ಹಿಂದಿನ ಸರ್ಕಾರಗಳು ಅರ್ಹ ನಾಯಕರನ್ನು ಕಡೆಗಣಿಸಿವೆ: ಮೋದಿ ಆರೋಪ
ಲಕ್ನೋ, ಫೆಬ್ರವರಿ 16: ಈ ಹಿಂದಿನ ಸರ್ಕಾರಗಳು ಅರ್ಹ ಯೋಧರು ಮತ್ತು ನಾಯಕರಿಗೆ ಸೂಕ್ತ ಗೌರವಗಳನ್ನು ಸಲ್ಲಿಸಿರಲಿಲ್ಲ. ಆ ತಪ್ಪುಗಳನ್ನು ತಮ್ಮ ಸರ್ಕಾರ ಸರಿಪಡಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.
ಉತ್ತರ ಪ್ರದೇಶದ ಬಹ್ರೈಚ್ನಲ್ಲಿನ ಶ್ರಾವಸ್ತಿಯಲ್ಲಿ ಅಪ್ರತಿಮ ಹೋರಾಟಗಾರ ಅರಸ ಸುಹೆಲ್ದೇವ್ ಅವರ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರು ಶ್ರಾವಸ್ತಿ, ಚಿತ್ತೋರಾ ಸರೋವರ ಮತ್ತು ಬಹ್ರೈಚ್ಗಳನ್ನು ಸುಂದರಗೊಳಿಸುವ ವಿವಿಧ ಕಾರ್ಯಕ್ರಮಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ಹಿಂದಿನ ಸರ್ಕಾರಗಳು ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಬಾಯ್ ಪಟೇಲ್ ಮತ್ತು ಬಿಆರ್ ಅಂಬೇಡ್ಕರ್ ಅವರಂತಹ ಅರ್ಹ ನಾಯಕರಿಗೆ ಸೂಕ್ತ ಗೌರವ ನೀಡುತ್ತಿರಲಿಲ್ಲ ಎಂದು ಆರೋಪಿಸಿದರು.

'ಅರ್ಹ ನಾಯಕರಿಗೆ ಯೋಗ್ಯವಾದ ರೀತಿಯಲ್ಲಿ ಹೆಮ್ಮೆಯ ಸ್ಥಾನವನ್ನು ನೀಡದೆ ಇರುವುದು ದುರದೃಷ್ಟಕರ. ಹಿಂದಿನ ಸರ್ಕಾರಗಳ ಈ ತಪ್ಪನ್ನು ನಮ್ಮ ಸರ್ಕಾರ ಸರಿಪಡಿಸಲು ಪ್ರಯತ್ನಿಸುತ್ತಿದೆ' ಎಂದು ಹೇಳಿದರು.
ಸುಹೆಲ್ದೇವ್ ಹೆಸರಿನಲ್ಲಿ ನಿರ್ಮಾಣವಾದ ವೈದ್ಯಕೀಯ ಕಾಲೇಜನ್ನು ನರೇಂದ್ರ ಮೋದಿ ಉದ್ಘಾಟಿಸಿದರು. ಕೊರೊನಾ ವೈರಸ್ ನಿಯಂತ್ರಣ ಹಾಗೂ ರಾಜ್ಯವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯುತ್ತಿರುವುದಕ್ಕೆ ಅವರು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಶ್ಲಾಘಿಸಿದರು.
ಯೋಧ ಅರಸ ಸುಹೆಲ್ದೇವ್ ಅವರ 4.20 ಮಿಟರ್ ಎತ್ತರದ ಪ್ರತಿಮೆ ನಿರ್ಮಾಣ, ಕೆಫೆಟೇರಿಯಾ, ಅತಿಥಿಗೃಹ ಮತ್ತು ಮಕ್ಕಳ ಉದ್ಯಾನ ಸೇರಿದಂತೆ ವಿವಿಧ ಪ್ರವಾಸಿ ಆಕರ್ಷಣೆಯ ಸೌಲಭ್ಯಗಳ ನಿರ್ಮಾಣಗಳನ್ನು ಈ ಯೋಜನೆ ಒಳಗೊಂಡಿದೆ.












Click it and Unblock the Notifications