ಮತ್ತೊಂದು ಮಳೆಗಾಲ ಬಂದರೂ ಹೀಗೇ ಇದೆಯಲ್ಲ ಮಡಿಕೇರಿ ಅರಮನೆ
ಮಡಿಕೇರಿ, ಮಾರ್ಚ್ 02: ಸುಣ್ಣಬಣ್ಣವಿಲ್ಲದೆ ಕಳೆಗುಂದಿದ ಅರಮನೆ, ಇಂದೋ, ನಾಳೆಯೋ ಬೀಳಲು ಸಜ್ಜಾಗಿರುವ ಮೇಲ್ಚಾವಣಿ, ಮಳೆಗೆ ಬಿದ್ದು ನುಚ್ಚು ನೂರಾಗಿರುವ ಹೆಂಚುಗಳು, ಬೀಗ ಹಾಕಿರುವ ಬಾಗಿಲುಗಳು... ಇದು ಮಡಿಕೇರಿಯ ಐತಿಹಾಸಿಕ ಕೋಟೆ ಆವರಣದಲ್ಲಿರುವ ಅರಮನೆಯ ಇಂದಿನ ಸ್ಥಿತಿ.
Recommended Video
ಸರ್ಕಾರಿ ಕಚೇರಿಗಳಿದ್ದ ಕಾರಣ ಅರಮನೆಯನ್ನು ದುರಸ್ತಿ ಮಾಡುವ ಕಾರ್ಯಕ್ಕೆ ಪುರಾತತ್ವ ಇಲಾಖೆ ಮುಂದಾಗಿರಲಿಲ್ಲ. ಈ ನಡುವೆ ರಾಜ್ಯ ಉಚ್ಚ ನ್ಯಾಯಾಲಯದ ಸೂಚನೆ ಮೇರೆಗೆ ಎಲ್ಲಾ ಸರಕಾರಿ ಕಚೇರಿಗಳನ್ನು ಸ್ಥಳಾಂತರಿಸಲಾಗಿದೆ. ಇದೀಗ ಕಚೇರಿಗಳು ಖಾಲಿಯಾದ ನಂತರ ಅರಮನೆ ಮತ್ತಷ್ಟು ಪಾಳು ಬಿದ್ದಿದ್ದು, ಪ್ರವಾಸಿಗರ ನಿರಾಶೆಗೆ ಕಾರಣವಾಗಿದೆ.
ಕೋಟೆ ಆವರಣ ಪುಂಡ ಪೋಕರಿಗಳ ತಾಣವಾಗಿ ಪರಿವರ್ತನೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಆದರೆ, ಕೇವಲ ಕೋಟೆ ಕಾಯಲು ಸಿಬ್ಬಂದಿ ನಿಯೋಜಿಸಿರುವ ಪುರಾತತ್ವ ಇಲಾಖೆ ಅರಮನೆಯ ಅಭಿವೃದ್ಧಿಗೆ ಮಾತ್ರ ಮನಸ್ಸು ಮಾಡಿಲ್ಲ. ಸರ್ಕಾರಿ ಕಚೇರಿಗಳ ತೆರವಿಗೆ ತೋರಿದಷ್ಟು ಉತ್ಸಾಹ ಐತಿಹಾಸಿಕ ಆಸ್ತಿಯನ್ನು ಉಳಿಸಿಕೊಳ್ಳುವುದರಲ್ಲಿ ತೋರುತ್ತಿಲ್ಲ ಎನ್ನುವ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಕೆಲವು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ ದಕ್ಷ ಜಿಲ್ಲಾಧಿಕಾರಿಗಳು ಕೋಟೆ ಆವರಣದ ಅಭಿವೃದ್ಧಿ ಮತ್ತು ಆಕರ್ಷಕ ಪ್ರವಾಸಿತಾಣವನ್ನಾಗಿ ಪರಿವರ್ತಿಸುವ ಬಗ್ಗೆ ಯೋಜನೆಗಳನ್ನು ರೂಪಿಸಿದ್ದರು. ಆದರೆ ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯ ಹಿನ್ನೆಲೆ ಮಹತ್ವಾಕಾಂಕ್ಷೆಯ ಯಾವುದೇ ಯೋಜನೆಗಳು ಸಾಕಾರಗೊಂಡಿಲ್ಲ. ಪುರಾತತ್ವ ಇಲಾಖೆ ಸುಮಾರು 53 ಲಕ್ಷ ರೂಪಾಯಿ ವೆಚ್ಚದಲ್ಲಿ ಕೋಟೆ ಆವರಣ ಮತ್ತು ಅರಮನೆಯ ದುರಸ್ತಿ ಕಾರ್ಯಕ್ಕೆ ಯೋಜನೆಯನ್ನು ಸಿದ್ಧಪಡಿಸಿ ಹಲವು ತಿಂಗಳುಗಳೇ ಕಳೆದಿವೆ. ಆದರೆ ಅಭಿವೃದ್ಧಿ ಕಾರ್ಯವನ್ನು ಇನ್ನೂ ಕೂಡ ಆರಂಭಿಸಿಲ್ಲ.

ಕಳೆದ ಎರಡು ವರ್ಷಗಳ ಕಾಲ ಸುರಿದ ಧಾರಾಕಾರ ಮಳೆಗೆ ಐತಿಹಾಸಿಕ ಅರಮನೆಗೆ ಸಾಕಷ್ಟು ಹಾನಿಯಾಗಿತ್ತು. ಕೋಟೆ ಹಳೇ ವಿಧಾನ ಸಭಾಂಗಣದ ಬೆಲೆ ಬಾಳುವ ಮರಮುಟ್ಟುಗಳು ಸೇರಿದಂತೆ ಇಡೀ ಕಟ್ಟಡವೇ ಶಿಥಿಲಗೊಂಡು ಆತಂಕವನ್ನು ಸೃಷ್ಟಿಸಿತ್ತು. ಇದೀಗ ಮತ್ತೊಂದು ಮಳೆಗಾಲಕ್ಕೆ ಎರಡು ತಿಂಗಳುಗಳಷ್ಟೇ ಬಾಕಿ ಉಳಿದಿದ್ದು, ಈ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳುವುದು ಅಸಾಧ್ಯವಾಗಿರುವುದರಿಂದ ಅರಮನೆ ಕಟ್ಟಡಕ್ಕೆ ಮತ್ತಷ್ಟು ಹಾನಿಯಾಗುವ ಸಾಧ್ಯತೆಯಿದೆ.












Click it and Unblock the Notifications