ಮನೆ ಕುಸಿದಾಗ ಜೀವ ಉಳಿಸಿಕೊಂಡರು, ಗುಡ್ಡ ಕುಸಿದಾಗ ಜೀವ ಬಿಟ್ಟರು!
ಮಡಿಕೇರಿ, ಆಗಸ್ಟ್ 23 : ಕೊಡಗಿನಲ್ಲಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಮನೆ ಕುಸಿಯುವಾಗ ಪ್ರಾಣ ಉಳಿಸಿಕೊಂಡಿದ್ದ ಮೂವರು, ಮನೆಯ ಅವಶೇಷಗಳನ್ನು ನೋಡಲು ಹೋದಾಗ ಮಣ್ಣಿನಡಿ ಸಿಲುಕಿ ಪ್ರಾಣ ಕಳೆದುಕೊಂಡ ಕಥೆ ಇದು.
ಹೌದು....ಇದು ಯಶವಂತ, ವೆಂಕಟರಮಣ ಮತ್ತು ಪವನ್ ಅವರು ಸಾವನ್ನಪ್ಪಿದ ಕಥೆ. ಮೂವರು ಕೊಡಗಿನ ಕಾಟಕೇರಿ ಗ್ರಾಮದವರು. ಆಗಸ್ಟ್ 16ರಂದು ಮುಂಜಾನೆ 3 ಗಂಟೆಗೆ ಇವರ ಮನೆಗಳಿರುವ ಪ್ರದೇಶದಲ್ಲಿ ಗುಡ್ಡ ಕುಸಿದು ಬಿದ್ದಿದೆ.
ಮಡಿಕೇರಿ : ವೈರಲ್ ಆಗಿರುವ ಮನೆ ಕುಸಿತದ ವಿಡಿಯೋ ಹಿಂದಿನ ಕಥೆ!
ಗುಡ್ಡ ಕುಸಿಯುವ ಸೂಚನೆ ಸಿಕ್ಕಿದ ತಕ್ಷಣ ಎಲ್ಲರೂ ಮನೆಯಿಂದ ಹೊರಬಂದು ಜೀವ ಉಳಿಸಿಕೊಂಡಿದ್ದಾರೆ. ಆದರೆ, ಅಂದು ಬೆಳಗ್ಗೆ 6 ಗಂಟೆಗೆ ಪುನಃ ಮನೆ ಕುಸಿದು ಹೋದ ಜಾಗಕ್ಕೆ ಯಶವಂತ, ವೆಂಕಟರಮಣ ಮತ್ತು ಪವನ್ ಹೋಗಿದ್ದರು. ಆಗ ಗುಡ್ಡ ಮತ್ತೊಮ್ಮೆ ಕುಸಿದು ಬಿದ್ದಿದ್ದು ಮೂವರು ಮೃತಪಟ್ಟಿದ್ದಾರೆ.
ಯಶವಂತ ಮತ್ತು ವೆಂಕಟರಮಣ ಅವರ ಮೃತ ದೇಹ ಅಂದೇ ಸಿಕ್ಕಿತ್ತು. ಆದರೆ, ಪವನ್ ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾಡಳಿತ ಘೋಷಣೆ ಮಾಡಿತು.10 ಮಂದಿ ಎನ್ಡಿಆರ್ಎಫ್ ತಂಡ, ಸ್ಥಳೀಯರು ಸೇರಿ 30 ಜನರ ತಂಡ ಪವನ್ ದೇಹವನ್ನು ಆ.22ರಂದು ಪತ್ತೆ ಹಚ್ಚಿದೆ.
ಮಡಿಕೇರಿಯಲ್ಲಿ ಸುರಿದಿದ್ದು ಬರೀ ಮಳೆಯಲ್ಲ... ಮಹಾಮಳೆ..!
ಯಶವಂತ, ಯತೀಶ್, ನವೀನ್, ಮನೋಹರ್, ವೆಂಕಟರಮಣ ಮತ್ತು ಪವನ್ ಎಲ್ಲರೂ ನೆರೆಹೊರೆಯವರು. ಆ.16ರಂದು 6 ಗಂಟೆಗೆ ಅವರು ಕುಸಿದು ಬಿದ್ದ ತಮ್ಮ ಮನೆಗಳನ್ನು ನೋಡಲು ಬಂದಾಗ ಗುಡ್ಡ ಮತ್ತೊಮ್ಮೆ ಕುಸಿದು ಬಿದ್ದಿದೆ. ಎಲ್ಲರೂ ಮಣ್ಣಿನಡಿ ಸಿಲುಕಿದ್ದಾರೆ, ಯಶವಂತ, ವೆಂಕಟರಮಣ ಮತ್ತು ಪವನ್ ಸಾವನ್ನಪ್ಪಿದ್ದು, ಗಾಯಗೊಂಡ ಯತೀಶ್, ಮನೋಹರ್, ನವೀನ್ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಡಿಕೇರಿ : ವಿದ್ಯುತ್ ವ್ಯವಸ್ಥೆ ಮಾಡುವುದು ಚೆಸ್ಕಾಂಗೆ ದೊಡ್ಡ ಸವಾಲು
'ಅವರು ಮನೆ ಕುಸಿದ ಜಾಗಕ್ಕೆ ಹೋಗುವುದಾಗಿ ನಮಗೆ ಹೇಳಿರಲಿಲ್ಲ. ಅವರು ಸುರಕ್ಷಿತವಾಗಿ ವಾಪಸ್ ಬರುತ್ತಾರೆ ಎಂಬ ನಂಬಿಕೆ ಇತ್ತು, ಈಗ ಅವರ ಶವ ಸಿಕ್ಕಿದೆ. ನಮ್ಮ ಮುಂದಿನ ಭವಿಷ್ಯವೇನು? ಎಂಬುದು ತಿಳಿಯುತ್ತಿಲ್ಲ' ಎಂದು ಪವನ್ ಪತ್ನಿ ಉಮಾವತಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಪವನ್, ಉಮಾವತಿ ದಂಪತಿಗೆ 4 ವರ್ಷದ ಧನ್ಯಶ್ರೀ ಎಂಬ ಹೆಣ್ಣು ಮಗುವಿದೆ.
ಎನ್ಡಿಆರ್ಎಫ್ ತಂಡದ ಚೀಫ್ ಕಮಾಂಡೆಟ್ ಆರ್.ಪಿ.ಚೌಧರಿ ನೇತೃತ್ವದ ತಂಡ ಪವನ್ ಮೃತದೇಹ ಪತ್ತೆ ಹಚ್ಚಿದೆ. 'ಗ್ರಾಮಸ್ಥರಿಂದ ಮಾಹಿತಿ ಪಡೆದು ನಾವು ಶವಕ್ಕಾಗಿ ಹುಡುಕಾಟ ನಡೆಸಿದೆವು. ಎರಡು ಗಂಟೆಯಲ್ಲಿ ನಮಗೆ ಕೊಳೆತ ವಾಸನೆ ಬರುತ್ತಿರುವುದು ತಿಳಿಯಿತು. ಯಂತ್ರದ ಸಹಾಯದಿಂದ ಮಣ್ಣಿನಡಿಯಿಂದ ಪವನ್ ಶವ ಹೊರತೆಗೆದೆವು. ಈ ಜಾಗದಲ್ಲಿ ಈಗಲೂ ಗುಡ್ಡ ಕುಸಿಯುತ್ತಿದೆ' ಎನ್ನುತ್ತಾರೆ ಚೌಧರಿ.