ಸಂಸದ ಪ್ರತಾಪ್ ಸಿಂಹಗೆ ಕೊಡಗಿನ ಪುಟ್ಟ ಬಾಲಕಿ ಬರೆದ ಭಾವನಾತ್ಮಕ ಪತ್ರ ವೈರಲ್
ಮಡಿಕೇರಿ, ಮಾರ್ಚ್ 3: ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಜಿಲ್ಲೆಯ ಪರಿಸರದ ಮೇಲೆ ನಡೆಯುತ್ತಿರುವ ದಾಳಿ ಮತ್ತು ಅದರಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಕೊಡಗಿನ ಪುಟಾಣಿಯೊಬ್ಬಳು ಸಂಸದ ಪ್ರತಾಪ್ ಸಿಂಹ ಅವರಿಗೆ ಬರೆದಿರುವ ಭಾವನಾತ್ಮಕ ಪತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪತ್ರಕ್ಕೆ ಪ್ರತಾಪ್ ಸಿಂಹ ಕೂಡ ಉತ್ತರ ಕೊಟ್ಟಿದ್ದು, ಬಾಲಕಿಯ ಸಾಮಾಜಿಕ ಕಳಕಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Recommended Video
ಕೊಡಗು ಜಿಲ್ಲೆಗೆ ರಾಷ್ಟ್ರೀಯ ಹೆದ್ದಾರಿ ಯೋಜನೆ, ರೈಲ್ವೆ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿರುವ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಪುಟ್ಟ ಬಾಲಕಿಯೊಬ್ಬಳು ಪತ್ರ ಬರೆದಿರುವುದು ಎಲ್ಲರ ಗಮನ ಸೆಳೆದಿದೆ.
ಸಂಸದರಿಗೆ ಬಾಲಕಿ ಬರೆದಿರುವ ಪತ್ರದ ಸಾರಾಂಶ ಹೀಗಿದೆ...
ಡಿಯರ್ ಪ್ರತಾಪ್ ಅಂಕಲ್...
ನೀವೆನಾ ನಮ್ಮ ಸಂಸದರು.
ಪ್ರವಾಸೋದ್ಯಮ ಎಂಬುದು 2005ರ ತನಕ ಇರಲಿಲ್ಲ. ಆದರೂ ಆಗೆಲ್ಲಾ ನಾವು ಚೆನ್ನಾಗಿಯೇ ಇದ್ದೆವು. ಆದರೆ ಈಗ ನೀವು ಜಾರಿಗೆ ತರಲು ಉದ್ದೇಶಿಸಿರುವ ಯೋಜನೆಗಳು ನಮ್ಮನ್ನು ಸಾಯಿಸುತ್ತಿವೆ.
ನೀವು ಒಬ್ಬ ಹೆಣ್ಣು ಮಗುವಿನ ತಂದೆ, ಅದೇ ರೀತಿ ನಾನು ಒಬ್ಬ ತಂದೆಯ ಮಗಳು. ಅಂಕಲ್ ನೀವು ಜಾರಿಗೊಳಿಸಲು ಉದ್ದೇಶಿಸಿರುವ ನ್ಯಾಷನಲ್ ಹೈವೇ ಯೋಜನೆಯಿಂದ ಕೊಡಗಿನಲ್ಲಿ ದೆಹಲಿಯ ಗುಪ್ತಾ ಅಂಕಲ್ ಗೆ ರೆಸಾರ್ಟ್ ಆರಂಭಿಸಲು ಸಹಾಯವಾಗುತ್ತದೆ. ಇದು ವೆಸ್ಟ್ ಬೆಂಗಾಲ್ನ ಶ್ಯಾಮ್ ಅಂಕಲ್ ಗೆ ಉದ್ಯೋಗ ನೀಡುತ್ತದೆ. ಅದೇ ರೀತಿ ಕೊಡಗಿನಲ್ಲಿ ನೀವು ಜಾರಿಗೆ ಮುಂದಾಗಿರುವ ರೈಲ್ವೆ ಯೋಜನೆಯಿಂದ ಕೇರಳದ ಇಬ್ರಾಹಿಂ ಅಂಕಲ್ ಗೆ ಕೊಡಗಿನಲ್ಲಿ ರೆಸ್ಟೋರೆಂಟ್ ತೆರೆಯಲು ಅನುಕೂಲವಾಗುತ್ತದೆ. ಇದು ಕೇರಳದ ಮನೋಹರ್ ಅಂಕಲ್ ಗೆ ಉದ್ಯೋಗ ನೀಡುತ್ತದೆ. ಅದೇ ರೀತಿ ಕೊಡಗಿನ ರಸ್ತೆ ಅಗಲೀಕರಣದ ನಿಮ್ಮ ಯೋಜನೆ ಜಾರಿಯಿಂದ ಕೇರಳದ ಜೋಸೆಫ್ ಅಂಕಲ್ ಗೆ ಬೇಕರಿ ತೆರೆಯಲು ಸಹಕಾರಿಯಾಗುತ್ತದೆ. ಇದು ಯಥಾಪ್ರಕಾರ ಕೇರಳದ ಮೊಹ್ಮದ್ ಕುನ್ನಿ ಅಂಕಲ್ ಗೆ ಉದ್ಯೋಗ ನೀಡುತ್ತದೆ.

ಈಗ ಹೇಳಿ, ಕೊಡಗಿನವರಿಗೆ ನಿಮ್ಮ ಈ ರಾಷ್ಟ್ರೀಯ ಹೆದ್ದಾರಿ, ರಸ್ತೆ ಅಗಲೀಕರಣ, ರೈಲು ಯೋಜನೆಗಳಿಂದ ಏನು ಪ್ರಯೋಜನ? ಪ್ರವಾಸೋದ್ಯಮದ ನೆಪದಲ್ಲಿ ಶೇ.18 ಮಂದಿಗೆ ಈ ಯೋಜನೆ ಅನುಕೂಲವಾಗಬಹುದು. ಆದರೆ ಯೋಜನೆ ಜಾರಿಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಅರಿವಿದೆಯಾ? ನಿಮಗೆ. ಈಗಾಗಲೇ ಕೊಡಗಿನಲ್ಲಿ ಮಳೆಯ ಪ್ರಮಾಣ 220 ಇಂಚುಗಳಿಂದ 170 ಇಂಚಿಗೆ ಕುಸಿದಿದೆ. ಈ ಪರಿಣಾಮ ಕಾಡು ಸದ್ಯದಲ್ಲೇ ಕಣ್ಮರೆಯಾಗಲಿದೆ.
ಕೇವಲ ಶೇ.18 ಜನರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ, ಕೊಡಗಿನಲ್ಲಿ ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಶೇ.82 ಜನರ ಜೀವನವನ್ನು ಬಲಿ ಕೊಡದಿರಿ. ಕೊಡಗಿನ ಪರಿಸರದ ಸಮತೋಲನ ಹಾಳು ಮಾಡಬೇಡಿ. ಆ ಮೂಲಕ ನಾನು ಮತ್ತು ನಿಮ್ಮ ಮಗಳು ಮುಂದೆಯೂ ಕಾವೇರಿ ನೀರು ಕುಡಿಯುವಂತಾಗಲಿ ಎಂದು ಆ ಬಾಲಕಿ ಪತ್ರದಲ್ಲಿ ವಿನಂತಿಸಿಕೊಂಡಿದ್ದಾಳೆ.
ಪತ್ರಕ್ಕೆ ಉತ್ತರಿಸುವ ಭರವಸೆ
ಬಾಲಕಿ ಬರೆದ ಪತ್ರದ ಪೋಸ್ಟ್ ಅನ್ನು ಸಂಸದ ಪ್ರತಾಪ್ ಸಿಂಹ ತಮ್ಮ ಫೇಸ್ಬುಕ್, ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಬಾಲಕಿಯ ಪತ್ರಕ್ಕೆ ಉತ್ತರಿಸಿರುವ ಪ್ರತಾಪ್ ಸಿಂಹ, 'ಮೈ ಡಿಯರ್ ಲಿಟಲ್ ಪ್ರಿನ್ಸ್, ನೀನು ಈ ದೇಶದ ಭವಿಷ್ಯ, ಜನಪ್ರತಿನಿಧಿಯಾಗಿ ನಿಮ್ಮ ಭವಿಷ್ಯವನ್ನು ಸಂರಕ್ಷಿಸುವುದು ನನ್ನ ಕರ್ತವ್ಯ. ಆದ್ದರಿಂದ ನಿನ್ನ ಮನವಿಗೆ ನಾನು ಉತ್ತರಿಸುತ್ತೇನೆ. ಆದರೆ ಕೆಲಸದ ಒತ್ತಡದ ಕಾರಣದಲ್ಲಿರುವ ಕಾರಣ, ಮುಂದಿನ ಒಂದೆರೆಡು ದಿನಗಳಲ್ಲಿ ಈ ಪತ್ರಕ್ಕೆ ಫೇಸ್ಬುಕ್ ಲೈವ್ ಮೂಲಕ ಉತ್ತರಿಸುವುದಾಗಿ ಭರವಸೆ ನೀಡಿದ್ದಾರೆ.












Click it and Unblock the Notifications