ತುಂಗಭದ್ರಾ ಡ್ಯಾಂನಿಂದ ನೀರು ಬಿಡುಗಡೆ: ಕೃಷಿಭೂಮಿ, ಹುಲಿಗೆಮ್ಮಾ ದೇವಾಲಯ ಜಲಾವೃತ
ಕೊಪ್ಪಳ, ಆಗಸ್ಟ್10: ಮುನಿರಾಬಾದ್ನಲ್ಲಿನ ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಪರಿಣಾಮ ಕೊಪ್ಪಳ ಜಿಲ್ಲೆಯಲ್ಲಿಯಲ್ಲಿ ಹಲವೆಡೆ ಅವಾಂತರ ಸೃಷ್ಟಿಯಾಗಿದೆ.
ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಇದರಿಂದ ಡ್ಯಾಂ ಹೊರ ಹರಿವು ಏರಿಕೆಯಾಗಿದೆ. ಅಪಾರ ಪ್ರಮಾಣದ ನೀರು ಹರಿದುಬರುತ್ತಿರುವ ಹಿನ್ನೆಲೆ ಕೊಪ್ಪಳದ ಹುಲಿಗಿಯ ಐತಿಹಾಸಿಕ ಹುಲಿಗೆಮ್ಮ ದೇವಸ್ಥಾನಕ್ಕೆ ಜಲದಿಗ್ಬಂಧನ ಉಂಟಾಗಿದೆ.
ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆ ನದಿಗೆ 1,70,000 ಕ್ಯೂಸೆಕ್ಗೂ ಅಧಿಕ ಪ್ರಮಾಣದ ನೀರನ್ನು ಹರಿಬಿಡಲಾಗಿದೆ. ಇದರಿಂದಾಗಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಉಂಟಾಗಿದೆ.

ನಡುಗಡ್ಡೆಯಲ್ಲಿ ಸಿಲುಕಿದ ರೈತರು; ಜಿಲ್ಲೆಯ ಮುನಿರಾಬಾದ್ ಸಮೀಪದ ಶಿವಪುರ ನಡುಗಡ್ಡೆಯಲ್ಲಿ ನದಿಗೆ ನೀರು ಬಿಡುವ ಮುನ್ನ ಕೃಷಿ ಕೆಲಸಕ್ಕೆ ಹೋಗಿದ್ದವರು, ದನಕರುಗಳನ್ನು ಮೇಯಿಸಲು ಹೋಗಿದ್ದ ರೈತರು ನಡುಗಡೆಯಲ್ಲಿ ಸಿಲುಕಿಕೊಂಡಿದ್ದರು. ತುಂಗಾಭದ್ರಾ ನೀರಿನ ರಭಸ ಹೆಚ್ಚಾದ ಕಾರಣ ಅಲ್ಲಿಯೇ ಉಳಿದುಕೊಂಡಿದ್ದರು. ಗಿಡ್ಡಪ್ , ಪ್ರದೀಪ, ಮಾರುತಿ, ಮಾರ್ಕಂಡೆಪ್ಪ, ಶಂಕರಪ್ಪ, ಮಲ್ಲೇಶಪ್ಪ, ಬಸವರಾಜ, ಭೀಮೇಶ್, ಕೆಂಚಪ್ಪ ನಡುಗಡ್ಡೆಯಲ್ಲಿ ಸಿಲುಕಿದ್ದರು.
ವಿಷಯ ತಿಳಿದು ಕೊಪ್ಪಳ ತಹಶೀಲ್ದಾರ್ ವಿಠ್ಠಲ್ ಚೌಗುಲಾ ಸ್ಥಳಕ್ಕೆ ದೌಡಾಯಿಸಿದರು. ಲೈಫ್ ಜಾಕೆಟ್ ಧರಿಸಿ ಎನ್ಡಿಆರ್ಎಫ್ ತಂಡದ ಸಿಬ್ಬಂದಿಯೊಂದಿಗೆ ಬೋಟ್ ಮೂಲಕ ತೆರಳಿ ರೈತರನ್ನು ಸುರಕ್ಷಿತವಾಗಿ ನಡುಗಡ್ಡೆಯಿಂದ ಕರೆ ಕರೆತಂದರು. ನಮಗೆ ಜಲಾಶಯದಿಂದ ನೀರು ಬಿಡುವುದು ಮೊದಲೇ ಗೊತ್ತಿತ್ತು. ಆದರೂ ನಾವು ಅಲ್ಲಿಗೆ ಹೋಗಿದ್ದೆವು. ಜಮೀನಿಗೆ ಹೋಗದಿದ್ದರೆ ನಮ್ಮ ಹೊಟ್ಟೆ ತುಂಬಲ್ಲ ಎಂದು ರೈತರು ತಹಶೀಲ್ದಾರರ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಜಲಾಶಯದಿಂದ ಅಪಾರ ನೀರು ಬಿಟ್ಟ ಕಾರಣ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಭಾಗದ ಬಾಳೆ ತೋಟಕ್ಕೆ ನೀರು ನುಗ್ಗಿದೆ. ಕೆಲ ದಿನಗಳ ಹಿಂದೆಯಷ್ಟೇ ನಾಟಿ ಮಾಡಿದ್ದ ಭತ್ತದ ಪೈರು ಕೊಚ್ಚಿಕೊಂಡು ಹೋಗಿದೆ. ಅಂಜನಾದ್ರಿ, ಹನುಮನಹಳ್ಳಿ ಸಮೀಪದ ಕೆಲ ಬಾಳೆ ತೋಟ ಸಂಪೂರ್ಣ ಜಲಾವೃತವಾಗಿದೆ. ಪಂಪಾ ಸರೋವರ, ವಿರೂಪಾಪುರ ಗಡ್ಡೆ ಭಾಗದಲ್ಲಿ ನೀರು ರಭಸವಾಗಿ ಹರಿಯುತ್ತಿದ್ದು ಇನ್ನಷ್ಟು ಸ್ಮಾರಕಗಳು ಜಲಾವೃತವಾಗುವ ಆತಂಕ ಎದುರಾಗಿದೆ.












Click it and Unblock the Notifications