ವೃದ್ಧಿ ಕಾಣದ ನಾಯಿಗಾಗಿ ಕೊಡಗಿನಲ್ಲಿ ವಿಶಿಷ್ಟ ಆಚರಣೆ!
ಹಿಂದಿನ ಕಾಲದಲ್ಲಿ ಮನೆಗಳಲ್ಲಿ ಸಾಕಲಾಗುವ ನಾಯಿಗಳು ವೃದ್ಧಿ ಕಾಣದಿದ್ದರೆ ದೇವರಿಗೆ ಮಣ್ಣಿನ ನಾಯಿಯನ್ನು ಒಪ್ಪಿಸುವುದಾಗಿ ಹರಕೆ ಮಾಡಿಕೊಳ್ಳುತ್ತಿದ್ದರು. ಇದು ಈಗಲೂ ಮುಂದುವರೆದಿದೆ. ಈ ಆಚರಣೆಯನ್ನು ಮೂಢನಂಬಿಕೆ ಎಂದು ಯಾರೂ ಪರಿಗಣಿಸುವುದಿಲ್ಲ.
ಮಡಿಕೇರಿ, ಡಿಸೆಂಬರ್ 16 : ಕೊಡಗಿನಲ್ಲಿ ಒಂದು ವಿಶಿಷ್ಟ ಆಚರಣೆ ನಂಬಿಕೆಯಿದೆ. ಅದು ಏನೆಂದರೆ ತಮ್ಮ ಮನೆಯಲ್ಲಿ ಸಾಕಲಾಗುವ ನಾಯಿ ಏಳ್ಗೆ ಕಾಣದೆ ಹೋದರೆ ದೇವರಿಗೆ ಮಣ್ಣಿನ ನಾಯಿಯನ್ನು ಹರಕೆಯಾಗಿ ಅರ್ಪಿಸುತ್ತಾರೆ.
ಈ ಹರಕೆಯನ್ನು ಎಲ್ಲ ದೇವರಿಗೂ ಅರ್ಪಿಸುವುದಿಲ್ಲ. ಕೆಲವೇ ಕೆಲವು ದೇವರಿಗೆ ಮಾತ್ರ ಅರ್ಪಿಸಲಾಗುತ್ತಿದೆ. ಇಂತಹ ದೇವರ ಪೈಕಿ ನಾಪೋಕ್ಲು ಸಮೀಪದ ಬೇತುವಿನಲ್ಲಿರುವ ಮಕ್ಕಿಶಾಸ್ತಾವು ದೇವಾಲಯವು ಒಂದಾಗಿದೆ.
ಇಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ವರ್ಷದ ಮೊದಲ ಹಬ್ಬದ ಸಂದರ್ಭ ಹರಕೆಯಾಗಿ ಮಣ್ಣಿನ ನಾಯಿಗಳನ್ನು ಹಾಕುವುದು ಇಲ್ಲಿಯ ಸಂಪ್ರದಾಯ. ಅಷ್ಟೇ ಅಲ್ಲ ನಂಬಿಕೆಯೂ ಆಗಿದೆ. ಹೀಗಾಗಿ ಇಲ್ಲಿ ಹರಕೆಯಾಗಿ ಅರ್ಪಿಸಿದ ಸಹಸ್ರಾರು ಮಣ್ಣಿನ ನಾಯಿಗಳೇ ಸಾಕ್ಷಿಯಾಗಿದೆ. [ನಾಯಿಗಾಗಿ ಮದುವೆ ಮುರಿದುಕೊಂಡ ಬೆಂಗಳೂರು ಹುಡುಗಿ]
ಮಕ್ಕಿ ಶ್ರೀ ಶಾಸ್ತಾವು ದೇವಾಲಯ ಕೊಡಗಿನಲ್ಲಿರುವ ದೇವಾಲಯಗಳ ಪೈಕಿ ವಿಭಿನ್ನ ಮತ್ತು ವಿಶಿಷ್ಟವಾಗಿದೆ. ಇಲ್ಲಿ ವರ್ಷಕ್ಕೆ ಎರಡು ಬಾರಿ ಹಬ್ಬ ನಡೆಯುತ್ತಿದ್ದು, ಈಗಾಗಲೇ ಮೊದಲ ಹಬ್ಬ ಆರಂಭವಾಗಿದೆ. ಎರಡು ಹಬ್ಬಗಳಲ್ಲೂ ವಿಶಿಷ್ಟತೆಗಳನ್ನು ಕಾಣಬಹುದು. ಹಬ್ಬದ ಸಂದರ್ಭ ಹರಕೆಯ ಮಣ್ಣಿನ ನಾಯಿ ಒಪ್ಪಿಸುವುದು, ಎತ್ತುಪೋರಾಟ, ದೀಪಾರಾಧನೆ, ಅಜ್ಜಪ್ಪ ಮತ್ತು ವಿಷ್ಣುಮೂರ್ತಿ ಕೋಲಗಳು ನಡೆಯುತ್ತವೆ. [ಶ್ವಾನಪ್ರಿಯರಲ್ಲದವರು ಈ ಲೇಖನ ಓದಬೇಡಿ!]

ಮಣ್ಣಿನ ನಾಯಿಯ ಅರ್ಪಣೆ
ಹಬ್ಬಕ್ಕೆ ಮೊದಲು ವೃಶ್ಚಿಕ ಮಾಸದಲ್ಲಿ ಮಣ್ಣಿನಿಂದ ನಾಯಿಯನ್ನು ತಯಾರಿಸಿ ಬಳಿಕ ಹಬ್ಬದ ಸಂದರ್ಭ ಅರ್ಪಿಸಲಾಗುತ್ತದೆ. ದೇವಾಲಯ ನೆಲೆ ನಿಂತಿರುವ ಬೇತುಗ್ರಾಮದ 12 ಕುಳದವರು 12 ಜೊತೆ ನಾಯಿಯನ್ನು ಹರಕೆಯ ರೂಪದಲ್ಲಿ ಸಲ್ಲಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ.

ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಕೆ
ಹಬ್ಬದ ಮೊದಲ ದಿನ ಬೆಳಗಿನ ಜಾವ ಯಾರೂ ಕಾಣದಂತೆ ಬೇತು ಮಂದ್ ಸಮೀಪದ ಕರ್ಪತಚ್ಚನ್ ನಡೆ ಎಂಬ ಸ್ಥಳಕ್ಕೆ ತಯಾರಿಸಲಾದ ನಾಯಿಗಳನ್ನು ಸಾಗಿಸಲಾಗುತ್ತದೆ. ಆ ನಂತರ ಬೆಳಗಿನ 11 ಗಂಟೆ ಸುಮಾರಿಗೆ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಹೂ ಗಂಧಗಳ ಲೇಪನ
ದೇವಾಲಯಕ್ಕೆ ಸಂಬಂಧಿಸಿದವರು ಮತ್ತು ಮಣ್ಣಿನ ನಾಯಿಯ ಹರಕೆ ಹೊತ್ತವರು ಸೇರಿದಂತೆ ಸಂಬಂಧಪಟ್ಟ ಮುಖ್ಯಸ್ಥರೊಡನೆ ಮಣ್ಣಿನ ನಾಯಿಗಳನ್ನು ಶೇಖರಿಸಿಟ್ಟ ಸ್ಥಳಕ್ಕೆ ತೆರಳಿ, ಹೂ ಗಂಧಗಳ ಲೇಪನಗಳಿಂದ ಪೂಜಿಸಿ, ಬಳಿಕ ದೇವಾಲಯಕ್ಕೆ ಹೊತ್ತು ತಂದು ದೇವರಿಗೆ ಅರ್ಪಿಸಲಾಗುತ್ತದೆ.

ಸೌದೆ ಸಂಗ್ರಹಿಸುವ ಪುರುಷರು
ಇನ್ನು ನಾಯಿ ಒಪ್ಪಿಸುವ ಒಂದು ದಿನ ಮುಂಚಿತವಾಗಿ ಸಂಬಂಧಿಸಿದ ಕುಟುಂಬದ ಪುರುಷರು ದೇವಾಲಯದ ಸಮೀಪ ಕಲ್ಲಿನ ಒಲೆ ನಿರ್ಮಿಸಿ ಸೌದೆ ಸಂಗ್ರಹಿಸಿಡುತ್ತಾರೆ. ಪುರುಷರು ಮಾತ್ರವಲ್ಲ ಮಹಿಳೆಯರು ಕೂಡ ಈ ಆಚರಣೆಯಲ್ಲಿ ಪಾಲ್ಗೊಳ್ಳುವುದು ವಿಶೇಷ.

ನಾಯಿಗಳಿಗೆ ರೊಟ್ಟಿ ನೈವೇದ್ಯ
ಮಹಿಳೆಯರು ದೇವಾಲಯದ ಸಮೀಪದ ನಿಗದಿತ ಮನೆಯಲ್ಲಿ ರಾತ್ರಿ ತಂಗಿ ಮುಂಜಾನೆ ತಣ್ಣೀರು ಸ್ನಾನದೊಂದಿಗೆ ಶುದ್ಧವಾಗಿ, ಅಕ್ಕಿ ಕುಟ್ಟಿ ರೊಟ್ಟಿ ತಯಾರಿಸಿ, ನಾಯಿ ಹೊತ್ತು ತರುವ ದಾರಿಯುದ್ದಕ್ಕೂ ತಮ್ಮನ್ನು ಯಾರಿಗೂ ಕಾಣಿಸಿಕೊಳ್ಳದಂತೆ ಬಾಳೆಲೆ ಚೂರಿನ ಮೇಲೆ ರೊಟ್ಟಿ ಇಡುತ್ತಾರೆ. ಇದು ನಾಯಿಗಳಿಗೆ ನೈವೇದ್ಯ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.

ಮೂಢನಂಬಿಕೆ ಎಂದು ಯಾರೂ ಪರಿಗಣಿಸುವುದಿಲ್ಲ
ಹಿಂದಿನ ಕಾಲದಲ್ಲಿ ಮನೆಗಳಲ್ಲಿ ಸಾಕಲಾಗುವ ನಾಯಿಗಳು ವೃದ್ಧಿ ಕಾಣದಿದ್ದರೆ ದೇವರಿಗೆ ಮಣ್ಣಿನ ನಾಯಿಯನ್ನು ಒಪ್ಪಿಸುವುದಾಗಿ ಹರಕೆ ಮಾಡಿಕೊಳ್ಳುತ್ತಿದ್ದರು. ಹಬ್ಬದ ಸಂದರ್ಭದಲ್ಲಿ ಅದನ್ನು ಒಪ್ಪಿಸುತ್ತಿದ್ದರು. ಇದು ಈಗಲೂ ಮುಂದುವರೆದಿದೆ. ಆದರೆ, ಈ ಆಚರಣೆಯನ್ನು ಮೂಢನಂಬಿಕೆ ಎಂದು ಯಾರೂ ಪರಿಗಣಿಸುವುದಿಲ್ಲ.












Click it and Unblock the Notifications