ಬೆಂಗಳೂರಲ್ಲೇ ನಡೆಯಲಿದೆ ಏರ್ ಶೋ: ರಕ್ಷಣಾ ಇಲಾಖೆ ಸ್ಪಷ್ಟನೆ
ಬೆಂಗಳೂರು, ಸೆಪ್ಟೆಂಬರ್ 8: ಬೆಂಗಳೂರಲ್ಲಿಯೇ ಏರ್ ಶೋ ನಡೆಯಲಿದ್ದು ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಉತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡುವುದಿಲ್ಲ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.
ಫೆಬ್ರವರಿ 20ರಿಂದ ಐದು ದಿನಗಳ ಕಾಲ ಏರ್ ಶೋ ನಡೆಯಲಿದ್ದು ಇದಕ್ಕೆ ದೇಶ, ವಿದೇಶಗಳಿಂದ ಸಹಕಾರ ದೊರೆಯುತ್ತಿದೆ. ಇದೀಗ ಕರ್ನಾಟಕದಲ್ಲಿಯೇ ಏರ್ ಶೋ ನಡೆಸಲು ಆದಿಕೃತ ಮುದ್ರೆ ಸಿಕ್ಕಿದೆ. ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಲ್ಲಿ ರದ್ದುಪಡಿಸಿ ಉತ್ತರ ಪ್ರದೇಶದಲ್ಲಿ ಈ ಬಾರಿ ನಡೆಸಲಾಗುತ್ತದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಬಿಜೆಪಿ ಮಾತ್ರ ಏರ್ ಶೋ ಸ್ಥಳಾಂತರವಿಲ್ಲ ಎನ್ನುತ್ತಲೇ ಬಂದಿತ್ತು.
ಇದೀಗ ಬಿಜೆಪಿ ನಾಯಕರ ಮಾತಿಗೆ ಇನ್ನಷ್ಟು ಪುಷ್ಠಿ ಎಂಬಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಖುದ್ದಾಗಿ ಮಾತನಾಡಿದ್ದು, ಏರ್ ಶೋ ಬೆಂಗಳೂರಲ್ಲಿಯೇ ನಡೆಯಲಿದೆ ಎಂದು ತಿಳಿಸಿದ್ದಾರೆ. ಏರ್ ಶೋವನ್ನು ಸ್ಥಳಾಂತರ ಮಾಡದಂತೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ವಿವಿಧ ನಾಯಕರು ಸಹ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ವಿರೋಧದ ನಡುವೆಯೂ ವೈಮಾನಿಕ ಪ್ರದರ್ಶನ ಸ್ಥಳಾಂತರವಾಗುವುದೇ ಇಲ್ಲವೇ ಎನ್ನುವುದು ಚರ್ಚೆ ಇಂದಿನವರೆಗೂ ನಡೆಯುತ್ತಲೇ ಇತ್ತು ಇದೀಗ ಸ್ಪಷ್ಟನೆ ಸಿಕ್ಕಿದೆ. ಏರ್ ಶೋ ನಡೆಸಲು ಬೆಂಗಳೂರು ಅತ್ಯಂತ ಪ್ರಶಸ್ತ ಸ್ಥಳ ಎಂದು ವಾಯು ಸೇನೆಯ ನಿವೃತ್ತ ಮುಖ್ಯಸ್ಥ ಮಾರ್ಷಲ್ ಅರೂಪ್ ರಹಾ ಹೇಳಿದ್ದರು. ಬೆಂಗಳೂರಿನಲ್ಲಿ ವಿಮಾನಯಾನಕ್ಕೆ ಸಂಬಂಧಿಸಿದ ಕೈಗಾರಿಕೆಗಳು ಇವೆ ಮತ್ತು ಸೂಕ್ತವಾದ ಪರಿಸರ ಹೊಂದಿರುವುದರಿಂದ ಬೆಂಗಳೂರಲ್ಲಿ ಪ್ರದರ್ಶನ ನಡೆಸುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದರು.
ಉತ್ತರ ಪ್ರದೇಶದಲ್ಲಿ ರನ್ವೇ ವ್ಯವಸ್ಥೆ ಉತ್ತಮವಾಗಿರುವ ಕಾರಣ ಅದನ್ನು ಒಪ್ಪಿಕೊಳ್ಳಬಹುದು. ಆದರೆ, ಏಷ್ಯನ್ ವೈಮಾನಿಕ ಕ್ಲಬ್ಗೆ ನೆರವಾಗುವ ಪರಿಸರ ವ್ಯವಸ್ಥೆ ಹಾಗೂ ಕೈಗಾರಿಕೆ ಅಲ್ಲಿಲ್ಲ ಎಂದು ಕೂಡ ಹೇಳಿದ್ದರು ಇದೀಗ ಮಾತಿನಂತೆಯೇ ರಕ್ಷಣಾ ಇಲಾಖೆ ನಡೆದುಕೊಂಡಿದ್ದು ಏರ್ ಶೋ ಸ್ಥಳಾಂತರವಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications