ಕೊಡಗಿನಲ್ಲಿ ತಗ್ಗಿದ ಮಳೆ: ಹಾರಂಗಿ ಜಲಾಶಯದ ಕ್ರಸ್ಟ್ಗೇಟ್ ಬಂದ್
ಮಡಿಕೇರಿ, ಜುಲೈ 23: ಕೊಡಗಿನಲ್ಲಿ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆಯೇ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಹೀಗಾಗಿ ಜಲಾಶಯದ ಕ್ರಸ್ಟ್ ಗೇಟ್ನ್ನು ಮುಚ್ಚಿ ನದಿಗೆ ಬಿಡಲಾಗುತ್ತಿದ್ದ ನೀರನ್ನು ನಿಲ್ಲಿಸಲಾಗಿದೆ.
Recommended Video
ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ಇದರಿಂದ ಹಾರಂಗಿ ಜಲಾಶಯದ ನೀರಿನ ಮಟ್ಟದಲ್ಲಿಯೂ ಏರಿಕೆಯಾಗಿತ್ತಲ್ಲದೆ, ಜಲಾಶಯ ಭರ್ತಿಯಾಗಲು ಕೆಲವೇ ಕೆಲವು ಅಡಿಗಳಷ್ಟೆ ಇತ್ತು. ಆದ್ದರಿಂದ ಸುಮಾರು 5,500 ಕ್ಯುಸೆಕ್ ನೀರನ್ನು ನಾಲ್ಕು ಕ್ರಸ್ಟ್ ಗೇಟ್ಗಳ ಮೂಲಕ ಜುಲೈ 17ರಂದು ಬಿಡುಗಡೆ ಮಾಡಲಾಗಿತ್ತು. ಅವತ್ತಿನ ಪರಿಸ್ಥಿತಿಯಲ್ಲಿ ಮಳೆಯ ಆರ್ಭಟ ಮುಂದುವರೆಯುವಂತೆ ಕಂಡು ಬಂದಿತ್ತು.
ಒಂದು ವೇಳೆ ಧಾರಾಕಾರವಾಗಿ ಮಳೆ ಸುರಿದು ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾದರೆ ಹೊರ ಬಿಡುವ ನೀರಿನ ಪ್ರಮಾಣವನ್ನು ಹೆಚ್ಚು ಮಾಡಬೇಕಾಗುತ್ತದೆ. ಇದರಿಂದ ತಗ್ಗು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾದರೆ ಜನತೆಗೆ ಅನನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಜಲಾಶಯ ಭರ್ತಿಯಾಗುವ ಮುನ್ನವೇ ನೀರನ್ನು ಹೊರಬಿಡಲಾಗಿತ್ತು.

ನದಿಗೆ ಹರಿಯುತ್ತಿದ್ದ ನೀರು ನಿಲುಗಡೆ
ಕಳೆದ ವರ್ಷ ಆಗಸ್ಟ್ನಲ್ಲಿ ಮಳೆ ಸುರಿದಾಗ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾಗಾಗಿ ಈ ಬಾರಿ ಬಹುಬೇಗ ಜಲಾಶಯದಿಂದ ನದಿಗೆ ನೀರು ಬಿಡುವ ಮೂಲಕ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಆದರೆ ತದ ನಂತರ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕ್ಷೀಣಿಸಿದ ಕಾರಣದಿಂದ ಹೊರ ಹೋಗುವ ನೀರನ್ನು ಬಂದ್ ಮಾಡಲಾಗಿದೆ.
ಗರಿಷ್ಠ ಮಟ್ಟ 2859 ಅಡಿಯ ಜಲಾಶಯದಲ್ಲಿ ಸದ್ಯ 2855 ಅಡಿಯಷ್ಟು ನೀರಿದ್ದು, ಒಳಹರಿವು ಸಂಪೂರ್ಣ ಕ್ಷೀಣಿಸಿದ್ದು, 1689 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಹೊರಕ್ಕೆ ಕೇವಲ 450 ಕ್ಯುಸೆಕ್ ನೀರನ್ನು ಮಾತ್ರ ಬಿಡಲಾಗುತ್ತಿದೆ.

ಜಲಾಶಯದಿಂದ 1.5 ಲಕ್ಷ ಹೆಕ್ಟೇರ್ಗೆ ನೀರು
ಹಾರಂಗಿ ಜಲಾಶಯದಿಂದ ನಾಲೆಗೆ ನೀರು ಬಿಡಲಾಗಿದ್ದು, ಈ ನೀರನ್ನು ಬಳಸಿಕೊಂಡು ರೈತರು ಭತ್ತ ಬೆಳೆಯುತ್ತಿದ್ದಾರೆ. ಬಹುತೇಕ ರೈತರು ನಾಟಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೊಡಗು ಜಿಲ್ಲೆ ಸೇರಿದಂತೆ ನೆರೆಯ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಮತ್ತು ಕೆ.ಆರ್.ನಗರ ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಸೇರಿದಂತೆ 1.5 ಲಕ್ಷ ಹೆಕ್ಟೇರ್ ಪ್ರದೇಶದ ರೈತರು ಹಾರಂಗಿ ಜಲಾಶಯದ ನೀರನ್ನು ಬಳಸಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ.

ಬಿಸಿಲಿನ ನಡುವೆ ಸುರಿಯುವ ಮಳೆ
ಇದೀಗ ಪುಷ್ಯ ನಕ್ಷತ್ರದ ಮಳೆಯು ಆರಂಭವಾಗಿದ್ದು, ಮೊದಲ ಪಾದದಲ್ಲಿ ಯಾವುದೇ ಅಬ್ಬರ ಕಾಣದೆ ಬಿಸಿಲಿನ ನಡುವೆ ಆಗೊಮ್ಮೆ ಈಗೊಮ್ಮೆ ಮಳೆ ಸುರಿಯುತ್ತಿದೆ. ಕಳೆದ ವರ್ಷವೂ ಜುಲೈ ಕೊನೆಯ ವಾರ ಮತ್ತು ಆಗಸ್ಟ್ ತಿಂಗಳಲ್ಲಿ ಭಾರೀ ಮಳೆ ಸುರಿದು ಪ್ರವಾಹ ಮತ್ತು ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸಿದ್ದವು.
ಮುಂದಿನ ದಿನಗಳಲ್ಲಿ ಪುಷ್ಯ ಮಳೆ ಅಬ್ಬರಿಸದಿದ್ದರೂ ಆಶ್ಲೇಷ ಮಳೆ ಅಬ್ಬರಿಸುವ ಸಾಧ್ಯತೆ ಹೆಚ್ಚಿದೆ. ಕಳೆದ ಎರಡು ವರ್ಷವೂ ಆಶ್ಲೇಷ ಮಳೆಯಿಂದಲೇ ಪ್ರವಾಹ ಮತ್ತು ಪ್ರಕೃತಿ ವಿಕೋಪ ಸಂಭವಿಸಿದ್ದನ್ನು ಜಿಲ್ಲೆಯ ಮರೆತಿಲ್ಲ. ಹಾಗಾಗಿ ಮುಂದೆ ಬರಲಿರುವ ಮಳೆ ಜಿಲ್ಲೆಯ ಜನರಲ್ಲಿ ಒಂದಷ್ಟು ಆತಂಕವನ್ನು ಸೃಷ್ಟಿ ಮಾಡಿದೆ.

ಮಳೆ ಬಿರುಸುಗೊಳ್ಳುವ ಸಾಧ್ಯತೆ
ಈಗಾಗಲೇ ನದಿ ಪಾತ್ರದ ಕೆಲವು ಪ್ರದೇಶ ಹಾಗೂ ಅಪಾಯಕಾರಿ ಗುಡ್ಡ ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರವಾಗಿರುವಂತೆ ಸೂಚನೆ ನೀಡಲಾಗಿದೆ. ಜತೆಗೆ ಪ್ರವಾಹ ಸಂಭವಿಸಬಹುದಾದ ಪ್ರದೇಶಗಳತ್ತ ಜಿಲ್ಲಾಡಳಿತ ನಿಗಾವಹಿಸಿದ್ದು, ಎನ್.ಡಿ.ಆರ್.ಎಫ್ ತಂಡ ಸನ್ನದ್ಧವಾಗಿದೆ.












Click it and Unblock the Notifications