ಜೇನಿನ ಝೇಂಕಾರದಲ್ಲಿ ಲಾಭ ಕಂಡ ಕೊಪ್ಪಳ ರೈತನ ಕಥೆ!
ಕೊಪ್ಪಳ, ಆಗಸ್ಟ್ 31 : ಜೇನು ಕೃಷಿಯ ಜನಪ್ರಿಯತೆ ಕೊಪ್ಪಳ ಜಿಲ್ಲೆಯಲ್ಲಿ ಸದ್ದಿಲ್ಲದೆ ಪಸರಿಸುತ್ತಿದೆ. ಸ್ನೇಹಿತನ ಹೊಲದಲ್ಲಿ ಜೇನು ಪೆಟ್ಟಿಗೆಗಳನ್ನು ಇಟ್ಟು ಜೇನು ಪರಾಗಸ್ಪರ್ಷದಿಂದ ಸ್ನೇಹಿತನ ಹೊಲದ ಸೂರ್ಯಕಾಂತಿ ಬೆಳೆಯಲ್ಲಿ ಶೇ.35ಕ್ಕಿಂತ ಅಧಿಕ ಇಳುವರಿಯನ್ನು ಪಡೆಯಲು ನೆರವಾಗಿದ್ದಾರೆ ಕೊಪ್ಪಳ ತಾಲೂಕಿನ ಡಂಬ್ರಳ್ಳಿಯ ಗ್ರಾಮದ ಜೇನು ಕೃಷಿಕ ಆನಂದರಡ್ಡಿ.
ಜೇನು ಎಂದೊಡನೆ ಎಲ್ಲರಿಗೂ ಬಾಯಲ್ಲಿ ನೀರೂರುವುದು ಸಹಜ. ಆದರೆ ಜೇನು ಸಾಕಾಣಿಕೆ ಎಂದೊಡನೆ ದೂರ ಸರಿಯುವ ರೈತರು ಅಧಿಕ. ಹೀಗಿರುವಾಗ ಜೇನು ಕೃಷಿ ಮಾಡಿ ಅದರ ಲಾಭ ಪಡೆಯುವವರು ಬಹಳ ವಿರಳ.
ಉತ್ತಮ ರೈತ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದ ಬೆಂಗಳೂರು ಕೃಷಿ ವಿವಿ
ಆದರೆ, ಕೊಪ್ಪಳ ಜಿಲ್ಲೆಯ ಕೆಲ ರೈತರು ಜೇನುಕೃಷಿ ಮಾಡಿ ಅದರಿಂದ ಲಾಭ ಪಡೆಯುತ್ತಿದ್ದಾರೆ. ಇಂತಹ ರೈತರಲ್ಲಿ ಆನಂದರಡ್ಡಿ ಸಹ ಒಬ್ಬರು. ಹತ್ತಾರು ಜೇನು ಪೆಟ್ಟಿಗೆಗಳನ್ನು ಸ್ನೇಹಿತರ ಹೊಲಗಳಲ್ಲಿಟ್ಟು ತಾವೇ ಅವುಗಳನ್ನು ಸಲಹಿ, ರೈತರಿಗೆ ಜೇನಿನ ಮಹತ್ವ ಮತ್ತು ಅವುಗಳ ಪರಾಗಸ್ಪರ್ಶದಿಂದ ಆಗುವ ಲಾಭವನ್ನು ಪರಿಚಯಿಸುತ್ತಿದ್ದಾರೆ ಆನಂದರಡ್ಡಿ.
ಇತ್ತೀಚೆಗೆ ಜೇನು ಪೆಟ್ಟಿಗೆಗಳನ್ನು ತಮ್ಮ ಸ್ನೇಹಿತ ಭೂಮರೆಡ್ಡಿಯವರ ಸೂರ್ಯಕಾಂತಿ ಹೊಲದಲ್ಲಿ ಇಟ್ಟಾಗ ಅದರ ಇಳುವರಿ ಶೇ.35ಕ್ಕಿಂತ ಅಧಿಕವಾಗಿರುವುದು ಕಂಡುಬಂದಿದೆ. ಅಲ್ಲದೇ ಸುತ್ತಲಿನ ಇನ್ನೂ 4-5 ರೈತರು ಈ ಜೇನು ಪರಾಗಸ್ಪರ್ಷದ ಫಲಾನುಭವಿಗಳಾಗಿದ್ದಾರೆ. ಸೂರ್ಯಕಾಂತಿ ಕಟಾವಿಗೆ ಬಂದಿರುವುದರಿಂದ ಈಗ ತಮ್ಮದೇ ಬಾಳೆ ಹೊಲಕ್ಕೆ ಪೆಟ್ಟಿಗೆಗಳನ್ನು ವರ್ಗಾಯಿಸಿದ್ದಾರೆ.
ಆನಂದರೆಡ್ಡಿಯವರು ಸಂಜೀವಿನಿ ಜೇನು ಕೃಷಿಕರ ಸಂಘದ ಸದಸ್ಯರು. ಸಂಘದಲ್ಲಿ ಸುಮಾರು 32 ಜನ ಪ್ರಗತಿಪರ ಜೇನು ಕೃಷಿಕರಿದ್ದು, ಒಬ್ಬೊಬ್ಬರದು ಒಂದೊಂದು ಅಪರೂಪದ ಅನುಭವವಾಗಿದೆ.
ನನ್ನ ಸಾಲ ಮನ್ನಾ ಮಾಡಬೇಡಿ ಎಂದ ಕರಡಗೋಡು ಗ್ರಾಮದ ಸ್ವಾಭಿಮಾನಿ ರೈತ
ಪಂಪಾಪತಿ ತರಕಾರಿ ಬೆಳೆಗಳಲ್ಲಿ, ಮಹೇಶ ಮತ್ತು ಅನಿಲಕುಮಾರ ಮಾವಿನಲ್ಲಿ, ವೆಂಕನಗೌಡ ಮೇಟಿ, ನಿಂಗಪ್ಪ ಮತ್ತು ದೇವೇಂದ್ರಗೌಡರು ವಿವಿಧ ಪುಷ್ಪ ಮತ್ತು ಇನ್ನಿತರ ಬೆಳೆಗಳಲ್ಲಿ ಜೇನು ಕೃಷಿ ಮಾಡುತ್ತಿದ್ದಾರೆ.
ಸದ್ದಿಲ್ಲದೆ ಜೇನು ಸಂತತಿಯ ಉಳಿವಿಗೆ ಕಾರಣವಾಗಿರುವ ಈ ಎಲ್ಲಾ ಕೃಷಿಕರು ತಮಗರಿವಿಲ್ಲದಂತೆಯೇ ತಮ್ಮ ಆರ್ಥಿಕ ದೃಢತೆಯೊಂದಿಗೆ ಪ್ರಕೃತಿಯ ವೈವಿದ್ಯತೆಯ ಉಳಿವಿಗೆ ಕಾರಣರಾಗಿದ್ದಾರೆ.
ಈ ಪ್ರಯತ್ನ ನೋಡಿ ಯಾರಾದರೂ ಜೇನು ಕೃಷಿಯತ್ತ ಆಸಕ್ತಿ ತೋರಿದರೆ ಮಾರ್ಗದರ್ಶನ ನೀಡಲು ಸದಾ ಸಿದ್ದವಾಗಿದೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ.