ಭೂಕುಸಿತದಲ್ಲಿ ನಾಪತ್ತೆಯಾದ ಅರ್ಚಕರು; ತಲಕಾವೇರಿ ಪೂಜೆ ನಡೆಸುವವರಾರು?
ಮಡಿಕೇರಿ, ಆಗಸ್ಟ್ 11: ಕಳೆದ ಕೆಲ ದಿನಗಳ ಹಿಂದೆ ಕೊಡಗು ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದಿತ್ತು. ಆ ಬೆಟ್ಟದ ತಪ್ಪಲಲ್ಲೇ ವಾಸವಿದ್ದ ತಲಕಾವೇರಿ ದೇಗುಲದ ಪ್ರಧಾನ ಅರ್ಚಕರಾದ ನಾರಾಯಣಾಚಾರ್ ಅವರ ಕುಟುಂಬದ ಐದು ಮಂದಿ ಭೂಕುಸಿತದ ಘಟನೆಯಲ್ಲಿ ನಾಪತ್ತೆಯಾಗಿದ್ದರು. ಅವರ ಸುಳಿವು ಇನ್ನೂ ದೊರೆತಿಲ್ಲ. ಈ ನಡುವೆ ಇನ್ನು ಮುಂದೆ ತಲಕಾವೇರಿಯಲ್ಲಿ ಪೂಜೆ ಮಾಡುವ ಕುರಿತೂ ಪ್ರಶ್ನೆ ಎದ್ದಿದೆ.
ತಲಕಾವೇರಿ ದೇವಾಲಯದಲ್ಲಿ ದೈನಂದಿನ ಪೂಜಾ ಕಾರ್ಯವನ್ನು ಪುನರ್ ಆರಂಭಿಸಲು ತೀರ್ಮಾನಿಸಲಾಗಿದೆ. ಈ ಕುರಿತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ತಲಕಾವೇರಿ ಕ್ಷೇತ್ರ ಕೊಡಗಿನ ಪುಣ್ಯಕ್ಷೇತ್ರ. ತಂತ್ರಿಯವರ ಸಲಹೆ, ಮಾರ್ಗದರ್ಶನದಂತೆ ತಲಕಾವೇರಿ ದೇವಾಲಯದ ರಸ್ತೆ ಸಂಚಾರಕ್ಕೆ ಯೋಗ್ಯವಾದ ನಂತರ ಧಾರ್ಮಿಕ ಪರಿಹಾರ ಕಾರ್ಯ ಕೈಗೊಂಡು ದೈನಂದಿನ ಪೂಜಾ ಕಾರ್ಯ ಕೈಗೊಳ್ಳಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ. ಇನ್ನು ಮುಂದೆ ಭಾಗಮಂಡಲದ ಅರ್ಚಕರೇ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮತ್ತೆ ಪೂಜಾ ಕಾರ್ಯ ಆರಂಭ
ಸಭೆಯಲ್ಲಿ ಭಾಗಮಂಡಲ ಭಗಂಡೇಶ್ವರ-ತಲಕಾವೇರಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಿ.ಎಸ್.ತಮ್ಮಯ್ಯ ಮಾತನಾಡಿ, ತಲಕಾವೇರಿ ದೇವಾಲಯ ಬಳಿ ಭೂಕುಸಿತವುಂಟಾಗಿ ಅವಘಡ ಸಂಭವಿಸಿದೆ. ಇದು ಆಗಬಾರದಿತ್ತು, ಆಗಿ ಹೋಗಿದೆ. ತಂತ್ರಿಗಳ ಸಲಹೆಯಂತೆ ಪೂಜಾ ಕಾರ್ಯ ಆರಂಭಿಸಬೇಕಿದೆ ಎಂದು ಮನವಿ ಮಾಡಿದರು. ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು ಮಾತನಾಡಿ, ದೇವಾಲಯದಲ್ಲಿ ಇದುವರೆಗೆ ಪೂಜಾ ಕಾರ್ಯಗಳು ನಿಂತಿರಲಿಲ್ಲ. ಭೂಕುಸಿತದಿಂದಾಗಿ ತಲಕಾವೇರಿ ದೇವಾಲಯಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಕಳೆದ ಒಂದು ವಾರದಿಂದ ಪೂಜೆ ಕಾರ್ಯ ನಿಂತು ಹೋಗಿದೆ. ರುದ್ರಾಭಿಷೇಕ, ಗಣಪತಿ ಹೋಮ ಮತ್ತಿತರ ಪೂಜಾ ಕಾರ್ಯ ಕೈಗೊಂಡು ತಂತ್ರಿಗಳ ಮಾರ್ಗದರ್ಶನ ಹಾಗೂ ಭಕ್ತರ ಭಾವನೆಗೆ ಧಕ್ಕೆಯಾಗದಂತೆ ಪೂಜಾ ಕಾರ್ಯವನ್ನು ಪುನರ್ ಆರಂಭಿಸಬೇಕಿದೆ ಎಂದು ಸಲಹೆ ನೀಡಿದರು.

ಭಗಂಡೇಶ್ವರ ದೇವಾಲಯದ ಅರ್ಚಕರಿಗೆ ಸಲಹೆ
ಸಭೆಯಲ್ಲಿ ಎಲ್ಲರಿಂದ ಮಾಹಿತಿ ಪಡೆದ ಬಳಿಕ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಮಾತನಾಡಿ, ತಂತ್ರಿಗಳ ಸಲಹೆ, ಮಾರ್ಗದರ್ಶನದಂತೆ ಪೂಜಾ ಕಾರ್ಯ ಮುಂದುವರೆಸಲು ಭಗಂಡೇಶ್ವರ ದೇವಾಲಯದ ಅರ್ಚಕರಿಗೆ ಸಲಹೆ ಮಾಡಿ ನಿಷ್ಕಲ್ಮಶವಾಗಿ, ಶಾಸ್ತ್ರೋಕ್ತವಾಗಿ ಪೂಜೆ ಮಾಡಬೇಕು. ಪೂಜೆ ಸಂದರ್ಭದಲ್ಲಿ ಸಣ್ಣ ಲೋಪ ಉಂಟಾಗದಂತೆ ಎಚ್ಚರವಹಿಸಬೇಕು ಎಂದು ಹೇಳಿದರು. ಇದಕ್ಕೆ ನಾರಾಯಣಾಚಾರ್ ಕುಟುಂಬದ ಅರ್ಚಕರು ಸಹಮತ ವ್ಯಕ್ತಪಡಿಸಿದರು.

ಭೂಕುಸಿತದಲ್ಲಿ ನಾಪತ್ತೆಯಾಗಿರುವ ಅರ್ಚಕ ಕುಟುಂಬ
ಕೆಲ ದಿನಗಳ ಹಿಂದಷ್ಟೇ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಗುಡ್ಡ ಕುಸಿತವುಂಟಾಗಿ ಮನೆಗಳ ಮೇಲೆ ಬೆಟ್ಟ ಉರುಳಿದೆ. ಅಲ್ಲಿ ವಾಸವಿದ್ದ ತಲಕಾವೇರಿ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣಾಚಾರ್ ಅವರ ಕುಟುಂಬದ ಐವರು ನಾಪತ್ತೆಯಾಗಿದ್ದರು. ನಂತರ ಒಬ್ಬರ ಮೃತದೇಹ ದೊರೆತಿತ್ತು. ಇನ್ನು ಉಳಿದ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಸೋಮಣ್ಣ ಭೇಟಿ ಮಾಡಿದ ಅರ್ಚಕ ಕುಟುಂಬ
ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವ ತಲಕಾವೇರಿ ಪ್ರಧಾನ ಅರ್ಚಕರಾಗಿದ್ದ ನಾರಾಯಣಾಚಾರ್ ಅವರ ಮಕ್ಕಳು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿದರು. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಲ್ಲಿ ನೆಲೆಸಿರುವ ಈ ಇಬ್ಬರು ಮಕ್ಕಳು ತಲಕಾವೇರಿಗೆ ಬಂದು ಸೋಮವಾರ ಭಾಗಮಂಡಲ ಹೋಟೆಲ್ ಮಯೂರದಲ್ಲಿ ವಿ. ಸೋಮಣ್ಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು, ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದರು. ನಾಪತ್ತೆಯಾದವರ ಶೋಧ ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಸೋಮಣ್ಣ ಅವರು ಮಾಹಿತಿ ನೀಡಿದರು.












Click it and Unblock the Notifications