ವಿಪರೀತ ವಾಯುಮಾಲಿನ್ಯ: ಶಿವಲಿಂಗಕ್ಕೂ ಮಾಸ್ಕ್ ಹಾಕಿದ ಪೂಜಾರಿ
ವಾರಣಾಸಿ, ನವೆಂಬರ್ 7: ದೇಶದ ಅನೇಕ ರಾಜ್ಯಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ತೀವ್ರವಾಗಿದೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿನ ತಾರಕೇಶ್ವರ ಮಹದೇವ ದೇವಸ್ಥಾನದಲ್ಲಿ ಪೂಜಾರಿಗಳು ಮಲಿನ ಗಾಳಿಯಿಂದ ರಕ್ಷಿಸಿಕೊಳ್ಳಲು ಮುಖಕ್ಕೆ ಮಾಸ್ಕ್ ಧರಿಸಿರುವುದಲ್ಲದೆ ಶಿವಲಿಂಗವನ್ನು ಕಾಪಾಡಲು ಅದಕ್ಕೂ ಮಾಸ್ಕ್ ಅಳವಡಿಸಿದ್ದಾರೆ.
'ನಗರದಲ್ಲಿ ಗಾಳಿ ಕಲುಷಿತವಾಗಿದೆ. ಈ ವಿಷಕಾರಿ ಗಾಳಿಯಿಂದ 'ಭೋಲೆ ಬಾಬಾ'ನನ್ನು ಕಾಪಾಡಲು ಮಾಸ್ಕ್ ತೊಡಿಸಿದ್ದೇವೆ. ಆತ ಸುರಕ್ಷಿತವಾಗಿದ್ದರೆ ನಾವೂ ಸುರಕ್ಷಿತವಾಗಿ ಇರುತ್ತೇವೆ ಎಂದು ನಂಬಿದ್ದೇವೆ' ಎಂದು ಅಲೋಕ್ ಮಿಶ್ರಾ ಎಂಬ ಭಕ್ತ ಹೇಳಿದರು.
'ದಿನದಿಂದ ದಿನಕ್ಕೆ ಗಾಳಿಯ ಗುಣಮಟ್ಟ ಕುಸಿಯುತ್ತಿದೆ. ಹೀಗಾಗಿ ಅದರಿಂದ ನಮ್ಮ ದೇವರನ್ನು ರಕ್ಷಿಸಬೇಕಿದೆ. ನಾವು ಚಳಿಗಾಲದಲ್ಲಿ ಸ್ವೆಟರ್ ಧರಿಸುವಂತೆ ಮತ್ತು ಬೇಸಿಗೆಯಲ್ಲಿ ತಂಪು ಕಾಪಾಡಿಕೊಳ್ಳಲು ಹವಾ ನಿಯಂತ್ರಕಗಳನ್ನು ಬಳಸುವಂತೆ ಕೆಟ್ಟ ಗುಣಮಟ್ಟದ ಗಾಳಿಯಿಂದ ದೇವರನ್ನು ಕಾಪಾಡಲು ವಿಗ್ರಹಗಳಿಗೆ ಮಾಸ್ಕ್ಗಳನ್ನು ಅಳವಡಿಸುತ್ತಿದ್ದೇವೆ' ಎಂದು ದೇವಸ್ಥಾನದ ಪೂಜಾರಿ ಸಂದೀಪ್ ಮಿಶ್ರಾ ತಿಳಿಸಿದರು.

'ನಗರದ ಜನರು ವಾಯು ಮಾಲಿನ್ಯ ಮಟ್ಟದ ಹೆಚ್ಚಳದಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಉಸಿರಾಟದ ತೊಂದರೆ, ಕಣ್ಣುರಿ ಮುಂತಾದ ಸಮಸ್ಯೆ ನನಗೆ ಆಗುತ್ತಿದೆ. ಪರಿಸ್ಥಿತಿ ವಿಷಮಿಸಿದೆ. ವೈದ್ಯಕೀಯ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಹಾಸಿಗೆಗಳೂ ಇಲ್ಲ. ಮಾಲಿನ್ಯದಿಂದ ಅನೇಕರು ವೈದ್ಯಕೀಯ ಸಮಸ್ಯೆ ಎದುರಿಸುತ್ತಿದ್ದಾರೆ' ಎಂದು ಹೇಳಿದರು.
ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 226ಕ್ಕೆ ಕುಸಿದಿದ್ದು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಇದು ಕಳಪೆ ಗಾಳಿಯ ಗುಣಮಟ್ಟದ ಗುಂಪಿಗೆ ಸೇರಿದೆ.












Click it and Unblock the Notifications