ತಲಕಾವೇರಿ ನೂತನ ಬ್ರಹ್ಮಕಲಶೋತ್ಸವ ಸಮಿತಿಗೆ ಸಚಿವರಿಂದ ತಡೆ
ಮಡಿಕೇರಿ, ಜೂನ್ 1: ಇತ್ತೀಚೆಗೆ ರಚನೆಗೊಂಡ ತಲಕಾವೇರಿ ಬ್ರಹ್ಮಕಲಶೋತ್ಸವ ಸಮಿತಿಯ ಕುರಿತಂತೆ ಆಕ್ಷೇಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಸದ್ಯದ ಮಟ್ಟಿಗೆ ಸಮಿತಿಯನ್ನು ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರ ಆದೇಶದಂತೆ ತಡೆ ಹಿಡಿಯಲಾಗಿದೆ. ಮುಂದಿನ ಸಮಿತಿ ಶೀಘ್ರವೇ ರಚನೆಯಾಗಲಿದೆ ಎಂದು ತಿಳಿದು ಬಂದಿದೆ.
ಸುಮಾರು ಹನ್ನೆರಡು ವರ್ಷಕ್ಕೊಮ್ಮೆ ಅಷ್ಠಬಂಧ ಬ್ರಹ್ಮ ಕಲಶೋತ್ಸವ ನಡೆಯಲಿದ್ದು, ಈಗಾಗಲೇ ತಲಕಾವೇರಿಯಲ್ಲಿ ದೇವಾಲಯಗಳು ಜೀರ್ಣೋದ್ಧಾರಗೊಂಡು, ದೇವತಾ ಮೂರ್ತಿಗಳ ಪ್ರತಿಷ್ಠಾಪನೆಯಾಗಿ 12 ವರ್ಷಗಳು ಕಳೆದಿವೆ. ಹೀಗಾಗಿ ಅಷ್ಠಬಂಧ ಬ್ರಹ್ಮಕಲಶೋತ್ಸವ ನಡೆಸಬೇಕಾಗಿದೆ. ಈ ಸಂಬಂಧ ಬ್ರಹ್ಮಕಲಶೋತ್ಸವ ಸಮಿತಿಯನ್ನು ಮೇ.21ರಂದು ರಚಿಸಲಾಗಿತ್ತು.

ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಸೂಚನೆಯಂತೆ ಬ್ರಹ್ಮ ಕಲಶೋತ್ಸವ ನಡೆಸುವ ಸಂಬಂಧ ಸಮಿತಿಯೊಂದನ್ನು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಅನುಮೋದನೆಯಂತೆ ರಚಿಸಲಾಗಿತ್ತು. ಅದರಂತೆ ಕೊಡವ - ಅಮ್ಮಕೊಡವ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಬಿ. ದೇವಯ್ಯ ಸೇರಿದಂತೆ ಒಟ್ಟು 19 ಮಂದಿಯನ್ನೊಳಗೊಂಡ ನೂತನ ಸಮಿತಿಯು ಅಸ್ತಿತ್ವಕ್ಕೆ ಬಂದಿತ್ತು.
ಆದರೆ ಸಮಿತಿ ರಚನೆಗೊಂಡ ಬಳಿಕ ಸಣ್ಣದಾದ ಅಸಮಾಧಾನ ಆರಂಭವಾಗಿ ಸಮಿತಿಗೆ ಆಯ್ಕೆಗೊಂಡ ಸದಸ್ಯರ ಬಗ್ಗೆ ಆಕ್ಷೇಪಗಳು ಕೇಳಿ ಬಂದಿದ್ದವು. ಕೆಲವರು ತಮ್ಮನ್ನು ಸೇರ್ಪಡೆಗೊಳಿಸಿಲ್ಲ ಎಂಬ ಆರೋಪವನ್ನು ಮಾಡತೊಡಗಿದ್ದರು. ಒಮ್ಮತವಿಲ್ಲದ ಸಮಿತಿಯನ್ನು ಮುಂದುವರೆಸುವುದು ಅಸಾಧ್ಯವಾದ ಹಿನ್ನಲೆಯಲ್ಲಿ ಹಾಗೂ ಸಮಿತಿಯ ಬಗ್ಗೆಯೇ ಆಕ್ಷೇಪಗಳು ಸರ್ಕಾರಕ್ಕೆ ಸಲ್ಲಿಕೆಯಾದ ಕಾರಣದಿಂದಾಗಿ ಇದೀಗ ಉಸ್ತುವಾರಿ ಸಚಿವರು ಸಮಿತಿಯನ್ನು ತಡೆಹಿಡಿಯುವಂತೆ ಆದೇಶಿಸಿದ್ದಾರೆ.
ಮುಂದೆ ಒಂದಷ್ಟು ಬದಲಾವಣೆಯೊಂದಿಗೆ ಸಮಿತಿ ಅಸ್ತಿತ್ವಕ್ಕೆ ಬರುವ ಸಾಧ್ಯತೆಯಿದೆ. ಜತೆಗೆ ಎಲ್ಲರಿಗೂ ಪ್ರಾಧಾನ್ಯತೆ ನೀಡಲೇ ಬೇಕಾಗಿರುವುದರಿಂದ ಈಗಿರುವ ಸಮಿತಿಯ ಸದಸ್ಯರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಇನ್ನು ಮುಂದೆಯಾದರೂ ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ಸಮಿತಿ ರಚನೆಯಾಗಲಿ. ಈ ಮೂಲಕ ತಲಕಾವೇರಿಯಲ್ಲಿ ನಡೆಯಬೇಕಾದ ಧಾರ್ಮಿಕ ಕಾರ್ಯಗಳು ಯಶಸ್ವಿಯಾಗಿ ನಡೆದು ನಾಡಿಗೆ ಸುಭೀಕ್ಷೆಯಾಗಲಿ ಎನ್ನುವುದು ಇಲ್ಲಿನ ಸಾರ್ವಜನಿಕರ ಆಶಯವಾಗಿದೆ.












Click it and Unblock the Notifications