ಉತ್ತರ ಪ್ರದೇಶ: 11 ಕೊರೊನಾ ಪ್ರಕರಣ ಪತ್ತೆ, ಶಾಲೆಗೆ ರಜೆ
ಲಕ್ನೋ, ಮಾರ್ಚ್ 13 : ಉತ್ತರ ಪ್ರದೇಶದಲ್ಲಿ 11 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಮಂಜಾಗ್ರತಾ ಕ್ರಮವಾಗಿ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ಮಾರ್ಚ್ 22ರ ತನಕ ರಜೆ ಘೋಷಣೆ ಮಾಡಲಾಗಿದೆ.
ಶುಕ್ರವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತುರ್ತು ಪತ್ರಿಕಾಗೋಷ್ಠಿ ನಡೆಸಿದರು. "ರಾಜ್ಯದಲ್ಲಿ 11 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ" ಎಂದು ಹೇಳಿದರು.
"ಆಗ್ರಾದಲ್ಲಿ 7, ಗಾಜಿಯಾಬಾದ್ನಲ್ಲಿ 2, ನೋಯ್ಡಾ ಮತ್ತು ಲಕ್ನೋದಲ್ಲಿ ತಲಾ ಒಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ" ಎಂದು ಯೋಗಿ ಆದಿತ್ಯನಾಥ್ ತಿಳಿಸಿದರು.

"ಮುಂಜಾಗ್ರತಾ ಕ್ರಮವಾಗಿ ಉತ್ತರ ಪ್ರದೇಶದಲ್ಲಿ ಮಾರ್ಚ್ 22ರ ತನಕ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ" ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉತ್ತರ ಪ್ರದೇಶಕ್ಕೆ ಭೇಟಿ ನೀಡಬೇಕಿತ್ತು. ಆದರೆ, ಕೊರೊನಾದ ಪರಿಣಾಮ ರಾಷ್ಟ್ರಪತಿಗಳ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕು ದೃಢಪಟ್ಟ ಟೆಕ್ಕಿ ಪತ್ನಿ ಉತ್ತರ ಪ್ರದೇಶದ ಆಗ್ರಾ ಮೂಲದವರು. ದಂಪತಿಗಳು ಗ್ರೀಸ್ನಿಂದ ಮುಂಬೈಗೆ ಬಂದಿದ್ದು, ಅಲ್ಲಿಂದ ಟೆಕ್ಕಿ ಬೆಂಗಳೂರಿಗೆ ಬಂದರೆ ಪತ್ನಿ ಆಗ್ರಾಕ್ಕೆ ತೆರಳಿದ್ದಳು.
ಟೆಕ್ಕಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗುತ್ತಿದ್ದಂತೆ ಈ ಕುರಿತು ಉತ್ತರ ಪ್ರದೇಶ ಸರ್ಕಾರದ ಜೊತೆ ಕರ್ನಾಟಕ ಮಾಹಿತಿ ಹಂಚಿಕೊಂಡಿದೆ.












Click it and Unblock the Notifications