ಹಣ ದುಪ್ಪಟ್ಟು ಆಮಿಷ; ಲಕ್ಷಾಂತರ ರೂ. ವಂಚನೆ
ಮಡಿಕೇರಿ, ಜನವರಿ 19; ಇಂದು ವಂಚಕರು ಹಣ ಮಾಡಲು ಅನೇಕ ಉಪಾಯ ಅನುಸರಿಸುತ್ತಿದ್ದಾರೆ. ಜನರಾದರೂ ಬ್ಯಾಂಕಿನಲ್ಲಿ ಬಡ್ಡಿ ಕಡಿಮೆ ಎಂದು ಬೇಗ ಶ್ರೀಮಂತರಾಗಿಬಿಡೋಣ ಎಂದು ಅಮಿಷ ವೊಡ್ಡಿದರೆ ಸಂತೋಷದಿಂದಲೇ ಹಣ ಹೂಡಿಕೆ ಮಾಡುತ್ತಾರೆ.
ಹಣ ನೀಡಿ ವಂಚನೆಗೆ ಒಳಗಾದ ಬಗ್ಗೆ ಸುದ್ದಿಗಳು ಮಾಧ್ಯಮಗಳಲ್ಲಿ ಬಂದರೂ ಜಾಗೃತಗೊಳ್ಳದ ಜನರು ಆಮಿಷಕ್ಕೆ ಬಲಿಯಾಗಿ ಹಣ ಕಳೆದುಕೊಳ್ಳುತ್ತಾರೆ. ಜನರಿಂದ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಇಂತಹ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದೆ.
ಜನರಿಗೆ ವಂಚನೆ ಮಾಡಿದ ವ್ಯಕ್ತಿಯನ್ನು ಮೈಸೂರಿನ ರೆಹಮತ್ವುಲ್ಲಾ ಎಂದು ಗುರುತಿಸಲಾಗಿದೆ. ಈತ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ನಗರದಲ್ಲಿರುವ ನ್ಯೂ ಡೈಮಂಡ್ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಸೊಸೈಟಿ ಶಾಖೆಯನ್ನು ಕುಶಾಲನಗರದಲ್ಲಿ ಆರಂಭಿಸುವುದಾಗಿ ಹೇಳಿದ್ದ.

ಕಳೆದ ಐದು ತಿಂಗಳ ಹಿಂದೆ ಕಚೇರಿಯನ್ನು ಸಹ ಆರಂಭಿಸಿದ್ದ. ಬಳಿಕ ಸ್ಥಳೀಯ 7-8 ಜನರನ್ನು ಸಿಬ್ಬಂದಿಯಾಗಿ ನೇಮಿಸಿಕೊಂಡಿದ್ದಾರೆ. ಸುತ್ತಮುತ್ತಲ ಹಳ್ಳಿಗಳ 300 ಜನರಿಗೆ ಬಗೆ-ಬಗೆಯ ಅಮಿಷವೊಡ್ಡಿ ತಲಾ 5 ಸಾವಿರ ರೂಪಾಯಿಯಂತೆ 15 ಲಕ್ಷ ಹಣ ಸಂಗ್ರಹಿಸಿದ್ದ.
ನಯ ವಂಚಕನಾಗಿದ್ದ ಈತ ತನ್ನ ಬಣ್ಣದ ಮಾತುಗಳಿಂದಲೇ ಜನರನ್ನು ಬಲೆಗೆ ಕೆಡವುತ್ತಿದ್ದ. ಕೇವಲ 5 ಸಾವಿರ ಕಟ್ಟಿದರೆ, 1 ಲಕ್ಷ ರೂಪಾಯಿ ಸಾಲವನ್ನು ಸೊಸೈಟಿಯು ನೀಡುತ್ತದೆ. ಆದರೆ, ಅದನ್ನು ಸಾಲ ಪಡೆದವರು ಎರಡು ವರ್ಷಗಳಲ್ಲಿ ತೀರಿಸಬೇಕೆಂದು ಷರತ್ತು ವಿಧಿಸಿದ್ದ.
ಆದರೆ, ಸೊಸೈಟಿ ಪ್ರಾರಂಭಗೊಂಡು ಮೂರು ತಿಂಗಳಾದರೂ ಸಿಬ್ಬಂದಿಗೆ ಸರಿಯಾಗಿ ಸಂಬಳವನ್ನೂ ನೀಡಿಲ್ಲ ಮತ್ತು ಹಣ ಕಟ್ಟಿದವರಿಗೆ ಸಾಲವನ್ನೂ ನೀಡಿಲ್ಲ . ಈ ಬಗ್ಗೆ ಅನುಮಾನಗೊಂಡ ಕುಶಾಲನಗರ ಶಾಖೆಯ ಸಿಬ್ಬಂದಿ ನಳಿನಿ ಎಂಬವರು ಬಾಗೇಪಲ್ಲಿಗೆ ಹೋಗಿ ವಿಚಾರಿಸಿದಾಗ ನ್ಯೂ ಡೈಮಂಡ್ ಕೋ ಆಪರೇಟಿವ್ ಸೊಸೈಟಿ ಶಾಖೆಯು ಮುಚ್ಚಿ ವರ್ಷಗಳೇ ಆಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

ವಿಷಯ ತಿಳಿದ ನಳಿನಿ ಮತ್ತು ಹಣ ಕಟ್ಟಿದ್ದ ನೂರಾರು ಜನರು ರೆಹಮತುಲ್ಲಾನಿಗೆ ದೂರವಾಣಿ ಕರೆ ಮಾಡಿದರೆ ನಾಟ್ ರೀಚೆಬಲ್ ಬಂದಿದೆ. ಹೂಡಿಕೆದಾರರು ಮಂಗಳವಾರ ಹಣವನ್ನು ವಾಪಸ್ ನೀಡದೆ ಮೋಸ ಮಾಡುತ್ತಿರುವುದಾಗಿ ಕೊಡಗು ಎಸ್ ಪಿ ಕಚೇರಿಗೆ ದೂರು ಸಲ್ಲಿಸಿದ್ದಾರೆ.
ಇದೇ ಅಲ್ಲದೆ ಈತ ಫೋರ್ಟಿಸ್ ಆಸ್ಪತ್ರೆ ಮತ್ತು ನಾರಾಯಣ ಹೃದಯಾಲಯ ಬೆಂಗಳೂರು ಮತ್ತು ಮೈಸೂರು ಆಸ್ಪತ್ರೆಗಳಲ್ಲಿ ಕೆಲಸ ಕೊಡಿಸುವುದಾಗಿ ಕೆಲವರಿಂದ 3 ಲಕ್ಷ ರೂಪಾಯಿ ಹಣ ಪಡೆದು ಮೋಸ ಮಾಡಿರುವುದಾಗಿಯೂ ಆರೋಪ ಕೇಳಿ ಬಂದಿದೆ.
ಕುಶಾಲನಗರದಲ್ಲಿ ಕಳೆದ ಐದು ವರ್ಷಗಳಲ್ಲಿ ಈ ರೀತಿಯ ವಂಚನೆ ನಡೆಯುತ್ತಿರುವುದು ಏಳದಿಂದ ಎಂಟನೇ ಬಾರಿ ಆಗಿದೆ. ಆದರೆ, ಜನರು ವಂಚನೆಗೊಳಗಾಗಿ ಪೋಲೀಸ್ ಠಾಣೆಯ ಮೆಟ್ಟಿಲು ಹತ್ತುವುದು ನಿಂತಿಲ್ಲ. ಈ ಪ್ರಕರಣದ ಕುರಿತು ತನಿಖೆ ಮುಂದುವರೆದಿದೆ.












Click it and Unblock the Notifications