ಕಾಂಗ್ರೆಸ್ ಕಮಾಲ್: ಕೊಡಗಿನಲ್ಲಿ ಬಿಜೆಪಿ ಯುಗಾಂತ್ಯವಾಗಿದ್ದು ಹೇಗೆ?
ಕೊಡಗು, ಮೇ 14: ಕಳೆದ ಕೆಲ ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಕೊಡಗಿನಲ್ಲೀಗ ಕಾಂಗ್ರೆಸ್ ಕಮಾಲ್ ಮಾಡಿದೆ. ಜಿಲ್ಲೆಯ ಎರಡು ವಿಧಾನಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿಕೊಂಡು ಬಂದಿದ್ದ ಬಿಜೆಪಿ ಶಾಸಕರನ್ನು ಸೋಲಿಸುವ ಮೂಲಕ ಹೊಸ ಇತಿಹಾಸ ಬರೆದಿದೆ.
ಬಹುಶಃ ಕೊಡಗಿನಲ್ಲಿ ಕಾಂಗ್ರೆಸ್ ಕಮಾಲ್ ಮಾಡುತ್ತದೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ಸದ್ದಿಲ್ಲದೆ ಒಳಗಿನಿಂದೊಳಗೆ ಆಡಳಿತ ವಿರೋಧಿ ಅಲೆ ಸೃಷ್ಟಿಯಾಯಿತಾ? ಅಥವಾ ಹಲವು ವರ್ಷಗಳಿಂದ ಅದೇ ಶಾಸಕರನ್ನು ನೋಡಿ ಸುಸ್ತಾಗಿದ್ದ ಮತದಾರರು ಹೊಸ ಮುಖ ಬಯಸಿದರೇ? ಜಾತಿ ರಾಜಕಾರಣ ನಡೆಯಿತಾ? ಹಿಂದುತ್ವ ಕೆಲಸ ಮಾಡಲಿಲ್ಲವೆ? ಹೀಗೆ ಹತ್ತಾರು ವಿಚಾರಗಳು ಜಿಲ್ಲೆಯಲ್ಲಿ ಚರ್ಚೆಯಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ಲಾಭ ತಂದುಕೊಟ್ಟಿದ್ದರೆ, ಜಾತಿರಾಜಕಾರಣ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದೆ.

ಕೊಡಗಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೋಟದ ಕಾರ್ಮಿಕರಿದ್ದು, ಅವರನ್ನು ಉಚಿತ ಗ್ಯಾರಂಟಿ ಯೋಜನೆಗಳು ಸೆಳೆದಿದ್ದು ಅದು ಕಾಂಗ್ರೆಸ್ಗೆ ಮತವಾಗಿ ಪರಿವರ್ತನೆಯಾಗಿದೆ ಎನ್ನಲಾಗುತ್ತಿದೆ. ಜೊತೆಗೆ ಕಾಂಗ್ರೆಸ್ ಗೆಲುವಿಗೆ ಜೆಡಿಎಸ್ಗೆ ಕೊಡುಗೆಯೂ ಇದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.
ನಾಲ್ಕು ಸಾವಿರ ಅಂತರದಲ್ಲಿ ಸೋಲು
ಮಡಿಕೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಅಪ್ಪಚ್ಚುರಂಜನ್ ಗೆ 80477 ಮತ ಪಡೆದಿದ್ದು, ಕೊಡವ ಸಮುದಾಯದ ನಾಪಂಡ ಮುತ್ತಪ್ಪ ಅವರು ಜೆಡಿಎಸ್ ನಿಂದ ಸ್ಪರ್ಧಿಸುವ ಮೂಲಕ ಸುಮಾರು 6,233 ಮತ ಪಡೆದಿದ್ದು, ಆ ಮತಗಳ ಪೈಕಿ ಕೆಲವು ಮತಗಳು ಅಪ್ಪಚ್ಚು ರಂಜನ್ ಅವರಿಗೆ ಬೀಳುವಂತದ್ದಾಗಿದ್ದವು. ಹೀಗಾಗಿ ಎದುರಾಳಿ ಕಾಂಗ್ರೆಸದದನ ಮಂಥರಗೌಡ ಅವರು 84,879 ಮತಪಡೆದಿದ್ದಾರೆ. ಇವರ ನಡುವೆ 4402 ಮತಗಳಷ್ಟೆ ಅಂತರವಿರುವುದು ವಿಶೇಷವಾಗಿದೆ.
ಇನ್ನು ವೀರಾಜಪೇಟೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪೊನ್ನಣ್ಣ(83,791) ಮತ್ತು ಬಿಜೆಪಿಯ ಕೆ.ಜಿ.ಬೋಪಯ್ಯ(79,500) ನಡುವೆ 4291 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಇಲ್ಲಿಯೂ ಜೆಡಿಎಸ್ ಬಿಜೆಪಿ ಸೋಲಿಗೆ ಕಾಂಗ್ರೆಸ್ ಗೆಲುವಿಗೆ ಜೆಡಿಎಸ್ ನ ಪಾತ್ರವಿರುವುದನ್ನು ತಳ್ಳಿಹಾಕುವಂತಿಲ್ಲ. ಏಕೆಂದರೆ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸಿದ್ದ ಸಂಕೇತ್ ಪೂವಯ್ಯ ಅವರು ಚುನಾವಣೆಗೆ ಕೆಲವು ದಿನಗಳು ಇರುವಂತೆಯೇ ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುವ ಮೂಲಕ ತಮ್ಮ ಬೆಂಬಲಿಗರನ್ನು ಕಾಂಗ್ರೆಸ್ ಗೆ ಕರೆದುಕೊಂಡು ಹೋಗಿದ್ದರು. ಇದು ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ.

ಜಾತಿ ರಾಜಕಾರಣ ಸೋಲಿಗೆ ಕಾರಣವಾಯಿತಾ?
ಕೊಡಗಿನಲ್ಲಿ ಸುಮಾರು ಎರಡು ದಶಕಗಳಿಂದ ಬಿಜೆಪಿ ಹೊರತುಪಡಿಸಿ ಕಾಂಗ್ರೆಸ್ ಆಗಲೀ ಜೆಡಿಎಸ್ ಆಗಲೀ ಅಧಿಕಾರ ಪಡೆಯಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್ ನಲ್ಲಿ ಒಳಜಗಳ, ಸಂಘಟನೆಯಾಗದ ಜೆಡಿಎಸ್, ಇದೆರಡರ ನಡುವೆ ಬಿಜೆಪಿ ಗೆಲುವಿನ ನಾಗಾಲೋಟ ಮುಂದುವರೆಸಿಕೊಂಡು ಬಂದಿತ್ತು. ಈ ಬಾರಿಯೂ ನಾವೇ ಗೆದ್ದೇ ಗೆಲ್ಲುತ್ತೇವೆ. ಆತ್ಮವಿಶ್ವಾಸ ಬಿಜೆಪಿ ಅಭ್ಯರ್ಥಿಗಳನ್ನು ಮೈಮರೆಸಿತ್ತು. ಆದರೆ ಕೆಲವೊಂದು ಲೆಕ್ಕಾಚಾರಗಳು ಹಾಗೂ ಜಾತಿ ರಾಜಕಾರಣ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ವೀರಾಜಪೇಟೆ ಕ್ಷೇತ್ರದಲ್ಲಿ ಕೊಡವ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಲ್ಲಿ ಬಿಜೆಪಿಯಿಂದ ಗೌಡ ಸಮುದಾಯದ ಕೆ.ಜಿ.ಬೋಪಯ್ಯ ಅವರು ಗೆಲುವು ಸಾಧಿಸುತ್ತಾ ಬಂದಿದ್ದರು. ಮತದಾರರ ಪೈಕಿ ಹೆಚ್ಚಿನವರು ಪಕ್ಷ ನೋಡಿ ಮತಹಾಕುತ್ತಿದ್ದರು. ಆದರೆ ಈ ಬಾರಿ ಹಾಗಾಗಲಿಲ್ಲ. ನಮ್ಮ ಕ್ಷೇತ್ರಕ್ಕೆ ಕೊಡವ ಸಮುದಾಯದ ಅಭ್ಯರ್ಥಿ ಬೇಕು ಎಂಬ ತೀರ್ಮಾನಗಳನ್ನು ಕೆಲವರು ಮಾಡಿದ್ದರು. ಇದೇ ವೇಳೆಗೆ ಕಾಂಗ್ರೆಸ್ ಎ.ಎಸ್.ಪೊನ್ನಣ್ಣ ಅವರನ್ನು ವೀರಾಜಪೇಟೆಯಿಂದ ಕಣಕ್ಕಿಳಿಸಿತ್ತು. ಅವರ ಬೆಂಬಲಕ್ಕೆ ಒಂದಷ್ಟು ಮಂದಿ ನಿಂತರು ಹೀಗಾಗಿ ಬಿಜೆಪಿ ಅಭ್ಯರ್ಥಿ ಸೋಲುವಂತಾಯಿತು.
ಕೊಡಗಿನತ್ತ ರಾಜ್ಯ ಬಿಜೆಪಿ ನಾಯಕರ ನಿರ್ಲಕ್ಷ್ಯ
ಯಾವಾಗ ವೀರಾಜಪೇಟೆಯಲ್ಲಿ ಜಾತಿ ವಿಚಾರಗಳು ಮುನ್ನಲೆಗೆ ಬಂತೋ ಅದರ ಪರಿಣಾಮ ಮಡಿಕೇರಿ ಕ್ಷೇತ್ರದ ಮೇಲೆಯೂ ಬೀರಿದೆ. ಮಡಿಕೇರಿ ಕ್ಷೇತ್ರದಲ್ಲಿ ಕೊಡವ ಸಮುದಾಯಕ್ಕಿಂತಲೂ ಗೌಡ ಸೇರಿದಂತೆ ಇತರೆ ಸಮುದಾಯದವರು ಹೆಚ್ಚು ಸಂಖ್ಯೆಯಲ್ಲಿದ್ದು ಅವರು ಕೂಡ ಬಿಜೆಪಿ ಅಭ್ಯರ್ಥಿ ಅಪ್ಪಚ್ಚುರಂಜನ್ ಕೈಬಿಟ್ಟು ಕಾಂಗ್ರೆಸ್ ನ ಮಂಥರಗೌಡರನ್ನು ಬೆಂಬಲಿಸಿದರು. ಜತೆಗೆ ಜೆಡಿಎಸ್ ಮತ್ತು ಪಕ್ಷೇತರರು ಒಂದಷ್ಟು ಮತಗಳನ್ನು ಸೆಳೆದುಕೊಂಡರು. ಇದೆಲ್ಲದರ ಕಾರಣದಿಂದಾಗಿ ಕಾಂಗ್ರೆಸ್ ಕೊಡಗಿನಲ್ಲಿ ಕಮಾಲ್ ಮಾಡಿದೆ. ಆ ಮೂಲಕ ಸುಮಾರು ಇಪ್ಪತೈದು ವರ್ಷಗಳ ಬಿಜೆಪಿ ಯುಗಾಂತ್ಯ ಕಂಡಿದೆ.

ಕಳೆದ ಎರಡು ದಶಕಗಳಿಂದಲೂ ಬಿಜೆಪಿಯನ್ನು ಗೆಲ್ಲಿಸಿಕೊಂಡು ಬಂದಿದ್ದ ಶಾಸಕರು ಎರಡನೇ ಹಂತದ ನಾಯಕರನ್ನು ಸೃಷ್ಟಿಸುವಲ್ಲಿ ವಿಫಲರಾಗಿದ್ದರು. ಅಷ್ಟೇ ಅಲ್ಲದೆ, ಅಧಿಕಾರವನ್ನು ಇತರರಿಗೆ ಬಿಟ್ಟುಕೊಡಲು ತಯಾರಿರಲಿಲ್ಲ. ಇಷ್ಟೇ ಅಲ್ಲದೆ ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿದ್ದರೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಡಗಿನ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಲೇ ಇಲ್ಲ. ಏನು ಮಾಡದಿದ್ದರೂ ನಮ್ಮನ್ನು ಬೆಂಬಲಿಸುತ್ತಾರೆ ಎಂಬ ರಾಜ್ಯ ನಾಯಕರ ನಿರ್ಲಕ್ಷ್ಯ ಇಲ್ಲಿನ ಜನ ಕಾಂಗ್ರೆಸ್ ನ್ನು ಬೆಂಬಲಿಸುವಂತೆ ಮಾಡಿದೆ. ಮುಂದಿನ ಬೆಳವಣಿಗೆಯನ್ನು ಕಾದು ನೋಡಬೇಕಿದೆ.












Click it and Unblock the Notifications