ಯುವತಿ ವಿಚಾರಕ್ಕೆ ದಲಿತ ಯುವಕನಿಗೆ ಬೆಂಕಿ ಹೊತ್ತಿಸಿ ಹತ್ಯೆ
ಲಖನೌ (ಉತ್ತರಪ್ರದೇಶ), ಸೆಪ್ಟೆಂಬರ್ 16: ಬೇರೆ ಜಾತಿಯ ಯುವತಿ ಜತೆಗೆ ಸಂಬಂಧ ಹೊಂದಿದ ಆರೋಪದಲ್ಲಿ ಇಪ್ಪತ್ತು ವರ್ಷದ ದಲಿತ ಯುವಕನನ್ನು ಜೀವಂತವಾಗಿ ಸುಟ್ಟ ಆರೋಪ ಕೇಳಿಬಂದಿದೆ. ಆತನ ಸಾವಿನ ನಂತರ ಯುವಕನ ತಾಯಿ ಕೂಡ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಈ ಮರ್ಯಾದೆ ಹತ್ಯೆ ಪ್ರಕರಣವು ಹರ್ದೋಯ್ ಜಿಲ್ಲೆಯ ಭದೇಸಾ ಪ್ರದೇಶದಲ್ಲಿ ಶನಿವಾರ ನಡೆದಿದೆ. ಅಭಿಷೇಕ್ ಅಲಿಯಾಸ್ ಮೋನು ಎಂಬಾತನನ್ನು ಬಡಿದು, ಬಂಧನದಲ್ಲಿ ಇರಿಸಿಕೊಂಡು, ಆ ನಂತರ ಬೆಂಕಿ ಹೊತ್ತಿಸಿ ಕೊಲ್ಲಲಾಗಿದೆ ಎಂದು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅಲೋಕ್ ಪ್ರಿಯದರ್ಶಿ ತಿಳಿಸಿದ್ದಾರೆ.
ಅಭಿಷೇಕ್ ನ ಚೀರಾಟ ಕೇಳಿ ಸ್ಥಳೀಯರು ಆತನ ನೆರವಿಗೆ ಧಾವಿಸಿ, ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಲಖನೌ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಲಾಗಿದೆ. ಆದರೆ ಮಾರ್ಗ ಮಧ್ಯೆ ಗಾಯಗಳಿಂದ ಯುವಕ ಸಾವನ್ನಪ್ಪಿದ್ದಾನೆ. ಮಗ ಮೃತಪಟ್ಟ ಸುದ್ದಿ ಕೇಳಿ ಮೋನುವಿನ ತಾಯಿ ಕೂಡ ಸಾವನ್ನಪ್ಪಿದ್ದಾರೆ.

ಸ್ಥಳೀಯರು ಹೇಳುವ ಪ್ರಕಾರ, ಯುವತಿಯೊಂದಿಗೆ ಮೋನುವಿಗೆ ಸಂಬಂಧ ಇತ್ತು. ಆಕೆಯನ್ನು ಭೇಟಿ ಮಾಡಲು ಹೋದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ತನ್ನ ತಾಯಿ ರಾಮ್ ಬೇಟಿಗೆ ಆರೋಗ್ಯ ಸರಿಯಿರಲಿಲ್ಲ. ಚಿಕಿತ್ಸೆಗಾಗಿ ಇಪ್ಪತ್ತೈದು ಸಾವಿರ ರುಪಾಯಿ ಹೊಂದಿಸಿಕೊಂಡು, ಮೋನು ಹಿಂತಿರುಗುತ್ತಿದ್ದ.
ಮೋನುವನ್ನು ತಡೆದು, ಕುಟುಂಬದ ಜತೆಗೆ ದ್ವೇಷವಿದ್ದ ಕೆಲ ಜನರು ಮನೆಗೆ ಕರೆದೊಯ್ದಿದ್ದಾರೆ. ಮೋನು ಬಳಿ ಇದ್ದ ಹಣವನ್ನು ಕಿತ್ತುಕೊಂಡು, ಬೆಂಕಿ ಹೊತ್ತಿಸಿದ್ದಾರೆ. ಪೊಲೀಸರು ಐವರ ವಿರುದ್ಧ ದೂರು ದಾಖಲಿಸಿದ್ದಾರೆ. ಅದರಲ್ಲಿ ಯುವತಿಯ ಕುಟುಂಬ ಇಬ್ಬರು ಸದಸ್ಯರು, ಇಬ್ಬರು ನೆರೆಹೊರೆಯ ಸದಸ್ಯರು ಎಂದು ಪೊಲೀಸರು ತಿಳಿಸಿದ್ದು, ವಿಚಾರಣೆ ಮುಂದುವರಿದಿದೆ.












Click it and Unblock the Notifications