ದಕ್ಷಿಣ ಕೊಡಗಿನ ರೈತರಿಗೆ ಇದೀಗ ಮೊಸಳೆ ಕಾಟ
ಮಡಿಕೇರಿ, ಫೆಬ್ರವರಿ 15; ಕೊಡಗಿನ ಬಹುತೇಕ ರೈತರಿಗೆ ಕಾಡಾನೆ , ಹಂದಿಗಳ ಕಾಟ ತಪ್ಪಿದ್ದಲ್ಲ. ಕೆಲವೆಡೆಗಳಲ್ಲಿ ಹುಲಿ, ಚಿರತೆಗಳ ಕಾಟವೂ ಇದೆ. ಅದರಲ್ಲೂ ದಕ್ಷಿಣ ಕೊಡಗಿನ ನಾಗರಹೊಳೆ ಆಭಯಾರಣ್ಯದ ಆಸು ಪಾಸಿನಲ್ಲಿರುವ ರೈತರಿಗೆ ವರ್ಷವಿಡೀ ಕಾಡಾನೆ, ಹುಲಿ ಮತ್ತು ಕರಡಿ ಕಾಟ ಇದೆ. ಇದೀಗ ಈ ಕಾಟದ ಸಾಲಿಗೆ ಮೊಸಳೆಯೂ ಹೊಸದಾಗಿ ಸೇರ್ಪಡೆಗೊಂಡಿದೆ.
ಪೊನ್ನಂಪೇಟೆ ಸಮೀಪದ ನಲ್ಲೂರು, ಕಿರುಗೂರುವಿನ ರೈತರಾದ ತೀತರಮಾಡ ರಾಜ ಎಂಬವರ ಗದ್ದೆಯ ಕೆರೆಯಲ್ಲಿ ಮೊಸಳೆಯೊಂದು ಕಂಡುಬಂದಿದ್ದು ಜನರು ಆತಂಕಗೊಂಡಿದ್ದಾರೆ. ಸುದ್ದಿ ತಿಳಿದ ಪೊನ್ನಂಪೇಟೆ ಹಾಗೂ ತಿತಿಮತಿ ವಲಯದ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು, ಆರ್ಆರ್ಟಿ ತಂಡ ಸ್ಥಳಕ್ಕೆ ದೌಡಾಯಿಸಿದ್ದು ಆತಂಕಕ್ಕೆ ಕಾರಣವಾಗಿದ್ದ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ ಅವರು ತಮ್ಮ ಕೆರೆಯಿಂದ ಕಾಫಿ ಗಿಡಕ್ಕೆ ನೀರನ್ನು ಹಾಯಿಸುತ್ತಿದ್ದ ಸಂದರ್ಭ ಕಾರ್ಮಿಕರು ಮೋಟರನ್ನು ವೀಕ್ಷಿಸಲು ಆಗಮಿಸಿದಾಗ ಕೆರೆಯ ದಡದಲ್ಲಿ ಮೊಸಳೆಯು ಕಾಣಿಸಿದೆ. ಕಾರ್ಮಿಕರನ್ನು ಕಂಡ ಮೊಸಳೆಯು ಕೆರೆಯಲ್ಲಿ ದುಮುಕಿದೆ. ವಿಷಯವನ್ನು ಕಾರ್ಮಿಕರು ಮಾಲೀಕರಿಗೆ ತಿಳಿಸಿದ್ದಾರೆ.

ಕೂಡಲೇ ಮಾಲೀಕರು ರೈತ ಸಂಘದ ಪದಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ತಿಳಿಸಿದ್ದಾರೆ. ಮಾಹಿತಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕೆರೆಯಲ್ಲಿ ಅಡಗಿದ್ದ ಮೊಸಳೆಯ ಸೆರೆಗೆ ಕ್ರಮ ಕೈಗೊಂಡಿದ್ದಾರೆ.
ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯವರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಕೆರೆಯಲ್ಲಿರುವ ನೀರನ್ನು ಮೋಟರ್ ಮೂಲಕ ಮೇಲೆತ್ತಿ ಖಾಲಿ ಮಾಡಿದ ನಂತರ ಮೊಸಳೆಯು ಕೆರೆಯಲ್ಲಿ ಅಡಗಿರುವುದನ್ನು ಪತ್ತೆ ಹಚ್ಚಿದ ಸಿಬ್ಬಂದಿಗಳು ಬಲೆಯ ಮೂಲಕ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೆರೆಯ ಅನತಿ ದೂರದಲ್ಲಿ ಕೀರೆ ಹೊಳೆಯು ಹರಿಯುತ್ತಿದ್ದು ಹೊಳೆಯ ಮೂಲಕ ಮೊಸಳೆಯು ಆಗಮಿಸಿ ಕೆರೆಯಲ್ಲಿ ಆಶ್ರಯ ಪಡೆದಿರಬಹುದೆಂದು ಅಂದಾಜಿಸಲಾಗಿದೆ. ನಂತರ ಮೊಸಳೆಯನ್ನು ರಕ್ಷಿಸಿ ಕಾವೇರಿ ನದಿಗೆ ಬಿಡಲಾಯಿತು.
ಅನೇಕರು ತೋಟಗಳಲ್ಲಿ ಕೆರೆಗಳನ್ನು ಹೊಂದಿದ್ದು ಮೀನು ಸಾಕಣೆ ಮಾಡುತ್ತಿದ್ದಾರೆ. ಕಾಫಿ, ಕರಿಮೇಣಸು ದರ ಕುಸಿತದ ನಡುವೆ ಮೀನುಗಾರಿಕಾ ಚಟುವಟಿಕೆಯಿಂದ ಬೆಳೆಗಾರರು ಆರ್ಥಿಕವಾಗಿ ಒಂದಷ್ಟು ಲಾಭ ಗಳಿಸುತಿದ್ದು, ಈಗ ಮೊಸಳೆ ಕಾಟದಿಂದ ಅದಕ್ಕೂ ಕಲ್ಲು ಬೀಳಬಹುದೇ? ಎಂದು ರೈತರು ಆತಂಕಗೊಂಡಿದ್ದಾರೆ.












Click it and Unblock the Notifications