ವೈಲೆಂಟ್ ಪರಿಸರದ ಎದುರು ದೇವರೇ ಆಯಿತಾ ಸೈಲೆಂಟ್
ವಾರಣಾಸಿ, ನವೆಂಬರ್.07: ಪರಿಸರದ ಎದುರು ಯಾರೂ ದೊಡ್ಡವರಲ್ಲ. ಈ ಮಾತು ಮನುಷ್ಯರಿಗಲ್ಲ ದೇವರಿಗೂ ಅನ್ವಯಿಸುತ್ತೆ. ವಾಯುಮಾಲಿನ್ಯಕ್ಕೆ ಜನರು ಬೆಚ್ಚಿ ಬೀಳುತ್ತಿದ್ದಾರೆ. ಮನೆಯಿಂದ ಹೊರ ಬರುವುದಕ್ಕೂ ಮೊದಲು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುವುದು ಸರ್ವೇ ಸಾಮಾನ್ಯ ಆಗಿ ಬಿಟ್ಟಿದೆ. ಉತ್ತರ ಭಾರತದಲ್ಲಂತೂ ಇದೊಂದು ಸಂಪ್ರದಾಯದಂತೆ ಆಗಿ ಬಿಟ್ಟಿದೆ. ಚಳಿಗಾಲದ ಆರಂಭದಲ್ಲಿ ರಾಷ್ಟ್ರ ರಾಜಧಾನಿ ಜನರಿಗೆ ಉಸಿರಾಟ ಎಷ್ಟು ಮುಖ್ಯವೇ, ಮುಖಕ್ಕೆ ಮಾಸ್ಕ್ ಕೂಡಾ ಅಷ್ಟೇ ಮುಖ್ಯ ಅನ್ನುವಂತಾ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ.
ರಾಷ್ಟ್ರ ರಾಜಧಾನಿ ಜನರದ್ದು ಈ ಕಥೆಯಾದರೆ, ಉತ್ತರ ಪ್ರದೇಶದಲ್ಲಿ ದೇವರಿಗೂ ಪರಿಸರ ಮಾಲಿನ್ಯದ ಪ್ರಭಾವ ತಟ್ಟಿದೆ. ಇಂಥದೊಂದು ಅನುಮಾನ ಹುಟ್ಟಿಕೊಳ್ಳಲು ಕಾರಣವಾಗಿದ್ದೇ ವಾರಣಾಸಿಯಲ್ಲಿ ನಡೆದಿರುವ ಈ ಘಟನೆ. ನವದೆಹಲಿಯಲ್ಲಿ ಪರಿಸರ ಹದಗೆಟ್ಟು ಹೋಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ದೆಹಲಿಯಲ್ಲಿ ಜನರು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುವುದು ಕಾಮನ್ ಆಗಿ ಬಿಟ್ಟಿದೆ. ಆದರೆ, ಉತ್ತರ ಪ್ರದೇಶದಲ್ಲಿ ದೇವರೇ ಮಾಸ್ಕ್ ಹಾಕಿಕೊಂಡು ಭಕ್ತರಿಗೆ ದರ್ಶನ ಕೊಡುತ್ತಿದ್ದಾನೆ.
ದೇವರ ದರ್ಶನಕ್ಕೆ ಬರುವ ಭಕ್ತರಿಗೆ ದೇವರ ಮುಖವೇ ಕಾಣುತ್ತಿಲ್ಲ. ಏಕೆಂದರೆ ದೇವರ ಮುಖಕ್ಕೆ ಇಲ್ಲಿ ಅರ್ಚಕರು ಮಾಸ್ಕ್ ಹಾಕಿ ಕೂರಿಸಿದ್ದಾರೆ. ಶಿವ-ಪಾರ್ವತಿ, ದುರ್ಗಾದೇವಿ ಹಾಗೂ ಸಾಯಿ ಬಾಬಾ ದೇವರ ವಿಗ್ರಹಗಳ ಮುಖಕ್ಕೆ ಮಾಸ್ಕ್ ಹಾಕಲಾಗಿದೆ.

ಮುಖ ಮುಚ್ಚಿಕೊಂಡ ದೇವರು!
ಹೌದು, ದೀಪಾವಳಿ ಮುಗಿದು ತಿಂಗಳೇ ಕಳೆಯುತ್ತಾ ಬಂದಿದೆ. ಹೀಗಿದ್ದರೂ ಉತ್ತರ ಭಾರತದಲ್ಲಿ ಅದರ ಪ್ರಭಾವ ಕಡಿಮೆ ಆಗಿಯೇ ಇಲ್ಲ. ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಾಯುಮಾಲಿನ್ಯ ಪ್ರಮಾಣ 2.5 ಪಿಎಂ ದಾಟಿದೆ. ಇದರಿಂದ ದೇವರಿಗೆ ಮಾಸ್ಕ್ ಹಾಕುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥದೊಂದು ಅಚ್ಚರಿಯ ಘಟನೆಗೆ ಸಾಕ್ಷಿಯಾಗಿದ್ದು, ವಾರಣಾಸಿಯ ಸಿಗ್ರಾ ಬಡಾವಣೆಯಲ್ಲಿರುವ ಶಿವ-ಪಾರ್ವತಿಯ ದೇವಾಲಯ. ಈ ದೇವಸ್ಥಾನದಲ್ಲಿ ಸಾಕ್ಷಾತ್ ಶಿವ-ಪಾರ್ವತಿ ಮುಖಕ್ಕೆ ಬಿಳಿ ಮಾಸ್ಕ್ ಹಾಕಿದ್ದು, ಅಚ್ಚರಿ ಹುಟ್ಟಿಸಿದೆ. ಇದರ ಜೊತೆಗೆ ದೇವಾಲಯದಲ್ಲಿರುವ ದುರ್ಗಾ ಹಾಗೂ ಸಾಯಿ ಬಾಬಾ ಮೂರ್ತಿಗಳಿಗೂ ಮಾಸ್ಕ್ ಹಾಕಿರುವುದು ಭಕ್ತರಲ್ಲಿ ಕುತೂಹಲ ಮೂಡಿಸಿದೆ.

ಚಳಿಗಾಲದಲ್ಲಿ ದೇವರಿಗೇ ಸ್ವೆಟರ್
ವಾಯುಮಾಲಿನ್ಯ ಹೆಚ್ಚಾಗಿದ್ದಕ್ಕೆ ಈಗ ಶಿವ-ಪಾರ್ವತಿ ಮುಖಕ್ಕೆ ಮಾಸ್ಕ್ ಹಾಕಿದ್ದು ಎಲ್ಲರಿಗೂ ಗೊತ್ತಿದೆ. ಆದರೆ, ಚಳಿಗಾಲದಲ್ಲಿ ಇದೇ ಶಿವ-ಪಾರ್ವತಿ ವಿಗ್ರಹಗಳಿಗೆ ಸ್ವಟರ್ ತೊಡಿಸಲಾಗುತ್ತದೆ ಎಂದು ಸ್ವತಃ ದೇಗುಲದ ಮುಖ್ಯ ಅರ್ಚಕರೇ ತಿಳಿಸಿದ್ದಾರೆ. ಇಲ್ಲಿ ದೇವರನ್ನು ಮನುಷ್ಯರಂತೆ ನೋಡಿಕೊಳ್ಳಲಾಗುತ್ತದೆ. ಚಳಿಗಾಲದಲ್ಲಿ ವಿಗ್ರಹಗಳಿಗೆ ಸ್ವಟರ್ ಗಳನ್ನು ತೊಡಿಸಲಾಗುತ್ತದೆ. ಈಗ ಪರಿಸರದಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದಕ್ಕೆ, ದೇವರ ಮುಖಕ್ಕೆ ಮಾಸ್ಕ್ ಹಾಕಲಾಗುತ್ತಿದೆ ಎಂದು ಅರ್ಚಕರು ಹೇಳುತ್ತಿದ್ದಾರೆ.

ಮಾಸ್ಕ್ ತೊಟ್ಟು ದೇವರ ಕಾಣಲು ಭಕ್ತಸಾಗರ
ಇದಿಷ್ಟೇ ಅಲ್ಲ. ಮಾಸ್ಕ್ ತೊಟ್ಟ ದೇವರನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದು ಬರುತ್ತಿದೆ. ದೇವರಿಗೇ ಮಾಸ್ಕ್ ಹಾಕಿರುವ ವಿಚಾರ ಭಕ್ತರಲ್ಲಿ ಕುತೂಹಲ ಕೆರಳಿಸಿದೆ. ಆದರೆ, ಅರ್ಚಕರ ಉದ್ದೇಶ ಉತ್ತಮವಾಗಿದೆ. ಭಕ್ತರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ದೇವರಿಗೆ ಮಾಸ್ಕ್ ತೊಡಿಸಲಾಗಿದೆ. ಇದರಿಂದ ಭಕ್ತರು ತಮ್ಮ ಆರೋಗ್ಯ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ.

ಗುಜರಾತ್, ಹರಿಯಾಣದಲ್ಲಿ ಬೆಳೆಗೆ ಬೆಂಕಿ
ಉತ್ತರ ಭಾರತದಲ್ಲಿ ವಾತಾವರಣ ಇಷ್ಟು ಹದಗೆಡಲು ಕಾರಣವೇ ಬೆಳೆಗಳನ್ನು ಸುಡುವ ಕ್ರಮ. ಗುಜರಾತ್ ಹಾಗೂ ಹರಿಯಾಣದಲ್ಲಿ ಪೈಕಿಗೆ ಹಾಗೂ ಬೆಳೆದ ಭತ್ತವನ್ನು ಸುಡುವುದರಿಂದಲೇ ದೆಹಲಿ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಹಲವು ರಾಜ್ಯಗಳಲ್ಲಿ ವಾಯುಮಾಲಿನ್ಯ ಪ್ರಮಾಣ ಮಿತಿ ಮೀರುತ್ತಿದೆ. ಇದರಿಂದ ಜನರು ಮಾಸ್ಕ್್ ತೊಡದೇ ಬದುಕುವುದೇ ಕಷ್ಟಸಾಧ್ಯ ಎನ್ನುವಂತಾ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಕಳೆದ ಮಂಗಳವಾರ ಕೂಡಾ ಹರಿಯಾಣ ಹಾಗೂ ಗುಜರಾತ್ ನಲ್ಲಿ ಬೆಳೆಯನ್ನು ಸುಟ್ಟಿದ್ದು, ವಾಯುಮಾಲಿನ್ಯ ಪ್ರಮಾಣ ಏರಿಕೆಗೆ ಕಾರಣ ಎನ್ನಲಾಗಿದೆ.












Click it and Unblock the Notifications