ವಿಶ್ವ ಸಂಸ್ಥೆಯ ಶೃಂಗ ಸಭೆಯಲ್ಲಿ ಮಿಂಚಿದ ಕೊಡಗಿನ ಬಾಲೆ
ಮಡಿಕೇರಿ, ಏಪ್ರಿಲ್ 2; "ನಮ್ಮ ಅಜ್ಜ-ಅಜ್ಜಿಯರು ಉಸಿರಾಡಿದ ಶುದ್ಧ ಗಾಳಿಯನ್ನೇ ನಾವೂ ಉಸಿರಾಡಲು ಬಯಸುತ್ತೇವೆ. ನಮ್ಮ ಪೂರ್ವಜರು ಆನಂದಿಸಿದ ಭೂಮಿಯನ್ನೇ ನಾವು ನೋಡಲು, ಅನುವಂಶಿಕವಾಗಿ ಪಡೆಯಲು ಬಯಸುತ್ತೇವೆ" ಎಂದು 9ನೇ ತರಗತಿ ವಿದ್ಯಾರ್ಥಿನಿ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲೆಯ ನೆಲಜಿಯ ಮಣವಟ್ಟಿರ ಯಶ್ಮಿ ದೇಚಮ್ಮ ವಿಶ್ವ ವ್ಯಾಪ್ತಿಯ ಪರಿಸರವಾದಿಗಳಿಗೆ ಕಾವೇರಿಯ, ಕೊಡಗಿನ ಪರಿಚಯ ಮಾಡಿಕೊಟ್ಟಿದ್ದಾರೆ. ಈ ಬಾಲಕಿ ಯುನೈಟೆಡ್ ನೇಷನ್ ಓಷನ್ ಡೆಕೇಡ್ 2021 ವಾಟರ್ ಸಮ್ಮಿಟ್ನ 13-17 ರ ವಯೋಮಿತಿಯ ವೀಡಿಯೋ ಕಥಾ ಸ್ಪರ್ಧೆಯಲ್ಲಿ ಆಯ್ಕೆಯಾಗಿರುವ ಏಕೈಕ ಭಾರತೀಯ ವಿದ್ಯಾರ್ಥಿನಿ ಯಾಗಿದ್ದಾರೆ.
ಕಾವೇರಿ ನದಿಯ ಮೂಲ ರೂಪದಿಂದ ಪ್ರಾರಂಭಗೊಳ್ಳುವ ವೀಡಿಯೋ, ನದಿಯ ಪಾವಿತ್ರ್ಯತೆಯನ್ನು, ಕಾವೇರಿಯ ಪೂಜ್ಯ ರೂಪವನ್ನು ವಿವರಿಸುತ್ತಾ, ಇಂದಿನ ಕಾವೇರಿಯ ಕಲುಷಿತ ರೂಪವನ್ನು, ನದಿಯನ್ನು ಸ್ವಚ್ಛತೆಯೆಡೆಗೆ ಮರಳಿ ಪರಿವರ್ತಿಸುವಲ್ಲಿ ಪಡುತ್ತಿರುವ ಶ್ರಮವನ್ನು ಇಂಪಾದ ಕೊಡವ ಹಾಡಿನ ಹಿನ್ನೆಲೆಯನ್ನೊಳಗೊಂಡಂತೆ ವಿವರಿಸುತ್ತದೆ.

"ನಾವು ಕಾವೇರಿಯನ್ನು ಸರಿಪಡಿಸುವದಕ್ಕಿಂತ, ಅವಳನ್ನು ನಾವು ಗುಣಮುಖಳನ್ನಾಗಿಸೋಣ," ಎಂಬ ಅರ್ಥಪೂರ್ಣವಾದ ಸಂದೇಶದೊಂದಿಗೆ ರೂಪಿಸಿರುವ ವೀಡಿಯೋ ಹೆಚ್ 2021 ಜಲ ಶೃಂಗಸಭೆಯಲ್ಲಿ ವಿಶ್ವದ ಎಲ್ಲೆಡೆಯಿಂದ ಬಂದ 65 ಇನ್ನಿತರ ವೀಡಿಯೋಗಳ ಪೈಕಿ ಆಯ್ಕೆಯಾಗಿರುವ 6 ವೀಡಿಯೋಗಳಲ್ಲಿ ಒಂದಾಗಿದೆ.
ಮೈಸೂರಿನ ಆಚಾರ್ಯ ವಿದ್ಯಾಕುಲ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ಯಶ್ಮಿ, ನೆಲಜಿಯ ಮಣವಟ್ಟೀರ ಕುಶಾಲಪ್ಪ ಹಾಗೂ ನಳಿನಿ ದಂಪತಿಯ ಪುತ್ರಿ. "ಇನ್ಸ್ಟಾಗ್ರಾಂ ನಲ್ಲಿ ಹೆಚ್200 ಯುನೈಟೆಡ್ ನೇಷನ್ ಓಷನ್ ಡೆಕೆಡ್ ಸಮ್ಮಿಟ್ನ ಪರಿಚಯವನ್ನು ನಾನು ಪಡೆದೆ. ಡಿಸೆಂಬರ್ ತಿಂಗಳಿನಲ್ಲಿ ನಾನು ಇನ್ನೊಂದು ಇದೇ ರೀತಿಯ ಸಮ್ಮೇಳಮದಲ್ಲಿ ಭಾಗವಹಿಸಿದ್ದು ಈ ಸಮ್ಮೇಳನದಲ್ಲಿ ನಾನು ಹವಾಮಾನ ಬದಲಾವಣೆಯ ಬಗ್ಗೆ ಹಾಗೂ ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ವಿಶ್ವದೆಲ್ಲೆಡೆಯ ಗಣ್ಯರಿಂದ ಕೇಳಿ ಅರಿತೆ" ಎಂದು ಯಶ್ಮಿ ವಿವರಿಸುತ್ತಾರೆ.
ಭೂಮಿಯು ಬಹಳ ನೋವಿನ ಸ್ಥಿತಿಯಲ್ಲಿದೆ ಎಂದು ವಿವರಿಸುವ ಯಶ್ಮಿ, ಮುಂದಿನ ಪೀಳಿಗೆ ಭೂಮಿಯನ್ನು ವಿಮುಕ್ತ, ಸ್ವತಂತ್ರ ರೂಪದಲ್ಲಿ ಕಾಣಬೇಕಾದರೆ, ಅದರ ರಕ್ಷಣೆಯನ್ನು ಈಗಿನಿಂದಲೇ ಪ್ರಾರಂಭಿಸಬೇಕು ಎನ್ನುತ್ತಾರೆ.
"ನನ್ನ ತಾಯಿ ಕೊಡಗಿನಲ್ಲಿ ಹುಟ್ಟಿ ಬೆಳೆಯುತ್ತಿದ್ದಾಗ, ಕೊಡಗು ಅತೀ ಸುಂದರವಾಗಿತ್ತಂತೆ. ಆ ಕಾಲದಲ್ಲಿ ಎಷ್ಟೇ ಮಳೆ ಬಂದರೂ, ಪ್ರಕೃತಿಯಿಂದ ಯಾರಿಗೂ ಏನೂ ಹಾನಿಯಾಗುತ್ತಿರಲಿಲ್ಲ. ಆದರೆ, ಇದೆಲ್ಲಾ ಈಗ ಬದಲಾಗಿದೆ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ನಾನು ಹೆಚ್ಚಾಗಿ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಅರಿತುಕೊಂಡೆ. ಪ್ರತೀ ವಾರವೂ ಒಂದೊಂದು ವಿಷಯದ ಬಗೆಗೆ ನಾನು ಲೇಖನ ಹಾಗೂ ಇನ್ನಿತರ ಚರ್ಚೆಗಳಲ್ಲಿ ಪಾಲ್ಗೊಂಡು, ನೀರು ಹಾಗೂ ಅದರ ಪಾವಿತ್ರ್ಯತೆ ಎಂಬ ವಿಷಯದ ಬಗ್ಗೆ ವೀಡಿಯೋ ಮಾಡಲು ನಿರ್ಧರಿಸಿದೆ ಎಂದು ಯಶ್ಮಿ ವಿವರಿಸುತ್ತಾರೆ.
ಕೊಡಗಿಗೆ ಬಂದು ಈ ಬಾಲಕಿ ಇನ್ನಿತರ ಸಂಬಂಧಿಕರ ಸಹಾಯದಿಂದ ಕಾವೇರಿ ನದಿಯ, ಕೊಡಗಿನ ಛಾಯಾಚಿತ್ರ ಹಾಗೂ ವೀಡಿಯೋಗಳನ್ನು ಸಂಗ್ರಹಿಸಿ ತನ್ನ ಸಹೋದರ ಸಂಬಂಧಿಯಾದ ಭುವನಾ ನಾಣಯ್ಯ ಹಾಗೂ ಸೋದರಮಾವ ನಾಣಯ್ಯ ಅವರು ಹಾಡಿರುವ ಕೊಡವ ಹಾಡಿನ ಹಿನ್ನೆಲೆಯೊಂದಿಗೆ ಸುಮಾರು 1.30 ನಿಮಿಷದ ವೀಡಿಯೋ ಮಾಡಿ ವಿಶ್ವದ ಹಲವಾರು ಪರಿಸರ ಪ್ರೇಮಿಗಳ, ಗಣ್ಯರ ಮನಸೆಳೆದಿದ್ದಾರೆ.
ಯಶ್ಮಿಯ ವೀಡಿಯೋ ಮುಂಬರುವ ಯುನೈಟೆಡ್ ನೇಷನ್ನ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಯುಎನ್ ವತಿಯಿಂದ ಹವಾಯಿನಲ್ಲಿ ನಡೆಯುವ ಸಬಲೀಕರಣ ಮತ್ತು ನಾಯಕತ್ವ ಶೃಂಗಸಭೆಯಲ್ಲಿ ಭಾಗವಹಿಸಲು ಯಶ್ಮಿಗೆ ಅವಕಾಶ ಕಲ್ಪಿಸಿಕೊಡಲಾಗಿರುವುದು ಮತ್ತೊಂದು ವಿಶೇಷ.












Click it and Unblock the Notifications