ಲಕ್ಷ್ಮಿ ಹೆಬ್ಬಾಳ್ಕರ್ ಗೆ ಕೊಡಗು ಡಿಸಿಸಿ ಬ್ಯಾಂಕ್ ಸಾಲ ನೀಡಿಲ್ಲವಂತೆ...
ಮಡಿಕೇರಿ, ಅಕ್ಟೋಬರ್ 14: ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಸಹಕಾರ ಬ್ಯಾಂಕ್ನಿಂದ ಕೋಟ್ಯಂತರ ರೂ.ಸಾಲ ಪಡೆದಿದ್ದಾರೆ ಎಂಬ ಆರೋಪಗಳು ಮೇಲಿಂದ ಮೇಲೆ ಬರುತ್ತಿದ್ದು, ಈ ಬಗ್ಗೆ ಕೊಡಗಿನ ಡಿಸಿಸಿ ಬ್ಯಾಂಕ್ಗೂ ಬೇಡಿಕೆ ಬಂದಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.
ಈಗಾಗಲೇ ರಾಜ್ಯದ ಹಲವು ಸಹಕಾರಿ ಬ್ಯಾಂಕ್ಗಳಿಂದ ಸುಮಾರು ಇನ್ನೂರು ಕೋಟಿಗೂ ಹೆಚ್ಚು ಸಾಲವನ್ನು ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸಾಲವಾಗಿ ಪಡೆದಿದ್ದಾರೆ ಎಂಬ ಆರೋಪಗಳು ಇವೆ. ಇದೇ ರೀತಿ ಕೊಡಗಿನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನಿಂದಲೂ ಸಾಲ ನೀಡಲಾಗಿದೆ ಎಂಬ ಸುದ್ದಿ ಹರಡಿತ್ತು.
ಆದರೆ ಈ ವಿಚಾರವನ್ನು ತಳ್ಳಿ ಹಾಕಿರುವ ಬ್ಯಾಂಕ್ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅವರು ಹರ್ಷ ಶುಗರ್ಸ್ ಗೆ ಸಾಲ ನೀಡುವಂತೆ 2014-15ನೇ ಸಾಲಿನಲ್ಲಿ ಮೌಖಿಕ ಬೇಡಿಕೆ ಬಂದಿತ್ತು. ಆದರೆ ಬ್ಯಾಂಕ್ ನಿಯಮದ ಪ್ರಕಾರ ಹೊರ ಜಿಲ್ಲೆಗೆ ಸಾಲ ನೀಡಲು ಸಾಧ್ಯವಿಲ್ಲ ಎಂಬ ಕಾರಣದಿಂದ ಆ ಬೇಡಿಕೆಯನ್ನು ತಿರಸ್ಕರಿಸಲಾಗಿತ್ತು. ಅಲ್ಲದೆ, ಈ ಬಗ್ಗೆ ಬ್ಯಾಂಕ್ ಹಾಗೂ ಆ ಸಂಸ್ಥೆಯ ನಡುವೆ ಯಾವುದೇ ಪತ್ರ ವ್ಯವಹಾರ ಕೂಡ ನಡೆದಿಲ್ಲ ಎಂದು ತಿಳಿದುಬಂದಿದೆ. ಹರ್ಷ ಶುಗರ್ಸ್ ಗೆ ನಿಯಮ ಮೀರಿ ಕೋಟ್ಯಂತರ ರೂ. ಸಾಲ ನೀಡಲಾಗಿದೆ ಎನ್ನುವ ಆರೋಪವನ್ನೂ ತಳ್ಳಿ ಹಾಕಲಾಗಿದೆ.
Recommended Video

ಡಿಸಿಸಿ ಬ್ಯಾಂಕ್ನ ಬೈಲಾ ತಿದ್ದುಪಡಿಯ ಬಳಿಕ 2014ರಲ್ಲಿ ಪ್ರಥಮ ಬಾರಿಗೆ ಹೊರ ಜಿಲ್ಲೆಗಳಿಗೆ ಸಾಲ ನೀಡಲಾಗಿದೆಯಾದರೂ, ಆ ನಂತರದ ದಿನಗಳಲ್ಲಿ ಯಾವುದೇ ಸಾಲ ನೀಡಿಲ್ಲ. ಅಲ್ಲದೆ ಪ್ರಸಕ್ತ ಸಾಲಿನಲ್ಲಿ ನಡೆದ ಮಹಾಸಭೆಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯನ್ನು ಮೀರಿ ಹೊರ ಜಿಲ್ಲೆಗಳಿಗೆ ಸಾಲ ನೀಡದಿರಲು ತೀರ್ಮಾನ ಕೈಗೊಳ್ಳಲಾಗಿದೆ.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ಗೆ ಹೊರ ಜಿಲ್ಲೆಗಳಿಗೆ 20 ಕೋಟಿವರೆಗೆ ಸಾಲ ನೀಡಲು ಮಾತ್ರ ಅವಕಾಶವಿದ್ದು, ಹೀಗಿರುವಾಗ ಹರ್ಷ ಶುಗರ್ಸ್ ಗೆ 40 ಕೋಟಿ ರೂ. ಸಾಲ ನೀಡಲಾಗಿದೆ ಎಂಬ ಆರೋಪ ಮಾಡುತ್ತಿರುವುದರಲ್ಲಿ ಯಾವುದೇ ಹುರುಳಿಲ್ಲವೆಂದು ಇದೇ ಸಂದರ್ಭ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications