ಮಡಿಕೇರಿಯಲ್ಲಿ ಸುರಿದಿದ್ದು ಬರೀ ಮಳೆಯಲ್ಲ... ಮಹಾಮಳೆ..!
Recommended Video

ಮಡಿಕೇರಿ, ಆಗಸ್ಟ್ 23: ಮಡಿಕೇರಿಯಲ್ಲಿ ಈ ಬಾರಿ ಸುರಿದಿದ್ದು ಅಂತಿಂಥ ಮಳೆಯಲ್ಲ ಅದು ಕುಂಭದ್ರೋಣ ಮಳೆ ಎಂಬುದನ್ನು ಇದುವರೆಗೆ ಸುರಿದ ಅದರ ಪ್ರಮಾಣದಿಂದಲೇ ಸುಲಭವಾಗಿ ಹೇಳಿ ಬಿಡಬಹುದು.
ಜಿಲ್ಲೆಯ ಮೂರು ತಾಲೂಕುಗಳಿಗೆ ಹೋಲಿಸಿದರೆ ಮಡಿಕೇರಿಯಲ್ಲಿಯೇ ಅತಿಹೆಚ್ಚು ಮಳೆ ಸುರಿದಿದ್ದು, ಅದರ ಪರಿಣಾಮವೇ ಇವತ್ತು ಆಗ ಬಾರದ ಅನಾಹುತವಾಗಿದೆ. ತಿಂಗಳು ಪೂರ್ತಿ ಸುರಿಯುವ ಮಳೆ ಒಂದೇ ದಿನದಲ್ಲಿ ಸುರಿದರೆ ಅದನ್ನು ತಡೆದುಕೊಳ್ಳುವುದು ಅಷ್ಟು ಸುಲಭವಲ್ಲ. ಜತೆಗೆ ಅದರ ಪರಿಣಾಮವೂ ಭಯಂಕರವಾಗಿರುತ್ತದೆ.
ಹಿಂದಿನ ಕೆಲವು ವರ್ಷಗಳಲ್ಲಿ ಇದೇ ರೀತಿಯ ಮಳೆ ಸುರಿದಿದ್ದರೂ ಅದು ಒಂದೇ ದಿನ ಸುರಿದಿರಲಿಲ್ಲ. ತಿಂಗಳಾನುಗಟ್ಟಲೆ ಸಾಧಾರವಣವಾಗಿ ಸುರಿದಿತ್ತು. ಹೀಗಾಗಿ ಎಷ್ಟೇ ಮಳೆ ಬಂದರೂ ಇಲ್ಲಿ ಅಂತಹ ಅನಾಹುತಗಳೇನು ಆಗಿರಲಿಲ್ಲ. ಮಳೆ ಜಾಸ್ತಿ ಬಂದಾಗ ಪ್ರವಾಹ ಬರುತ್ತಿತ್ತು. ಮಳೆ ಕಡಿಮೆಯಾಗುತ್ತಿದ್ದಂತೆಯೇ ಪ್ರವಾಹವೂ ತಗ್ಗುತ್ತಿತ್ತು. ಇದರಿಂದ ಭತ್ತದ ಗದ್ದೆಗಳಿಗೆ ಸ್ವಲ್ಪ ಮಟ್ಟಿಗೆ ಹಾನಿಯಾಗುತ್ತಿತ್ತಾದರೂ ಅದಕ್ಕಿಂತ ಹೆಚ್ಚಾಗಿ ಯಾವ ನಷ್ಟವೂ ಆಗುತ್ತಿರಲಿಲ್ಲ.

ದಶಕದ ನಂತರ ಮಹಾಮಳೆ
ಕಳೆದೊಂದು ದಶಕಗಳಿಂದೀಚೆಗೆ ಅಂತಹ ಮಹಾ ಮಳೆ ಆಗಿರಲಿಲ್ಲ. 2007 ಮತ್ತು 2013ರಲ್ಲಿ ಹೆಚ್ಚಿನ ಮಳೆ ಸುರಿದಿತ್ತು. ಆ ನಂತರ ಮಳೆ ಅಷ್ಟೊಂದಾಗಿ ಬಂದಿರಲಿಲ್ಲ. ವಾಡಿಕೆಯ ಮಳೆಯೂ ಸುರಿದಿರಲಿಲ್ಲ. ಇದರಿಂದ ಜನ ತೊಂದರೆಯನ್ನು ಅನುಭವಿಸಿದ್ದರು. ಈ ಬಾರಿಯ ಮುಂಗಾರು ಉತ್ತಮವಾಗಿದೆ ಎಂಬ ವಿಚಾರಗಳು ಜನರಲ್ಲಿ ನೆಮ್ಮದಿ ತಂದಿತ್ತು. ಆದರಲ್ಲೂ ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ ಆರಂಭವಾಗಿದ್ದು ಇನ್ನಷ್ಟು ಸಂತೋಷ ನೀಡಿತ್ತು.

ಇದು ಅಂತಿಂಥ ಮಳೆಯಲ್ಲ!
ಆ ನಂತರ ಬಂದಿದ್ದು ಮಾತ್ರ ಅಂತಿಂಥ ಮಳೆಯಲ್ಲ. ಅದರಲ್ಲೂ ಮಡಿಕೇರಿ ವ್ಯಾಪ್ತಿಯಲ್ಲೇ ಅತಿ ಹೆಚ್ಚು ಮಳೆ ಸುರಿದಿರುವುದು ಅನಾಹುತಕ್ಕೆ ಎಡೆ ಮಾಡಿ ಕೊಡಲು ಕಾರಣವಾಯಿತು. ಸಾಮಾನ್ಯವಾಗಿ ಜನವರಿಯಿಂದ ಇಲ್ಲಿವರೆಗೆ ಕಳೆದ ವರ್ಷ ಸುರಿದ ಮಳೆಯನ್ನೇ ನೋಡಿದರೆ ಅದರ ಪ್ರಮಾಣ 2202.40 ಮಿ.ಮೀ. ಮಾತ್ರ ಆದರೆ ಈ ಬಾರಿ ಇಲ್ಲಿವರೆಗೆ ಸುರಿದ ಮಳೆಯ ಪ್ರಮಾಣ 5083.76 ಮಿ.ಮೀ ಎಂದರೆ ಅದರ ಭೀಕರತೆ ಹೇಗಿರಬಹುದು ಎಂಬುದು ಎಂತಹರಿಗೂ ಮನದಟ್ಟಾಗಿ ಬಿಡುತ್ತದೆ.

ಒಟ್ಟು ಮಳೆ ಪ್ರಮಾಣ ಎಷ್ಟು?
ಇನ್ನು ಜಿಲ್ಲೆಯಲ್ಲಿ ಸುರಿದ ಸರಾಸರಿ ಮಳೆಯನ್ನು ನೋಡುವುದಾದರೆ ಜನವರಿಯಿಂದ ಇಲ್ಲಿಯವರೆಗಿನ 3603.08 ಮಿ.ಮೀ ಮಳೆ ಸುರಿದಿದ್ದರೆ ಕಳೆದ ವರ್ಷ ಇದೇ ಅವಧಿಯಲ್ಲಿ 1534.85 ಮಿ.ಮೀ ಮಳೆಯಾಗಿತ್ತು. ಇದನ್ನು ಗಮನಿಸಿದರೆ ಕಳೆದ ವರ್ಷಕ್ಕಿಂತಲೂ ಎರಡು ಪಟ್ಟು ಮಳೆ ಇಲ್ಲಿಯವರೆಗೆ ಸುರಿದಿದೆ. ಮುಂದಿನ ಇನ್ನೆರಡು ತಿಂಗಳ ಕಾಲವೂ ಸಾಮಾನ್ಯವಾಗಿ ಇಲ್ಲಿ ಮಳೆ ಬರುತ್ತಿರುತ್ತದೆ. ಹೀಗಾಗಿ ವರ್ಷದ ಅಂತ್ಯಕ್ಕೆ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದ್ದು, ಇದರಿಂದ ಕಾಫಿ ಮತ್ತು ಕರಿಮೆಣಸು ಫಸಲು ನೆಲಕಚ್ಚುವ ಲಕ್ಷಣಗಳಿವೆ. ಇದರಿಂದ ಈಗಾಗಲೇ ಕಾಫಿ ಮತ್ತು ಕರಿಮೆಣಸು ಬೆಳೆದಿರುವ ಬೆಳೆಗಾರರು ನಷ್ಟಕ್ಕೀಡಾಗುವುದಂತು ಖಚಿತ.

ಶಾಪವಾಗಿ ಪರಿಣಮಿಸಿದ ಮಹಾಮಳೆ
ಇಲ್ಲಿನವರಿಗೆ ಕಾಫಿ ಮತ್ತು ಕರಿಮೆಣಸು ಜೀವನಾಧಾರ ಅದುವೇ ನೆಲಕಚ್ಚಿದರೆ ಮುಂದಿನ ಪರಿಸ್ಥಿತಿ ಇಲ್ಲಿ ಭೀಕರವಾಗುವ ಸಾಧ್ಯತೆ ಹೆಚ್ಚಿದೆ. ಜಲಪ್ರಳಯದಿಂದ ಸಂಕಷ್ಟಕ್ಕೀಡಾದವರ ಸ್ಥಿತಿ ಒಂದು ಕಡೆಯಾದರೆ, ಇನ್ನೊಂದು ಕಡೆ ಎಲ್ಲ ಇದ್ದರೂ ಫಸಲೇ ಇಲ್ಲದೆ ಹೋದರೆ ಅವರದ್ದೂ ಕೂಡ ಕಷ್ಟಮಯ ಬದುಕಾಗುವುದರಲ್ಲಿ ಎರಡು ಮಾತಿಲ್ಲ. ಒಟ್ಟಾರೆ ಮಹಾ ಮಳೆ ಕೊಡಗಿಗೆ ಶಾಪವಾಗಿ ಪರಿಣಮಿಸಿದಂತು ಸತ್ಯ.












Click it and Unblock the Notifications