ಕೊಪ್ಪಳ; ರೈತರಿಗೆ ಶೀಘ್ರ ಬೆಳೆ ಪರಿಹಾರ ನೀಡಲು ಆರ್ ಅಶೋಕ್ ಸೂಚನೆ
ಕೊಪ್ಪಳ, ಸೆಪ್ಟೆಂಬರ್ 17: ಬೆಳೆ ಪರಿಹಾರ, ಪಿಂಚಣಿ ಸೌಲಭ್ಯ, ಸ್ಮಶಾನ ಭೂಮಿ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಬಾಕಿಯಿರುವ ಕೆಲಸಗಳು ಇನ್ನು ಎರಡು ವಾರಗಳೊಳಗೆ ಪೂರ್ಣಗೊಳಿಸಬೇಕು ಮತ್ತು ಈ ಕುರಿತು ಜಿಲ್ಲಾ ಮಂತ್ರಿಗಳಿಗೆ ವರದಿ ಸಲ್ಲಿಸಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್, ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ನ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಇಂದು ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ಜಿಲ್ಲೆಯಲ್ಲಿ ಕಳೆದ ಬಾರಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಉಂಟಾದ ಬೆಳೆಹಾನಿಗೆ ರೈತರಿಗೆ ಆರ್.ಟಿ.ಜಿ.ಎಸ್. ಮೂಲಕ ರೂ. 31.50 ಕೋಟಿ ಬೆಳೆ ಪರಿಹಾರ ಮೊತ್ತವನ್ನು ಜಮೆ ಮಾಡಲಾಗಿದೆ. ಅದರಲ್ಲಿ ಬಾಕಿ ಉಳಿದ ರೈತರಿಗೆ ಆದಷ್ಟು ಬೇಗ ಬೆಳೆ ಪರಿಹಾರ ತಲುಪಿಸಿ" ಎಂದು ಸೂಚನೆ ನೀಡಿದರು.
ಜಿಲ್ಲೆಯ ಪ್ರತಿ ಹಳ್ಳಿಯಲ್ಲಿಯೂ ಸ್ಮಶಾನ ಜಾಗ
ಜಿಲ್ಲೆಯ ಪ್ರತಿ ಹಳ್ಳಿಯಲ್ಲಿಯೂ ಸ್ಮಶಾನ ಜಾಗ ಇರಲೇಬೇಕು. ಪ್ರಸ್ತುತ ಸ್ಮಶಾನ ಜಾಗ ಇಲ್ಲದ ಗ್ರಾಮಗಳಲ್ಲಿ ಸರ್ಕಾರಿ ಜಾಗ ಗುರುತಿಸಿ ನೋಟಿಫಿಕೇಶನ್ ಹೊರಡಿಸಿ. ಸರ್ಕಾರಿ ಜಾಗವು ಗ್ರಾಮಕ್ಕೆ ಹತ್ತಿರವಾಗಿದ್ದು, ಜನ ಬಳಕೆಗೆ ಯೋಗ್ಯವಾಗಿರಬೇಕು. ಅಂತಹ ಜಾಗವನ್ನು ಗುರುತಿಸಿ. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದರೆ, ಗ್ರಾಮದ ಹತ್ತಿರದ ಖಾಸಗಿ ಜಮೀನು ಖರೀದಿಸಲು ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ಅರ್ಜಿ ಹಾಕದಿದ್ದರೂ ಕೈಸೇರಲಿದೆ ಪಿಂಚಣಿ; ಆರ್ ಅಶೋಕ್
"ವೈದ್ಯಕೀಯ ಉಪಕರಣ ಖರೀದಿಗೆ 9 ಕೋಟಿ ರೂ ಹಣ ಬಿಡುಗಡೆ"
ಕೋವಿಡ್-19 ಗೆ ಸಂಬಂಧಿಸಿದಂತೆ ಅಗತ್ಯ ಚಿಕಿತ್ಸೆ, ಉಪಕರಣಗಳ ಖರೀದಿಗೆ ಸರ್ಕಾರದಿಂದ ಇದುವರೆಗೆ ಸುಮಾರು 9 ಕೋಟಿ ರೂ ಹಣವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ವೆಂಟಿಲೇಟರ್ ಮುಂತಾದವುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಆದರೂ ಬೇರೆ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದರೆ, ಕೊಪ್ಪಳದಲ್ಲಿ ಮಾತ್ರ ಸೋಂಕು ಹೆಚ್ಚುತ್ತಿದೆ. ಇದಕ್ಕೆ ಕಾರಣಗಳೇನು ಎಂದು ಪ್ರಶ್ನಿಸಿದ ಸಚಿವರು, ಖರೀದಿಸಿದ ವೆಂಟಿಲೇಟರ್ಗಳನ್ನು ಶೀಘ್ರ ಇನ್ಸ್ಟಾಲ್ ಮಾಡಿಸಿ, ಅದರ ನಿರ್ವಹಣೆಗೆ ಸಿಬ್ಬಂದಿಯನ್ನು ನಿಯೋಜಿಸಿ ಎಂದರು.
ಕೋವಿಡ್ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ
ಅನಸ್ತೇಶಿಯಾ ತಜ್ಞರ ಕೊರತೆ ಕುರಿತು ಆರೋಗ್ಯಾಧಿಕಾರಿ ಮಾಹಿತಿ ನೀಡಿದಾಗ, ಕೂಡಲೇ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ವೈದ್ಯರ ಕೊರತೆ ನೀಗಿಸಿ. ಕೋವಿಡ್ ನಿಯಂತ್ರಣಕ್ಕೆ ಬೇಕಾದಲ್ಲಿ ಇನ್ನೂ ಅಗತ್ಯ ಅನುದಾನ ನೀಡಲು ಸರ್ಕಾರ ಸಿದ್ಧವಿದೆ. ಕೋವಿಡ್ ಸಮಸ್ಯೆ ಎದುರಾಗಿ ಆರು ತಿಂಗಳಾದರೂ ಆ ಕುರಿತು ಜಿಲ್ಲೆಯ ಅಧಿಕಾರಿಗಳು, ವೈದ್ಯರು ಗಂಭೀರವಾಗಿ ಕ್ರಮ ಕೈಗೊಂಡಿಲ್ಲ. ನಗರದಲ್ಲಿ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಪಾಲನೆ ನಿಯಮವನ್ನು ಸಾರ್ವಜನಿಕರು ಅನುಸರಿಸುತ್ತಿಲ್ಲ. ಆದ್ದರಿಂದ ಸಂತೆ, ಜನಸಂದಣಿ ಇರುವ ಪ್ರದೇಶಗಳಲ್ಲಿ ಅಧಿಕಾರಿಗಳನ್ನು ನೇಮಿಸಿ ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಪಾಡದವರಿಗೆ ದಂಡ ವಿಧಿಸಿ. ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸಿ. ಲಸಿಕೆ ಬರುವವರೆಗೂ ಎಲ್ಲ ರೀತಿಯ ಎಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಚಿವ ಆರ್. ಅಶೋಕ್ ಹೇಳಿದ ಆ 17 ಪ್ರಕರಣಗಳು!
Recommended Video
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೃಷಿ ಸಚಿವ
ಇದೇ ಸಂದರ್ಭ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಅಧಿಕಾರಿಗಳು ಪ್ರತಿ ಸಭೆಯಲ್ಲೂ ಕೆಲಸ ಪೂರ್ಣಗೊಳಿಸಲು ಒಂದು ವಾರ, ಹದಿನೈದು ದಿನಗಳ ಕಾಲಾವಕಾಶ ಕೇಳುತ್ತೀರಿ. ಆದರೆ ನೀವು ಕೇಳಿದ ಸಮಯದಲ್ಲಿ ಪೂರ್ಣವಾಗುವ ಕೆಲಸ ಅದಕ್ಕೂ ಮೊದಲು ಏಕೆ ಪೂರ್ಣಗೊಳ್ಳುವುದಿಲ್ಲ, ಅಧಿಕಾರಿಗಳು ಮೊದಲು ಸಮಯಕ್ಕೆ ಬೆಲೆ ಕೊಡುವುದನ್ನು ಕಲಿತುಕೊಳ್ಳಿ. ಯಾವುದೇ ಕೆಲಸವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿದರೆ ಒತ್ತಡ, ಜನಪ್ರತಿನಿಧಿಗಳ ಒತ್ತಡ ಎಲ್ಲವೂ ಕಡಿಮೆಯಾಗುತ್ತದೆ. ಸರ್ಕಾರದ ಕೆಲಸಗಳಲ್ಲಿ ಜನರಿಗೆ ನಂಬಿಕೆಯೂ ಮೂಡುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯತಿ ಸಿ.ಇ.ಒ ರಘುನಂದನ್ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.