ಕೊಡಗು; ಕೊರೊನಾ ಪ್ರಕರಣಗಳ ಏರಿಳಿತದಲ್ಲಿ ಕಾಣದ ಕೈಗಳ ಕೈವಾಡ?
ಮಡಿಕೇರಿ, ಜೂನ್ 21; ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರದ ಕಣ್ಣಾಮುಚ್ಚಾಲೆ ಆಟ ನೋಡಿದಾಗ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಏನಾದರೂ ಮಾಡಿ ಕೊಡಗನ್ನು ಅನ್ಲಾಕ್ ಮಾಡಲೇಬೇಕು ಎಂದು ಪಣತೊಟ್ಟಿರುವಂತೆ ಕಾಣುತ್ತಿದೆ ಎಂದು ಅಖಿಲ ಕೊಡವ ಸಮಾಜ ಯುವ ಘಟಕ ಆರೋಪಿಸಿದೆ.
ಈ ಕುರಿತು ಮಾತನಾಡಿದ ಅಖಿಲ ಕೊಡವ ಸಮಾಜ ಯುವ ಘಟಕ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, "ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು ಯಾರು ಏನಾದರೂ ಚಿಂತೆಯಿಲ್ಲ ನನ್ನ ಮನೆಯವರು ಮಾತ್ರ ಚೆನ್ನಾಗಿದ್ದರೆ ಸಾಕು ಎಂಬಂತೆ ಕೆಲವರು ವರ್ತಿಸುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಕೊರೋನ ಕಣ್ಣಾಮುಚ್ಚಾಲೆಯ ಪಾಸಿಟಿವಿಟಿ ಏರಿಳಿಕೆಯ ಗಿಮಿಕ್ ನಡೆಯುತ್ತಿದ್ದು ಇದರ ಹಿಂದಿನ ಉದ್ದೇಶ ಏನು? ಎಂದು ಕಿಡಿಕಾರಿದ್ದಾರೆ.
ಶೇಕಡ 5ಕ್ಕಿಂತ ಕಡಿಮೆ ಪಾಸಿಟಿವಿಟಿ ಇರುವ ಜಿಲ್ಲೆಯನ್ನು ಅನ್ಲಾಕ್ ಮಾಡಬಹುದು ಎಂಬ ಅಲೋಚನೆಯಲ್ಲಿ ಒಂದು ದಿನದ ಹಿಂದೆ ಕೊಡಗಿನಲ್ಲಿ 9.02 ಇದ್ದ ಪಾಸಿಟಿವಿಟಿ ದರ ಕೇವಲ ಒಂದೇ ದಿವಸದಲ್ಲಿ ಅದರಲ್ಲೂ ರಾಜ್ಯ ಅನ್ಲಾಕ್ ಮಾಡುವ ಎರಡು ದಿವಸದ ಹಿಂದೆ ಶೇ 4.02 ಪಾಸಿಟಿವಿಟಿ ದರ ತೋರಿಸಿರುವುದರ ಹಿಂದೆ ಏನು ಉದ್ದೇಶವಿದೆ?.

ಶನಿವಾರ ಪಾಸಿಟಿವಿಟಿ ದರ 4.02 ಇದ್ದರೆ ಮರುದಿನವೇ ಭಾನುವಾರ ಶೇ 11.84 ತಲುಪಿದ್ದು, ಶನಿವಾರದ ಪಾಸಿಟಿವ್ ಪ್ರಕರಣವನ್ನು ಉದ್ದೇಶದಿಂದಲೇ ತಡೆಹಿಡಿಯಲಾಗಿತ್ತು. ಆದರೆ ಮುಖ್ಯಮಂತ್ರಿಗಳು ದಿವಸದ ಹಿಂದಿನ ಪಾಸಿಟಿವಿಟಿ ದರವನ್ನು ತೆಗೆದುಕೊಂಡು ಲಾಕ್ಡೌನ್ ಮುಂದುವರಿಸಿರುವುದು ಸ್ವಾಗತಾರ್ಹ.
ಯಾರು ಏನೇ ತಲೆಕೆಳಗೆ ಮಾಡಿದರೂ ಜುಲೈ ಮೊದಲ ವಾರದವರೆಗೂ ಲಾಕ್ಡೌನ್ ಸಡಿಲಿಸಲು ಅವಕಾಶ ಕೊಡುವುದಿಲ್ಲ. ಅನಿವಾರ್ಯ ಎಂದರೆ ವಿವಿಧ ಸಂಘಟನೆಗಳ ಹಾಗೂ ಸಾರ್ವಜನಿಕರ ಸಹಕಾರದಿಂದ ಬೀದಿಗಿಳಿದು ಹೋರಾಡಲು ಸಿದ್ದ ಎಂದಿರುವ ಅಖಿಲ ಕೊಡವ ಸಮಾಜ ಯುವ ಘಟಕ ಈ ಕಾಣದ ಕೈಗಳ ಕಣ್ಣಾಮುಚ್ಚಾಲೆ ಕ್ರಮವನ್ನು ಖಂಡಿಸಿದೆ.
ಈಗಾಗಲೇ ಕಳೆದ ಮೂರು ವರ್ಷ ಮಳೆಗಾಲದಲ್ಲಿ ಕೊಡಗಿನ ಜನರು ತತ್ತರಿಸಿದ್ದು, ಇದೀಗ ಕೊರೊನಾ ಜನರ ಬದುಕನ್ನು ನುಂಗಿ ಹಾಕಿದೆ. ಯಾವುದೇ ಕಾರಣಕ್ಕೂ ಮಳೆಗಾಲ ಮುಗಿಯುವವರೆಗೂ ಕೇರಳ ರಾಜ್ಯ ಹಾಗೂ ಕರ್ನಾಟಕ ರಾಜ್ಯದ ಬೇರೆ ಬೇರೆ ಗಡಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ಬಿಡುವುದಿಲ್ಲ. ಕೊಡಗಿನಲ್ಲಿ ಮಳೆಗಾಲ ಮುಗಿಯುವವರೆಗೂ ಪ್ರವಾಸೋದ್ಯಮಕ್ಕೆ ಅವಕಾಶ ಮಾಡಿಕೊಡಬಾರದು ಎಂಬ ಒತ್ತಾಯವನ್ನು ಈಗಾಗಲೇ ಮಾಡಿದ್ದು, ಯಾವುದೇ ಕಾರಣಕ್ಕೂ ಈ ಒತ್ತಾಯದಿಂದ ಹಿಂದೆ ಸರಿಯುವುದಿಲ್ಲ ಎಂದು ಒತ್ತಾಯಿಸಿದ್ದಾರೆ.
ಇದೆಲ್ಲಾವು ಅನ್ಲಾಕ್ ಗಿಮಿಕ್ ಎಂದು ಹೇಳಿರುವ ಅಖಿಲ ಕೊಡವ ಸಮಾಜ ಯುವ ಘಟಕ ಕೊಡಗಿನಲ್ಲಿ ಕೊರೊನಾ ಸಂಪೂರ್ಣವಾಗಿ ಹತೋಟಿ ಬರುವವರೆಗೂ ಕನಿಷ್ಟ ಈ ಜುಲೈ ಮೊದಲ ವಾರದತನಕ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೊಳಿಸಬೇಕಿದೆ ಎಂದು ಒತ್ತಾಯಿಸಿದೆ.
ಈಗಾಗಲೇ ಕೊಡಗಿನ ಗಡಿ ಗೇಟಿನಿಂದ ಜನರು ಮುಕ್ತವಾಗಿ ಓಡಾಡುತ್ತಿದ್ದು, ಹೊರ ಜಿಲ್ಲೆಯಲ್ಲಿರುವ ಜಿಲ್ಲೆಯ ರೈತರನ್ನು ಹೊರತುಪಡಿಸಿದ್ದರೆ ಯಾವುದೇ ಪ್ರವಾಸಿಗರು ಹಾಗೂ ಅನಗತ್ಯ ಓಡಾಡುವವರಿಗೆ ಅವಕಾಶ ಮಾಡಿಕೊಡಬಾರದು. ಗಡಿಯನ್ನು ಒಂದಷ್ಟು ಬಿಗಿ ಮಾಡಿ ಮುಂದಿನ ತಿಂಗಳಾದರು ಕೊಡಗಿನೊಳಗೆ ಜನರು ಮುಕ್ತವಾಗಿ ಓಡಾಡಲು ಅವಕಾಶ ಮಾಡಿಕೊಡಬೇಕಾಗಿದೆ.












Click it and Unblock the Notifications