ಆನೆಗೊಂದಿ ಉತ್ಸವದಲ್ಲಿ ಗಾಯಕ ವಿಜಯ್ ಪ್ರಕಾಶ್ ಗೆ ಅವಮಾನ?
ಕೊಪ್ಪಳ, ಜನವರಿ 10: ಆನೆಗೊಂದಿ ಉತ್ಸವದಲ್ಲಿ ಗುರುವಾರ ರಾತ್ರಿ ಗಾಯಕ ವಿಜಯ್ ಪ್ರಕಾಶ್ ಅವರಿಗೆ ಸನ್ಮಾನ ಮಾಡುವ ವಿಷಯದಲ್ಲಿ ಬಿಜೆಪಿ ಶಾಸಕ ಮತ್ತು ಜಿಲ್ಲಾಧಿಕಾರಿ ನಡುವೆ ಮನಸ್ತಾಪ ಉಂಟಾಗಿದೆ.
ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವದಲ್ಲಿ ಜಿಲ್ಲಾಧಿಕಾರಿ ಸುನೀಲ್ ಕುಮಾರ್, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರನ್ನು ಬಿಟ್ಟು, ವಿಜಯ್ ಪ್ರಕಾಶ್ ಅವರಿಗೆ ಸನ್ಮಾನ ಮಾಡಿದ್ದು ಈ ಮುನಿಸಿಗೆ ಕಾರಣವಾಗಿದೆ.
ಶ್ರೀ ಕೃಷ್ಣದೇವರಾಯ ಮುಖ್ಯ ವೇದಿಕೆಯಲ್ಲಿ ವಿಜಯ್ ಪ್ರಕಾಶ್ ಅವರಿಗೆ ಜಿಲ್ಲಾಧಿಕಾರಿಗಳು ಸನ್ಮಾನ ಮಾಡಿ ವೇದಿಕೆಯಿಂದ ಹೊರಟರು. ಜಿಲ್ಲಾಧಿಕಾರಿ ವರ್ತನೆಗೆ ಸಿಡಿಮಿಡಿಗೊಂಡ ಶಾಸಕರು ಅಧಿಕಾರಿಗಳ ಎದುರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ವಿಜಯ್ ಪ್ರಕಾಶ್ ಅವರು ಹಾಡುಗಳನ್ನು ಹಾಡುತ್ತಾ ರಂಜಿಸುತ್ತಿದ್ದರು. ಆದರೆ ಶಾಸಕರು ಆ ಸಂದರ್ಭದಲ್ಲೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರು. ಸ್ಥಳದಲ್ಲಿದ್ದ ಎಸ್ ಪಿ ಸಂಗೀತಾ ಶಾಸಕರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು. ವೇದಿಕೆ ಮೇಲೆ ಬಂದು ಇನ್ನೊಮ್ಮೆ ಸನ್ಮಾನ ಮಾಡುವಂತೆ ಶಾಸಕರಿಗೆ ಅಧಿಕಾರಿಗಳು ಮನವಿ ಮಾಡಿದರು. ಆದರೆ ಅದಕ್ಕೆ ಪರಣ್ಣ ಮುನವಳ್ಳಿ ಒಪ್ಪಲಿಲ್ಲ. ಶಾಸಕರ ಈ ವರ್ತನೆಗೆ ಬೇಸತ್ತು ವಿಜಯ್ ಪ್ರಕಾಶ್ ಕಾರ್ಯಕ್ರಮ ನಿಲ್ಲಿಸಿ ವೇದಿಕೆಯಿಂದ ಕೆಳಗೆ ಇಳಿದು, ವೇದಿಕೆ ಮೇಲೆ ಬರುವಂತೆ ಪರಣ್ಣ ಅವರಿಗೆ ಮನವಿ ಮಾಡಿದರು.
ಕೊನೆಗೆ ವೇದಿಕೆ ಮೇಲೆ ಬಂದು ಬೆಂಬಲಿಗರೊಂದಿಗೆ ವಿಜಯ್ ಪ್ರಕಾಶ್ ಅವರಿಗೆ ಮತ್ತೊಮ್ಮೆ ಶಾಸಕ ಪರಣ್ಣ ಮುನವಳ್ಳಿ ಸನ್ಮಾನ ಮಾಡಿದರು.












Click it and Unblock the Notifications