ಯುಪಿ: ಜಾಹೀರಾತಿಗಾಗಿ ಯೋಗಿಯ ನಕಲಿ ಸಹಿ, ಇಮೇಲ್ ಬಳಕೆ: ಪತ್ರಕರ್ತ ಅರೆಸ್ಟ್
ನವದೆಹಲಿ, ಜನವರಿ 30: ದೇಶದಲ್ಲಿ ಪಂಚರಾಜ್ಯಗಳ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತದಾರರನ್ನು ಸೆಳೆಯಲು ಪ್ರಚಾರದ ನಾನಾ ಮಾರ್ಗಗಳನ್ನು ಪಕ್ಷಗಳು ಹಿಡಿಯುತ್ತಿವೆ. ಇದೇ ಸಂದರ್ಭದಲ್ಲಿ ಉತ್ತರಪ್ರದೇಶ ಆಡಳಿತ ಪಕ್ಷದ ನಾಯಕರ ಹೆಸರೇಳಿಕೊಂಡು ಸ್ಥಳೀಯ ಪತ್ರಿಕೆಗಳಿಗೆ ಜಾಹೀರಾತು ನೀಡುವಂತೆ ನಕಲಿ ಮೇಲ್ ಮತ್ತು ಪತ್ರಗಳನ್ನು ಸೃಷ್ಟಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಪ್ತರ ಸಹಿಯನ್ನು ನಕಲಿ ಮಾಡಿ 2016ರಲ್ಲಿ ತಮ್ಮ ಪತ್ರಿಕೆಗೆ ಜಾಹೀರಾತು ಪಡೆಯುವ ಸಲುವಾಗಿ ಹಲವು ಸಾರ್ವಜನಿಕ ವಲಯದ ಘಟಕಗಳಿಗೆ ನಕಲಿ ಪತ್ರಗಳನ್ನು ರವಾನಿಸಿದ ಆರೋಪದ ಮೇಲೆ ಸ್ವತಂತ್ರ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಆದಿತ್ಯನಾಥ್ ಆಗ ಗೋರಖ್ಪುರದ ಲೋಕಸಭಾ ಸಂಸದರಾಗಿದ್ದರು.
ಆರೋಪಿ ಮನೋಜ್ ಕುಮಾರ್ ಸೇಠ್ (41) ಅವರನ್ನು ದೆಹಲಿ ಪೊಲೀಸ್ ವಿಶೇಷ ಗುಪ್ತಚರ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ (IFSO) ಘಟಕದ ಸಿಬ್ಬಂದಿಗಳು ಬಂಧಿಸಿದ್ದಾರೆ. ಒಡಿಶಾದ ಅವರ ಹುಟ್ಟೂರಾದ ಭುವನೇಶ್ವರದಿಂದ ಸೇಠ್ ಅವರನ್ನು ಬಂಧಿಸಲಾಗಿದೆ. ಆದಿತ್ಯನಾಥ್ ಅವರ ಆಪ್ತ ಕಾರ್ಯದರ್ಶಿ ರಾಜಭೂಷಣ್ ಸಿಂಗ್ ರಾವತ್ ಅವರು ತಮ್ಮ ಸಹಿಯನ್ನು ನಕಲಿ ಮಾಡಲಾಗಿದೆ ಎಂದು ದೂರು ನೀಡಿದ್ದರು. ಬಿಜೆಪಿ ನಾಯಕರ ಋಜುವಾತುಗಳನ್ನು ಬಳಸಿಕೊಂಡು ಕೆಲವು ಅಪರಿಚಿತ ವ್ಯಕ್ತಿಗಳು ನಕಲಿ ಇಮೇಲ್ ಐಡಿಯನ್ನು ರಚಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದರು.

ರಾವತ್ ಪ್ರಕಾರ, ಆರೋಪಿಗಳು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ, ಒಎನ್ಜಿಸಿ ಮತ್ತು ಗೇಲ್ ಇಂಡಿಯಾದಂಥ ಸಾರ್ವಜನಿಕ ವಲಯದ ಘಟಕಗಳಿಗೆ ಇಮೇಲ್ಗಳು ಮತ್ತು ನಕಲಿ ಪತ್ರಗಳನ್ನು ಕಳುಹಿಸಿದ್ದರು. ಆರೋಪಿಗಳು ಆದಿತ್ಯನಾಥ್ ಅವರ ನಕಲಿ ಸಹಿಯೊಂದಿಗೆ ಸ್ಕ್ಯಾನ್ ಮಾಡಿದ ಪತ್ರಗಳನ್ನು ಸಹ ಲಗತ್ತಿಸಿದ್ದಾರೆ.
ಪೊಲೀಸ್ ಉಪ ಕಮಿಷನರ್ (IFSO) ಕೆಪಿಎಸ್ ಮಲ್ಹೋತ್ರಾ ಅವರು ತನಿಖೆಯ ಸಂದರ್ಭದಲ್ಲಿ, ನಕಲಿ ಇಮೇಲ್ ಐಡಿ [email protected] ಅನ್ನು ಗುರುತಿಸಲಾಗಿದೆ. ನಕಲಿ ಸಹಿ ಸೃಷ್ಟಿಕರ್ತನ ಉದ್ದೇಶವನ್ನು ತಿಳಿಯಲು ತನಿಖೆ ಮಾಡಲಾಗುತ್ತದೆ ಎಂದರು. "ಇಂಗ್ಲಿಷ್ ಪತ್ರಿಕೆಯ ಪರವಾಗಿ ಜಾಹೀರಾತುಗಳನ್ನು ಬಿಡುಗಡೆ ಮಾಡುವಂತೆ ಕೋರಿಕೆಯೊಂದಿಗೆ ಆಪಾದಿತ ಇಮೇಲ್ ರವಾನೆ ಮಾಡಲಾಗಿತ್ತು. ಅದೇ ರೀತಿ ಮತ್ತೊಂದು ಪತ್ರಿಕೆಯ ಪರವಾಗಿ ಜಾಹೀರಾತು ಬೆಂಬಲಕ್ಕಾಗಿ ನಕಲಿ ಇಮೇಲ್ಗಳು ಮತ್ತು ನಕಲಿ ಪತ್ರಗಳನ್ನು ONGC ಮತ್ತು GAIL ಗೆ ಕಳುಹಿಸಲಾಗಿದೆ. ಹೀಗೆ ಕಳುಹಿಸಲಾದ IP ವಿಳಾಸ ಮೂಲಕ ನಾವು ಆರೋಪಿಯನ್ನು ಮನೋಜ್ ಕುಮಾರ್ ಸೇಠ್ ಎಂದು ಗುರುತಿಸಿದ್ದೇವೆ ಎಂದು ಮಲ್ಹೋತ್ರಾ ಹೇಳಿದ್ದಾರೆ.
ಸೇಠ್ನ ಯೋಜನೆ ಯಶಸ್ವಿಯಾಗಲಿಲ್ಲ ಮತ್ತು ಅವರು ತನಿಖಾಧಿಕಾರಿಗಳಿಂದ ತಪ್ಪಿಸಿಕೊಳ್ಳಲು ನಿರಂತರವಾಗಿ ತನ್ನ ಅಡಗುತಾಣಗಳನ್ನು ಬದಲಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಸಂಭಾವ್ಯ ಅಡಗುತಾಣಗಳ ಮೇಲೆ ಹಲವಾರು ದಾಳಿಗಳನ್ನು ನಡೆಸಲಾಗಿದ್ದರೂ, ಆತ ಪ್ರತಿ ಬಾರಿಯೂ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದ. ಆತನನ್ನು ಹಿಡಿಯಲು ಎಸಿಪಿ ರಾಮನ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
"ಶುಕ್ರವಾರ ಸೇಠ್ ಅವರನ್ನು ಹಿಡಿಯಲು ನಮ್ಮ ತಂಡವು ಭುವನೇಶ್ವರಕ್ಕೆ ತೆರಳಿತ್ತು. ಅಲ್ಲಿ ಆತನನ್ನು ಬಂಧಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ಅವನು ಸ್ವತಂತ್ರ ಪತ್ರಕರ್ತ ಮತ್ತು ಪತ್ರಿಕೆಯನ್ನು ಸಹ ಪ್ರಕಟಿಸುತ್ತಾನೆ ಎಂದು ಬಹಿರಂಗಪಡಿಸಿದನು. ಅವರು ನಕಲಿ ಇಮೇಲ್ ಐಡಿಯನ್ನು ಸೃಷ್ಟಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಅವರ ಸ್ಥಳೀಯ ಪತ್ರಿಕೆಗಳಿಗೆ ಜಾಹೀರಾತು ಬೆಂಬಲವನ್ನು ಪಡೆಯಲು ನಕಲಿ ಪತ್ರಗಳನ್ನು ಸಿದ್ಧಪಡಿಸಿದ್ದನ್ನು ಒಪ್ಪಿಕೊಂಡಿರುವುದಾಗಿ" ಮಲ್ಹೋತ್ರಾ ಹೇಳಿದರು. ಇದಲ್ಲದೇ ಒಡಿಶಾದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ದೂರಿನ ಮೇರೆಗೆ ಕಟಕ್ನ ಚಾಲಿಯಾ ಗಂಜ್ ಪೊಲೀಸ್ ಠಾಣೆಯಲ್ಲಿ 2020 ರಲ್ಲಿ ಸುಲಿಗೆ ಪ್ರಕರಣದಲ್ಲಿ ಸೇಠ್ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications