಹತ್ತಾರು ಅನಾಹುತಕಾರಿ ದೃಶ್ಯಗಳು ಕಣ್ಮುಂದೆ ಬಂದು ನಿಲ್ಲುತ್ತದೆ.

ಕಳೆದ ಬಾರಿ ಈ ವೇಳೆಗೆ ಮಳೆ ಹೆಚ್ಚು ಸುರಿದಿರಲಿಲ್ಲ. ತದ ನಂತರ ಹಿಂಗಾರು ಮಳೆ ಬಿರುಸುಪಡೆದುಕೊಂಡು ಡಿಸೆಂಬರ್ ತನಕವೂ ಮಳೆ ಸುರಿದಿತ್ತು. ಈ ಬಾರಿ ಬೇಸಿಗೆಯ ಅವಧಿಯಲ್ಲಿ ಮಳೆ ಪ್ರಮಾಣ ಕಡಿಮೆಯಿತ್ತಲ್ಲದೆ, ಜೂನ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯಲಿಲ್ಲ. ಆದರೆ ಜುಲೈ ಮೊದಲ ದಿನದಿಂದಲೇ ಮಳೆ ಬಿರುಸು ಪಡೆದುಕೊಂಡಿದ್ದು, ಜುಲೈ, 01 ರಿಂದ ಇಲ್ಲಿವರೆಗೆ ಜಿಲ್ಲೆಯಲ್ಲಿ ಸರಾಸರಿ 50 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ.

ಅದರ ಪರಿಣಾಮ ಬಹಳಷ್ಟು ಹಾನಿಗಳು ಆಗಿದ್ದು, ಜಿಲ್ಲೆಯಲ್ಲಿ 2 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. 15 ಮನೆಗಳು ತೀವ್ರವಾಗಿ, ಮತ್ತು 63 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮಡಿಕೇರಿ ಮತ್ತು ವಿರಾಜಪೇಟೆಯಲ್ಲಿ ಎರಡು ಮನೆಗಳು ಸಂಪೂರ್ಣ ಹಾನಿಯಾಗಿದೆ. ತೀವ್ರವಾಗಿ ಮಡಿಕೇರಿ ತಾಲ್ಲೂಕಿನಲ್ಲಿ 4, ಸೋಮವಾರಪೇಟೆ ತಾಲ್ಲೂಕಿನಲ್ಲಿ 2, ಕುಶಾಲನಗರ ತಾಲ್ಲೂಕಿನಲ್ಲಿ 5, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನಲ್ಲಿ ತಲಾ 2 ಮನೆಗಳು ಹಾನಿಯಾಗಿವೆ.

 ಪ್ರವಾಹ ಭೀತಿಯಿರುವ ಸ್ಥಳದ ಜನರ ಸ್ಥಳಾಂತರ

ಪ್ರವಾಹ ಭೀತಿಯಿರುವ ಸ್ಥಳದ ಜನರ ಸ್ಥಳಾಂತರ

ಇನ್ನು ಮನೆಗಳಿಗೆ ಭಾಗಶಃ ಹಾನಿಯಾಗಿರುವುದನ್ನು ನೋಡುವುದಾದರೆ, ಮಡಿಕೇರಿ ತಾಲ್ಲೂಕಿನಲ್ಲಿ 20, ಸೋಮವಾರಪೇಟೆ ತಾಲ್ಲೂಕಿನಲ್ಲಿ 3, ಕುಶಾಲನಗರ ತಾಲ್ಲೂಕಿನಲ್ಲಿ 23, ವಿರಾಜಪೇಟೆ ತಾಲ್ಲೂಕಿನಲ್ಲಿ 9, ಪೊನ್ನಂಪೇಟೆ ತಾಲ್ಲೂಕಿನಲ್ಲಿ 8 ಮನೆಗಳು ಹಾನಿಯಾಗಿದೆ. ಹಾಗೆಯೇ 4 ಜಾನುವಾರುಗಳು ಮೃತಪಟ್ಟಿವೆ. ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಪ್ರವಾಹ ಸಂಭವಿಸಬಹುದಾದ ಸ್ಥಳದ ಸಂತ್ರಸ್ತರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದು, ಮಡಿಕೇರಿಯಲ್ಲಿ ರೆಡ್‌ಕ್ರಾಸ್ ಭವನ, ಕೊಯನಾಡು ಮಹಾಗಣಪತಿ ದೇವಾಲಯದ ಸಭಾಂಗಣ, ವಿರಾಜಪೇಟೆ ತಾಲ್ಲೂಕಿನ ಸೆಂಟ್ ಆನ್ಸ್ ಮತ್ತು ತೋಮರ ಶಾಲೆ, ಕುಶಾಲನಗರ ತಾಲ್ಲೂಕಿನ ಪೊನ್ನತ್ ಮೊಟ್ಟೆ ಹೀಗೆ 5 ಪರಿಹಾರ ಕೇಂದ್ರವನ್ನು ತೆರೆಯಲಾಗಿದೆ.

 ಅಪಾಯದ ಅಂಚಿನಲ್ಲಿರುವ ನಿವಾಸಿಗಳಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ

ಅಪಾಯದ ಅಂಚಿನಲ್ಲಿರುವ ನಿವಾಸಿಗಳಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ

ಇದೆಲ್ಲದರ ಮಳೆಯಿಂದ ಮನೆ ಹಾನಿಗೊಳಗಾದ ಹಾಗೂ ಅಪಾಯದ ಅಂಚಿನಲ್ಲಿರುವ ನಿವಾಸಿಗಳಿಗೆ ಜಿಲ್ಲಾಡಳಿತ, ರೆಡ್‌ಕ್ರಾಸ್ ಸಂಸ್ಥೆ ಮತ್ತು ಮಡಿಕೇರಿ ನಗರಸಭೆ ಕಾಳಜಿ ಕೇಂದ್ರ ಪ್ರಾರಂಭಿಸಿದ್ದು, ಮಡಿಕೇರಿಯ ಸ್ಟೀವರ್ಟ್ ಹಿಲ್ ನಲ್ಲಿರುವ ಕೊಡಗು ರೆಡ್‌ಕ್ರಾಸ್ ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರ ಪ್ರಾರಂಭವಾಗಿದ್ದು, ಇಲ್ಲಿ 16 ಮಂದಿ ಆಶ್ರಯ ಪಡೆದಿದ್ದಾರೆ. ಮಡಿಕೇರಿಯ 3, ಹೆಬ್ಬಟ್ಟಗೇರಿಯ 1 ಕುಟುಂಬವನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿರುವ 16 ಮಂದಿಗೆ ಊಟ, ತಿಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ರೆಡ್‌ಕ್ರಾಸ್ ವತಿಯಿಂದ ಕಾಳಜಿ ಕೇಂದ್ರದಲ್ಲಿರುವವರ ಆರೋಗ್ಯವನ್ನು ತಪಾಸಣೆ ಮಾಡಲಾಗುತ್ತಿದೆ. ಮಡಿಕೇರಿ ತಾಲೂಕಿನ ಸಂಪಾಜೆ ಹೋಬಳಿ ಕೊಯನಾಡುನಲ್ಲಿ ಕಿಂಡಿ ಅಣೆಕಟ್ಟಿನಲ್ಲಿ ಹೆಚ್ಚಿನ ನೀರಿನ ಹರಿವಿನಿಂದಾಗಿ 4 ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು ಅವರನ್ನು ಶ್ರೀ ಗಣಪತಿ ದೇವಸ್ಥಾನದ ಕಲಾಮಂದಿರದ ಸಭಾಭವನದಲ್ಲಿ ತೆರಯಲಾದ ಕಾಳಜಿ ಕೇಂದ್ರದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

 ಹೆಚ್ಚು ಮಳೆ ಭೀತಿ, ಸಹಾಯವಾಣಿ ತೆರೆದ ಜಿಲ್ಲಾಡಳಿತ

ಹೆಚ್ಚು ಮಳೆ ಭೀತಿ, ಸಹಾಯವಾಣಿ ತೆರೆದ ಜಿಲ್ಲಾಡಳಿತ

ಮಳೆಯಿಂದಾಗಿ ರಸ್ತೆ, ಸೇತುವೆ ಹಾನಿ ಸಂಬಂಧಿಸಿದಂತೆ ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆ, ಗ್ರಾಮೀಣ ರಸ್ತೆಗಳು, ಸೇತುವೆಗಳಿಗೆ ಹಾನಿಯಾಗಿದೆ. ಆ ಪೈಕಿ 84 ಶಾಲೆಗಳು, 2 ಅಂಗನವಾಡಿ ಕೇಂದ್ರಗಳಿಗೆ ಹಾನಿಯಾಗಿದೆ. ಗಾಳಿ ಮಳೆಯಿಂದ 1,116 ವಿದ್ಯುತ್ ಕಂಬಗಳು ಹಾಗೂ 132 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಇದುವರೆಗೆ ಸುರಿದ ಮಳೆಯ ಪ್ರಮಾಣವನ್ನು ಗಮನಿಸಿದರೆ ಇಲ್ಲಿವರೆಗೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ.

ಮುಂದಿನ ದಿನಗಳು ಕೊಡಗಿನಲ್ಲಿ ಹೆಚ್ಚಿನ ಮಳೆ ಸುರಿಯುವ ದಿನಗಳಾಗಿರುವುದರಿಂದ ಭಯದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜಿಲ್ಲಾಡಳಿತ ವತಿಯಿಂದ ದಿನದ 24 ಗಂಟೆ ಸಹಾಯವಾಣಿ ಕೇಂದ್ರ ತೆರೆಯಲಾಗಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ 0872-221077, ವಾಟ್ಸ್ಆಫ್ ಸಂಖ್ಯೆ 8550001077 ಗೆ ಮಳೆ ಹಾನಿ ಸಂಬಂಧ ಮಾಹಿತಿ ಹಂಚಿಕೊಳ್ಳಬಹುದಾಗಿದೆ.

 ತಾಲೂಕು ಮಟ್ಟದಲ್ಲೂ ಸಹಾಯವಾಣಿ ಕೇಂದ್ರ

ತಾಲೂಕು ಮಟ್ಟದಲ್ಲೂ ಸಹಾಯವಾಣಿ ಕೇಂದ್ರ

ಹಾಗೆಯೇ ತಾಲ್ಲೂಕುವಾರು ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಮಡಿಕೇರಿ ತಾಲ್ಲೂಕು 08272-228396, ಮಡಿಕೇರಿ ನಗರಸಭೆ ವ್ಯಾಪ್ತಿ 08272-220111, ವಿರಾಜಪೇಟೆ ತಾಲ್ಲೂಕು 08274-256328, ಸೋಮವಾರಪೇಟೆ ತಾಲ್ಲೂಕು 08276-282045 ನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಮಳೆಯಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಅಡಚಣೆಗಳು ಉಂಟಾಗುತ್ತಿದ್ದು, ವಿದ್ಯುತ್ ಅವಘಡಗಳು ಉಂಟಾಗುವ ಸಾಧ್ಯತೆ ಹೆಚ್ಚಿರುವುದರಿಂದ ಸಾರ್ವಜನಿಕರು ಯಾವುದೇ ರೀತಿಯ ವಿದ್ಯುತ್ ಜಾಲದ ವ್ಯತ್ಯಯಗಳನ್ನು ಗಮನಿಸಿದಲ್ಲಿ, ಸ್ವತಃ ಕ್ರಮಕೈಗೊಳ್ಳದೇ (ವಿದ್ಯುತ್ ತಂತಿಗಳನ್ನು ಸ್ಪರ್ಶಿಸದೇ) ತಕ್ಷಣ ಮಾಹಿತಿ ನೀಡಲು ಕೊಡಗು ಜಿಲ್ಲೆಯ (24X7) ಸರ್ವೀಸ್ ಸೆಂಟರ್‌ನ ದೂರವಾಣಿ ಸಂಖ್ಯೆ '1912' ಹಾಗೂ ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ 9449598665 ಕಲ್ಪಿಸಲಾಗಿದೆ.

ಒಟ್ಟಾರೆ ಕೊಡಗಿನಲ್ಲಿ ಮಳೆಯಿಂದ ಹತ್ತಾರು ಸಮಸ್ಯೆಗಳು ಎದುರಾಗುತ್ತಿದ್ದು, ಎಲ್ಲವನ್ನು ಎದುರಿಸಿ ಬದುಕುವುದು ಅನಿವಾರ್ಯವಾಗಿದೆ. ಹೀಗಾಗಿ ಜನರು ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕಾಗಿದೆ. ಏಕೆಂದರೆ ಮುಂದಿನ ದಿನಗಳು ಕೊಡಗಿನ ಪಾಲಿಗೆ ನಡುಮಳೆಗಾಲದ ದಿನಗಳಾಗಿದ್ದು, ಭಾರೀ ಮಳೆ ಸುರಿಯುವ ಸಾಧ್ಯತೆ ಹೆಚ್ಚಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+