ಗಿರಿಜನರ ಪರ ನಿಂತ ನಟ ಚೇತನ್ ವಿರುದ್ಧ ದೂರು!
ನಟ ಚೇತನ್ ಕುಮಾರ್ ವಿರುದ್ಧ ಪ್ರತಿಬಂಧಕಾಜ್ಞೆ ಉಲ್ಲಂಘಿಸಿದ ಆರೋಪ ಹೊರೆಸಿ, ಕೊಡಗಿನ ಕಾವೇರಿ ಸೇನೆಯ ಸದಸ್ಯರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಡಿಕೇರಿ, ಜನವರಿ 08 : ನಟ ಚೇತನ್ ಕುಮಾರ್ ವಿರುದ್ಧ ಪ್ರತಿಬಂಧಕಾಜ್ಞೆ ಉಲ್ಲಂಘಿಸಿದ ಆರೋಪ ಹೊರೆಸಿ, ಕೊಡಗಿನ ಕಾವೇರಿ ಸೇನೆಯ ಸದಸ್ಯರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಾವೇರಿ ಸೇನೆಯ ಪ್ರಧಾನ ಸಂಚಾಲಕ ಕೆ.ಎ.ರವಿಚಂಗಪ್ಪ ಅವರು ದೂರು ನೀಡಿದ್ದು, ಮಾಲ್ದಾರೆ ಸನಿಹದ ದಿಡ್ಡಳ್ಳಿ ಗಿರಿಜನರ ತಾತ್ಕಾಲಿಕ ಶಿಬಿರ ವ್ಯಾಪ್ತಿಯಲ್ಲಿ ಸೆಕ್ಷನ್ 144ರ ಪ್ರತಿಬಂಧಕಾಜ್ಞೆಯನ್ನು ಜಾರಿ ಮಾಡಿದ್ದರೂ ಅದನ್ನು ಉಲ್ಲಂಘಿಸಿ ಕೆಲವು ಪ್ರಮುಖ ವ್ಯಕ್ತಿಗಳು ಅತಿಕ್ರಮ ಪ್ರವೇಶ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದು ಅದರಲ್ಲಿ ನಟ ಚೇತನ್ ಹೆಸರು ಕೂಡ ಇದೆ.[ಕೊಡಗಿನಲ್ಲಿ ರಾಜಕೀಯ ಆಟ.. ಗಿರಿಜನರಿಗೆ ಪ್ರಾಣಸಂಕಟ..]
ದೂರಿನಲ್ಲೇನಿದೆ?: ಕಾವೇರಿ ಸೇನೆ ಸಂಘಟನೆಯ ಪ್ರಧಾನ ಸಂಚಾಲಕ ಕೆ.ಎ. ರವಿಚಂಗಪ್ಪ ನೀಡಿದ ದೂರಿನಲ್ಲಿ ಡಿ. 22 ಮತ್ತು 23 ರಂದು ಮಾಜಿ ವಿಧಾನ ಪರಿಷತ್ ಸದಸ್ಯ ಎ.ಕೆ. ಸುಬ್ಬಯ್ಯ ಹಾಗೂ ಬೆಂಗಳೂರಿನ ಚಿತ್ರನಟ ಚೇತನ್ ಮತ್ತು ಸುಮಾರು 50 ಮಂದಿ ಕಾನೂನು ವಿರೋಧಿಸಿ ದಿಡ್ಡಳ್ಳಿಯ ಗಿರಿಜನ ತಾತ್ಕಾಲಿಕ ವಸತಿ ಕೇಂದ್ರಕ್ಕೆ ಅತಿಕ್ರಮ ಪ್ರವೇಶಿಸಿದ್ದಾರೆ.

ಈ ಪ್ರದೇಶವು ಮೀಸಲು ಅರಣ್ಯಕ್ಕೆ ಒಳಪಟ್ಟಿದ್ದು, ಜಿಲ್ಲಾಧಿಕಾರಿಯವರು ಸೆಕ್ಷನ್ 144ನ್ನು ಜಾರಿಗೊಳಿಸಿದ್ದರೂ ಅದನ್ನು ಉಲ್ಲಂಘಿಸಿ ಈ ಗುಂಪು ಅಲ್ಲಿಗೆ ಪ್ರವೇಶಿಸಿದೆ. ಪ್ರಮುಖರು ಕರ್ನಾಟಕ ಸರಕಾರ ಮತ್ತು ಅರಣ್ಯ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಅರಣ್ಯಾಧಿಕಾರಿಗಳ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾರೆ.
ಕಾನೂನು ಭಂಗ ಮಾಡಿರುವವರ ವಿರುದ್ಧ ಪೊಲೀಸರು ಸೆಕ್ಷನ್ 141 ಮತ್ತು 142ರ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ದೂರು ಸ್ವೀಕರಿಸಿರುವ ಪೊಲೀಸರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದು ಸಾರ್ವಜನಿಕರ ವಲಯದಲ್ಲಿ ಕುತೂಹಲ ಕೆರಳಿಸಿದೆ. ಆದರೆ ಪೊಲೀಸ್ ಮೂಲಗಳ ಪ್ರಕಾರ ದೂರಿನಲ್ಲಿ ತಿಳಿಸಿರುವಂತೆ ಒಂದು ವೇಳೆ ಕಾನೂನು ಭಂಗವಾಗಿದ್ದರೆ ಸಿಸಿಟಿವಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.
ಮತ್ತೊಂದು ಮೂಲದ ಪ್ರಕಾರ ಡಿ. 23 ರಂದು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಅವರು ದಿಡ್ಡಳ್ಳಿ ಪ್ರದೇಶಕ್ಕೆ ಆಗಮಿಸಿದ್ದರಿಂದ ಜಿಲ್ಲಾಧಿಕಾರಿ 144 ಸೆಕ್ಷನನ್ನು ಸಡಿಲಗೊಳಿಸಿದ್ದರು ಎನ್ನಲಾಗಿದೆ.












Click it and Unblock the Notifications