ಅಯೋಧ್ಯೆ ತೀರ್ಪು ಕೇಳುವ ಮುನ್ನವೇ ಅಸುನೀಗಿದ ರಾಮಮಂದಿರ ಶಿಲ್ಪಿ
ಲಕ್ನೋ, ನವೆಂಬರ್ 07: ತಮ್ಮ ಜೀವಿತಾವಧಿಯನ್ನು ರಾಮಮಂದಿರ ಶಿಲ್ಪಗಳ ಕೆತ್ತನೆಗಾಗಿಯೇ ಮುಡಿಪಾಗಿಟ್ಟ ಹಿರಿಯ ಶಿಲ್ಪಿ ಅಸುನೀಗಿದ್ದು, ಶಿಲ್ಪಗಳು ಮೌನಕ್ಕೆ ಶರಣಾಗಿವೆ.
ಗುಜರಾತ್ ನ ಸೋಮನಾಥ ಮಂದಿರದ ಮುಖ್ಯ ಶಿಲ್ಪಿಯ ಪುತ್ರ ಚಂದ್ರಕಾಂತ್ ಭಾಯ್ ಸೋಮ್ಪುರ ಅವರೇ ರಾಮಮಂದಿರ ನಿರ್ಮಾಣಕ್ಕಾಗಿ ನಿರಂತರವಾಗಿ ಶಿಲ್ಪ ಕೆತ್ತನೆಯ ಕೆಲಸ ಮಾಡುತ್ತಿದ್ದರು.
ಅಯೋಧ್ಯೆ ತೀರ್ಪಿಗೂ ಕೆಲವು ದಿನ ಮುನ್ನ ಅವರು ಅಸುನೀಗಿದ್ದು, 1990 ರಿಂದ ನಿರಂತರವಾಗಿ ಅವರು ರಾಮಮಂದಿರ ನಿರ್ಮಾಣಕ್ಕಾಗಿ ಶಿಲ್ಪಗಳ ಕೆತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
Recommended Video

ಸ್ಥಗಿತಗೊಂಡ ಕೆತ್ತನೆ ಕಾರ್ಯ
ಈಗ ಅವರ ನಿಧನದ ನಂತರ ಅಯೋಧ್ಯೆಯಲ್ಲಿ ಕೆತ್ತನೆ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ತೀರ್ಪು ಬಂದ ನಂತರ ಮತ್ತೆ ಕೆತ್ತನೆ ಕಾರ್ಯ ಆರಂಭವಾಗುವ ಅಥವಾ ಶಾಶ್ವತವಾಗಿ ನಿಲ್ಲುವ ಬಗ್ಗೆ ನಿರ್ಧಾರವಾಗಲಿದೆ.

ಏನಿದು ವಿವಾದ?
1528ರಲ್ಲಿ ಹಿಂದುಗಳ ಆರಾಧ್ಯ ದೈವ ಶ್ರೀರಾಮನ ಜನ್ಮಸ್ಥಳದಲ್ಲಿ ಬಾಬರ್ ಮಸೀದಿ ಇರುವ ನಿರ್ಮಿಸಲಾಯ್ತು.1885ರಲ್ಲಿ ಮೊದಲ ಬಾರಿಗೆ ಈ ಭೂಮಿಯ ಆಸ್ತಿ ಹಕ್ಕು ವ್ಯಾಜ್ಯ ಕೋರ್ಟ್ ಮೇಟ್ಟಿಲೇರಿತ್ತು. ಅಂದಿನಿಂದ ಮೊದಲುಗೊಂಡು ಆರಂಭವಾದ ರಾಮಜನ್ಮಭೂಮಿ, ಬಾಬ್ರಿ ಮಸೀದಿ ವಿವಾದ ಇಂದಿನ ತನಕ ಪರಿಹಾರ ಕಾಣದಂತೆ ನಡೆದುಕೊಂಡು ಬಂದಿದೆ.

ಮಸೀದಿ ಧ್ವಂಸ
1992 ರಲ್ಲಿ ಕರಸೇವಕರಿಂದ ಮಸೀದಿ ಧ್ವಂಸವಾಯ್ತು. ಹಿಂದೂಗಳಿಗೆ ಮಂಜೂರಾಗಿದ್ದ ಹೊರಾಂಗಣ ಪ್ರದೇಶ (67 ಎಕರೆ) ವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಅಂದಿನ ಉತ್ತರಪ್ರದೇಶ ಸರ್ಕಾರ. ಬಾಬ್ರಿ ಮಸೀದಿ ನಿರ್ಮಾಣಕ್ಕೂ ಮುನ್ನ ಅಲ್ಲಿ ಹಿಂದೂ ಪೂಜಾ ಮಂದಿರವಿತ್ತೇ ಎಂಬುದರ ಬಗ್ಗೆ ಸುಪ್ರೀಂಕೋರ್ಟ್ ಅಭಿಪ್ರಾಯ ಕೇಳಿತು.

2010 ರಲ್ಲಿ ಅಲಹಾಬಾದ್ ಕೋರ್ಟ್ ನಿಂದ ತೀರ್ಪು
2010 ರ ಸೆಪ್ಟೆಂಬರ್ ನಲ್ಲಿ ವಿವಾದಿತ ತಾಣ ಹಂಚಿಕೆ ಮಾಡಿಕೊಳ್ಳುವಂತೆ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಆ ಪ್ರಕಾರ ವಿವಾದಾತ್ಮಕ ಸ್ಥಳದ ಒಟ್ಟು 67 ಎಕರೆ ಭೂಮಿಯಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಅಂತೆಯೇ ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶದಲ್ಲಿ 2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ.

ಸದ್ಯದಲ್ಲೇ ಸುಪ್ರೀಂನಿಂದ ತೀರ್ಪು
ಈ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಕುರಿತಂತೆ ನವೆಂಬರ್ 17 ರ ಒಳಗೆ ಸುಪ್ರೀಂ ಕೋರ್ಟ್ ನಿಂದ ತೀರ್ಪು ಹೊರಬೀಳಲಿದೆ. ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನವೆಂಬರ್ 17 ರಂದು ನಿವೃತ್ತರಾಗುತ್ತಿರುವ ಕಾರಣ ಅದಕ್ಕೂ ಮುನ್ನ ತೀರ್ಪು ನೀಡಬೇಕಿದೆ.












Click it and Unblock the Notifications