ಕೊಡವ ಸಮಾಜ ಬಿಜೆಪಿ ಬ್ರ್ಯಾಂಚ್ ಆಫೀಸ್ ಆಗಬಾರದು: ಎಕೆ ಸುಬ್ಬಯ್ಯ
ಮಡಿಕೇರಿ, ಅಕ್ಟೋಬರ್ 19: ಸುಮಾರು 16 ಎಕರೆ ಸರ್ಕಾರಿ ಜಾಗವನ್ನು ಸಿಎನ್ ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತುವರಿ ಮಾಡಿಕೊಂಡಿದ್ದು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಚಪ್ಪ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದ ಸರ್ವೆ ಸಂಖ್ಯೆ 1/6ಎ ನಲ್ಲಿ ತಮ್ಮ ಹಾಗೂ ಪತ್ನಿಯ ಹೆಸರಿನಲ್ಲಿ ತಲಾ 5 ಎಕರೆ ಮತ್ತು ಇನ್ನಷ್ಟು ಜಾಗವನ್ನು ಒತ್ತುವರಿ ಮಾಡಿಕೊಳ್ಳುವ ಮೂಲಕ ಒಟ್ಟು 16 ಎಕರೆ ಜಾಗವನ್ನು ಅಕ್ರಮ - ಸಕ್ರಮ ಸಮಿತಿಯಡಿ ಪೈಸಾರಿ ಜಾಗವನ್ನು ಹೊಂದಲು ಅರ್ಹತೆ ಇಲ್ಲದಿದ್ದರೂ ಅತಿಕ್ರಮಣ ಮಾಡಿಕೊಂಡಿದ್ದಾರೆ.
ಭೂ ನ್ಯಾಯಾಧಿಕರಣ ಇದನ್ನು ಪರಿಶೀಲಿಸಿ, ಅರ್ಜಿಯನ್ನು ವಜಾಗೊಳಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು. ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿದ ಮಡಿಕೇರಿ ಕೊಡವ ಸಮಾಜದ ಕ್ರಮವನ್ನು ಖಂಡಿಸಿದ ಅವರು, ಕೊಡವ ಸಮಾಜಗಳು ಸಮಾಜಕ್ಕೆ ಸಂಬಂಧಿಸಿದ ಕೆಲಸ ಮಾಡಬೇಕೇ ಹೊರತು ಬಿಜೆಪಿಯ ಬ್ರ್ಯಾಂಚ್ ಆಫೀಸ್ ನಂತೆ ಕಾರ್ಯ ನಿರ್ವಹಿಸಬಾರದು ಎಂದರು.
ಟಿಪ್ಪು ಜಯಂತಿ ಆಚರಿಸಬೇಕು ಎನ್ನುವುದು ಕಾಂಗ್ರೆಸ್ ಸರಕಾರದ ಅಜೆಂಡಾವಾದರೆ, ಇದನ್ನು ವಿರೋಧಿಸುವುದು ಬಿಜೆಪಿ ಅಜೆಂಡಾ ಆಗಿದೆ. ಪರಿಸ್ಥಿತಿ ಹೀಗಿರುವಾಗ ಕೊಡವ ಸಮಾಜ ಮತ್ತು ಕೊಡವ ಮೂಲಭೂತ ವಾದಿಗಳು ಬಿಜೆಪಿ ತಾಳಕ್ಕೆ ತಕ್ಕಂತೆ ಕುಣಿಯುವುದು ಸರಿಯಲ್ಲ. ಇದು ಕೊಡವ ಸಮಾಜ ಮತ್ತು ಕೊಡವರ ಗೌರವಕ್ಕೆ ಧಕ್ಕೆ ತರುವ ಕೆಲಸವಾಗಿದೆ ಎಮ್ದು ಹೇಳಿದರು.
ಟಿಪ್ಪು ಹತ್ಯೆ ನಡೆಸಿದ ಸ್ಥಳ ಎಂದು ದೇವಟ್ ಪರಂಬುನ್ನು ಸೃಷ್ಟಿಸಲಾಗಿದೆ. ಇತಿಹಾಸವನ್ನು ಅಧ್ಯಯನ ಮಾಡಿದರೆ ದೇವಟ್ ಪರಂಬು ಪ್ರದೇಶ ಅಥವಾ ಅಲ್ಲಿ ಹತ್ಯೆ ನಡೆದಿರುವ ಬಗ್ಗೆ ಯಾವದೇ ಸಾಕ್ಷ್ಯಗಳಿಲ್ಲ ಎಂದು ಹೇಳಿದ ಅವರು, ಕೊಡವ ಸಮಾಜ ಮೊದಲು ಚರಿತ್ರೆಯನ್ನು ಅಧ್ಯಯನ ಮಾಡಲಿ ಎಂದು ಬುದ್ಧಿವಾದ ಹೇಳಿದರು.
ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ಬೇಡ ಎಂಬ ಕೂಗು ಎದ್ದಿರುವ ಬೆನ್ನಲ್ಲೇ ಸ್ವತಃ ಕೊಡವ ಸಮಾಜ ಮತ್ತು ಸಿಎನ್ ಸಿ ಅಧ್ಯಕ್ಷ ನಾಚಪ್ಪ ಅವರ ವಿರುದ್ಧ ಎ.ಕೆ.ಸುಬ್ಬಯ್ಯ ಆರೋಪ ಮಾಡಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ರೀತಿಯ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.