ಉಪಟಳ ನೀಡುತ್ತಿದ್ದ ಆನೆ ಕುರ್ಚಿ ಗ್ರಾಮದಲ್ಲಿ ಕೊನೆಗೂ ಸೆರೆ
ಮಡಿಕೇರಿ, ಡಿಸೆಂಬರ್ 5: ದಕ್ಷಿಣ ಕೊಡಗಿನ ಕುಟ್ಟ ವ್ಯಾಪ್ತಿಯಲ್ಲಿ ನಿರಂತರ ಉಪಟಳ ನೀಡುತ್ತಿದ್ದ ಆನೆಯೊಂದನ್ನು ಅರಣ್ಯ ಇಲಾಖೆಯ ತಂಡ ಕುರ್ಚಿ ಗ್ರಾಮದಲ್ಲಿ ಕಾರ್ಯಾಚರಣೆ ಮೂಲಕ ಸೆರೆ ಹಿಡಿದಿದೆ.
ಸೆರೆ ಹಿಡಿದ ಕಾಡಾನೆ ಅಂದಾಜು 24 ವರ್ಷ ಪ್ರಾಯದ್ದಾಗಿದ್ದು, ಇದನ್ನು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಆರು ತಿಂಗಳ ಹಿಂದೆ ಕಾರ್ಮಿಕನೊಬ್ಬನ ಸಾವಿಗೆ ಕಾರಣವಾಗಿದ್ದ ಈ ಕಾಡಾನೆ, ಕುಟ್ಟ ವ್ಯಾಪ್ತಿಯ ಗ್ರಾಮಗಳ ಕಾಫಿ ತೋಟ, ಭತ್ತದ ಗದ್ದೆಗಳಲ್ಲಿ ದಾಂಧಲೆ ನಡೆಸಿ ಅಪಾರ ಪ್ರಮಾಣದ ಬೆಳೆ ಹಾನಿಗೆ ಕಾರಣವಾಗಿತ್ತು. ಮನಬಂದಂತೆ ರಾಜಾರೋಷವಾಗಿ ಕುರ್ಚಿ ಗ್ರಾಮ ವ್ಯಾಪ್ತಿಯಲ್ಲಿ ಸಂಚರಿಸುತ್ತಾ ಪುಂಡಾಟಿಕೆಯಲ್ಲಿ ತೊಡಗಿದ್ದ ಈ ಆನೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದರು.

ಗ್ರಾಮಿಣರ ಆಗ್ರಹದಂತೆ ಅರಣ್ಯ ಇಲಾಖೆಯ 50ಕ್ಕೂ ಹೆಚ್ಚಿನ ಅರಣ್ಯ ಸಿಬ್ಬಂದಿ, ಮತ್ತಿಗೋಡು ಶಿಬಿರದ ಸಾಕಾನೆಗಳ ಸಹಕಾರದೊಂದಿಗೆ ಬುಧವಾರ ಬೆಳಗ್ಗಿನಿಂದಲೇ ತೀವ್ರ ಕಾರ್ಯಾಚರಣೆ ನಡೆಸಿ ಆನೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗುವ ಮೂಲಕ, ಕುಟ್ಟ, ಕುರ್ಚಿ ವಿಭಾಗದ ಗ್ರಾಮೀಣರು ನಿರಾಳರಾಗಿದ್ದಾರೆ.












Click it and Unblock the Notifications