ಕೊಡಗಿನ ಕಾಫಿ ಬೆಳೆಗಾರರಿಗೆ ಇದೀಗ ಕರಡಿ ಕಾಟ
ಮಡಿಕೇರಿ, ಜನವರಿ 27; ದೇಶದ ಪ್ರಮುಖ ಕಾಫಿ ಬೆಳೆಯುವ ಜಿಲ್ಲೆಯಾದ ಕೊಡಗಿನಲ್ಲಿ ಬೆಳೆಗಾರರು ಕುಸಿದ ಬೆಲೆ, ಏರಿದ ಉತ್ಪಾದನಾ ವೆಚ್ಚ ಮತ್ತು ಪ್ರಾಕೃತಿಕ ವಿಕೋಪಗಳ ಕಾರಣದಿಂದಾಗಿ ಸಂಕಷ್ಟದಲ್ಲಿದ್ದಾರೆ. ಕಾಡಾನೆಗಳ ಹಾವಳಿಯಿಂದಾಗಿ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಸಿಗುತ್ತಿಲ್ಲ. ಕಾಡು ಹಂದಿ, ಮಂಗಗಳ ಕಾಟವೂ ಇದೆ.
ಕೊಡಗಿನಲ್ಲಿ ಈಗ ಕಾಡಾನೆ ಹಾವಳಿಯ ಜತೆಗೆ ಕರಡಿಗಳ ಕಾಟವೂ ಸೇರ್ಪಡೆ ಆಗಿದೆ. ಇತರ ಪ್ರಾಣಿಗಳ ಉಪಟಳದ ಜೊತೆಗೆ ಕರಡಿಗಳ ಕಾಟವನ್ನೂ ಸಹಿಸಿಕೊಳ್ಳಬೇಕಾಗದ ಪರಿಸ್ಥಿತಿ ಕಾಫಿ ಬೆಳೆಗಾರರಿಗೆ ಉಂಟಾಗಿದೆ.
ಕಾಡು ಪ್ರಾಣಿಗಳು ಕಾಫಿ ಫಸಲನ್ನು ತಿನ್ನುವುದು ಬಹಳ ಅಪರೂಪ. ಆದರೆ ತಿನ್ನುವುದಿಲ್ಲ ಎನ್ನಲು ಸಾಧ್ಯವಿಲ್ಲ ಮತ್ತು ತಿನ್ನುವುದರಿಂದ ಆಗುವ ಫಸಲಿನ ನಷ್ಟ ಅಲ್ಪ ಪ್ರಮಾಣದ್ದಾಗಿದೆ. ಇದೀಗ ಕರಡಿಗಳು ಕಾಫಿ ಹಣ್ಣನ್ನು ತಿನ್ನುತ್ತಿರುವ ಘಟನೆ ದಕ್ಷಿಣ ಕೊಡಗಿನ ವೀರಾಜಪೇಟೆ ಮತ್ತು ಪೊನ್ನಂಪೇಟೆಯ ಕೆಲ ಕಾಫಿ ತೋಟಗಳಲ್ಲಿ ವರದಿ ಆಗಿದೆ.

ಇತ್ತೀಚೆಗಷ್ಟೇ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಕರಡಿಗಳ ದಾಳಿ ನಡೆದ ಘಟನೆಗಳೂ ಇವೆ. ಡಿಸೆಂಬರ್, ಜನವರಿ, ಫೆಬ್ರುವರಿ ತಿಂಗಳು ಕಾಫಿಯ ಹಣ್ಣಾಗುವ ಸಮಯವಾಗಿದ್ದು ಕೊಯ್ಲಿಗೆ ಬಂದಿರುತ್ತವೆ.
ಈ ಸಂದರ್ಭದಲ್ಲಿ ಕಾಡಾನೆಗಳ ಜೊತೆಯಲ್ಲಿ ಕಾಡುಕೋಣ, ಕಾಡೆಮ್ಮೆ, ಕಾಡು ಹಂದಿ, ಕಾಡು ಬೆಕ್ಕು, ಕೋತಿಗಳು ಕೂಡ ತೋಟಕ್ಕೆ ಲಗ್ಗೆ ಇಡಲು ಆರಂಭಿಸುತ್ತವೆ. ಹಣ್ಣು ಕಾಫಿಯ ರುಚಿಯನ್ನು ಒಮ್ಮೆ ಸವಿದ ನಂತರ ಮತ್ತೆ ಮತ್ತೆ ಬಂದು ಬೆಳೆಗಾರನಿಗೆ ನಷ್ಟ ಉಂಟುಮಾಡುತ್ತವೆ. ಈ ವರ್ಷ ಕರಡಿಗಳ ಕಾಟವೂ ಹೊಸ ತಲೆ ನೋವಿಗೆ ಕಾರಣವಾಗಿದೆ.
ಆನೆಗಳು, ಮಂಗಗಳು ಕಾಫಿ ಬೀಜಗಳನ್ನು ಚಪ್ಪರಿಸುವಂತೆ ಕರಡಿಗಳು ಸಹ ಕಾಫಿ ಹಣ್ಣಿನ ತೆಳುವಾದ ಸಿಹಿ ರುಚಿಗೆ ಆಕರ್ಷಿತವಾಗಿವೆ. ಕಾಫಿ ಬೀಜಗಳನ್ನು ಕರಡಿಗಳು ತಿಂದು ಹಾಕುತ್ತಿರುವ ಬಗ್ಗೆ ಈ ವ್ಯಾಪ್ತಿಯ ಬೆಳೆಗಾರರು ದೂರಿಕೊಂಡಿದ್ದಾರೆ. ಕಾರ್ಮಿಕರ ಕೊರತೆಯಿಂದಾಗಿ ಬಹಳಷ್ಟು ತೋಟಗಳಲ್ಲಿ ಕಾಫಿ ಹಣ್ಣುಗಳನ್ನು ಕೊಯ್ಲು ಮಾಡಲಾಗದೆ ಮಾಗುತ್ತಿವೆ.

ಇಂತಹ ಸಂಕಷ್ಟ ಸಮಯದಲ್ಲಿ ಕಾಡು ಪ್ರಾಣಿಗಳೂ ಬೆಳೆಗಾರನ ಗಾಯಕ್ಕೆ ಉಪ್ಪು ಸವರುವ ಕೆಲಸ ಮಾಡುತ್ತಿವೆ. ತಿತಿಮತಿ, ಪಾಲಿಬೆಟ್ಟ ಭಾಗಗಳಲ್ಲಿ ಮಂಗಗಳು ಮತ್ತು ಆನೆಗಳು ಕಾಫಿ ಹಣ್ಣಗಳನ್ನು ತಿಂದು ಹಾಳುಗೆಡುವುತ್ತಿದ್ದರೆ, ಬಾಳೆಲೆ ಹೋಬಳಿ ವ್ಯಾಪ್ತಿಯಲ್ಲಿ ಕರಡಿಗಳು ಕಾಫಿ ಹಣ್ಣುಗಳನ್ನು ಸ್ವಾಹ ಮಾಡುತ್ತಿವೆ.
ಕಾಫಿ ತೋಟಗಳಲ್ಲಿ ಅಡಗಿಕೊಂಡಿರುವ ಕರಡಿಗಳು ಮಾಲೀಕರನ್ನು ಮತ್ತು ಕಾರ್ಮಿಕರನ್ನು ಆತಂಕಕ್ಕೀಡು ಮಾಡಿವೆ. ದಿಢೀರನೆ ಮಾನವನ ಮೇಲೆ ದಾಳಿ ನಡೆಸುತ್ತಿರುವುದರಿಂದ ಕಾರ್ಮಿಕರು ತೋಟಗಳಿಗೆ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಈ ಕುರಿತು ಒನ್ ಇಂಡಿಯಾ ಕನ್ನದ ಜೊತೆ ಮಾತನಾಡಿದ ಶ್ರೀಮಂಗಲದ ಕಾಫಿ ಬೆಳೆಗಾರ ಅಣ್ಣೀರ ಹರೀಶ್ ಮಾದಪ್ಪ, "ಈಗ ತೋಟಗಳಿಗೆ ನುಗ್ಗಿ ನಷ್ಟ ಮಾಡುತ್ತಿರುವ ಕರಡಿಗಳ ಸಂಖ್ಯೆ ಎಷ್ಟಿದೆ ಎಂದು ಹೇಳಲು ಆಗುತ್ತಿಲ್ಲ. ಕರಡಿಗಳಿಗೆ ಕಾಫಿ ಹಣ್ಣು ಪೂರ್ಣ ಆಹಾರ ಅಲ್ಲದಿದ್ದರೂ ಕಾಡಿನಲ್ಲಿ ಮೇವಿನ ಕೊರತೆ ಇರುವುದರಿಂದ ಹಣ್ಣು ತಿನ್ನಲು ಬರುತ್ತಿವೆ" ಎಂದರು.
"ಈ ಕರಡಿಗಳು ಸಮೀಪದ ನಾಗರಹೊಳೆ ಅಭಯಾರಣ್ಯದಿಂದ ಬರುತ್ತಿದ್ದು ಇವುಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಮುಂದಾಗಬೇಕಿದೆ" ಎಂದು ಮತ್ತೋರ್ವ ಕಾಫಿ ಬೆಳೆಗಾರ ಬಾಳೆಲೆಯ ಸುಜಾ ಕುಶಾಲಪ್ಪ ಸರ್ಕಾರವನ್ನು ಒತ್ತಾಯಿಸಿದರು.












Click it and Unblock the Notifications