ಈ ಚುನಾವಣೆ ನಂತರ ಎಸ್ಪಿ- ಬಿಎಸ್ಪಿ ಅಂತ್ಯ: ಪ್ರಧಾನಿ ನರೇಂದ್ರ ಮೋದಿ
ಅಲೀಗಢ (ಉತ್ತರಪ್ರದೇಶ), ಏಪ್ರಿಲ್ 14: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷ ಎರಡೂ ಮುಗಿದು ಹೋಗುತ್ತದೆ. ಅದರ ಜತೆಗೆ ಆ ಮಾದರಿಯ ರಾಜಕಾರಣವೂ ಕೊನೆ ಆಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲೇ ಜನರು ತಮಗೆ ಜಾತಿ ಆಧಾರಿತ ರಾಜಕಾರಣ ಇಷ್ಟವಿಲ್ಲ ಎಂದಿದ್ದಾರೆ. ಜನರಿಗೆ ಅಭಿವೃದ್ಧಿ ಬೇಕಿದೆ. ಎರಡು ವರ್ಷದ ಹಿಂದೆ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಸಂದೇಶವೇ ಅದು. ಆದರೆ ಅವರಿಗೆ ಸತ್ಯ ಒಪ್ಪಿಕೊಳ್ಳುವುದು ಬೇಕಿಲ್ಲ. ಇದೀಗ ಅವರ ಅಂಗಡಿ ಬಲವಂತವಾಗಿ ಮುಚ್ಚಲು ಅಲೀಗಢದಿಂದ ಬೀಗ ಖರೀದಿಸಬೇಕಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇದಕ್ಕೂ ಮುನ್ನ ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಲು ಆ ಎರಡು ಪಕ್ಷಗಳೇ ಕಾರಣ ಎಂದು ಆರೋಪಿಸಿದ ಮೋದಿ, ಆ ಭಾಗ ಹೊತ್ತಿ ಉರಿಯುತ್ತಿತ್ತು. ಅಪರಾಧಿಗಳಿಗೆ ಅಮಾಯಕರೇ ಗುರಿಯಾಗಿದ್ದರು. ಮುಜಾಫರ್ ನಗರ್ ಹಿಂಸಾಚಾರದಲ್ಲಿ ಅಪರಾಧಿಗಳನ್ನು ರಕ್ಷಿಸಿದವರು ಯಾರು? ಉತ್ತರಪ್ರದೇಶದ ಪಶ್ಚಿಮ ಭಾಗದ ಮತದಾರರು ಅರ್ಥ ಮಾಡಿಕೊಂಡಿದ್ದಾರೆ: ಆ ರಾಜಕಾರಣಿಗಳು ಸತ್ಯವಂತರಲ್ಲ ಎಂದು ಮೋದಿ ಹೇಳಿದ್ದಾರೆ.

ಮೊದಲ ಹಂತದ ಮತದಾನದ ನಂತರ 'ಬೆರಕೆ ಗುಂಪು' ಮೋದಿಯನ್ನು ಬಯ್ಯಲು ಆರಂಭಿಸಿದೆ. ಏಕೆಂದರೆ ತಾವು ಸೋಲುತ್ತಿದ್ದೇವೆ ಎಂಬುದು ಅವರಿಗೆ ಗೊತ್ತಾಗಿದೆ. ಇನ್ನು ಇದೇ ವೇಳೆ ಅಂಬೇಡ್ಕರ್ ಅವರಿಗೆ ಏನು ಮಾಡಲಾಯಿತು ಎಂಬುದನ್ನು ನಾವು ಮರೆಯಬಾರದು. ಅಂಬೇಡ್ಕರ್ ರನ್ನು ಕಾಂಗ್ರೆಸ್ ಎಂದೂ ಸಹಿಸಲಿಲ್ಲ ಎಂದು ಮೋದಿ ಆರೋಪಿಸಿದರು.
ಉತ್ತರಪ್ರದೇಶವನ್ನು ಕಾಂಗ್ರೆಸ್ ಹಾಳುಗೆಡವಿದೆ. ಯಾರು ಪ್ರಧಾನಿ ಆಗುವ ಕನಸು ಕಾಣುತ್ತಿದ್ದಾರೋ ಅದು ಹಗಲು ಕನಸು ಎಂದು ನರೇಂದ್ರ ಮೋದಿ ವ್ಯಂಗ್ಯವಾಡಿದರು.












Click it and Unblock the Notifications