ಅಂಜನಾದ್ರಿಗೆ ಸಿಎಂ: ಬಿಜೆಪಿ ಕಾರ್ಯಕರ್ತರು, ಪೊಲೀಸರ ನಡುವೆ ವಾಗ್ವಾದ
ಕೊಪ್ಪಳ, ಆಗಸ್ಟ್ 1: ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಪ್ಪಳದ ಗಂಗಾವತಿಗೆ ಆಗಮಿಸಲಿದ್ದು ಅಂಜನಾದ್ರಿ ಬೆಟ್ಟದ ವೀಕ್ಷಣೆ ಮಾಡಲಿದ್ದಾರೆ. ಹನುಮ ಜನಿಸಿದ ಸ್ಥಳ ಅಂಜನಾದ್ರಿ ಬೆಟ್ಟವನ್ನು ಪ್ರವಾಸಿತಾಣವಾಗಿ ಅಭಿವೃದ್ಧಿ ಪಡಿಸುವ ವಿಚಾರವಾಗಿ ಜನಪ್ರತಿನಿಧಿ ಹಾಗೂ ರೈತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಮುಖ್ಯಮಂತ್ರಿಗಳ ಆಗಮನಕ್ಕೂ ಮುನ್ನ ಅಂಜನಾದ್ರಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ. ಮಧ್ಯಾಹ್ನ ಆಗಮಸುವ ಸಿಎಂ ಬಸವರಾಜ ಬೊಮ್ಮಾಯಿ ಆಂಜನೇಯನಿಗೆ ಪೂಜೆ ಸಲ್ಲಿಸಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪೂಜಾ ವಿಧಿವಿಧಾನಗಳನ್ನು ನಡೆಸಲು ಅರ್ಚಕರಿಂದ ಸಿದ್ದತೆ ನಡೆಯುತ್ತಿದೆ. ವಿಶೇಷ ಹೂವಿನ ಆಲಂಕಾರದೊಂದಿಗೆ ಅಂಜನಾದ್ರಿ ಕಂಗೊಳಿಸುತ್ತಿದೆ.
ಸೋಮವಾರ ಅಂಜನಾದ್ರಿ ಬೆಟ್ಟಕ್ಕೆ ಸಿಎಂ ಬೊಮ್ಮಾಯಿ ಭೇಟಿ
ಪಾದಗಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸಿಎಂ ಬೆಟ್ಟದ ಸುತ್ತಮುತ್ತ ವೈಮಾನಿಕ ಸಮೀಕ್ಷೆ ಮಾಡಲಿದ್ದಾರೆ. ಬಳಿಕ ಸಭೆ ನಡೆಯಲಿದ್ದು, ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಸರಕಾರ ಘೋಷಣೆ ಮಾಡಿದ ಅನುದಾನದಲ್ಲಿ ಏನೇನು ಸೌಲಭ್ಯಗಳನ್ನು ಕಲ್ಪಿಸಬೇಕು. ರಸ್ತೆಯ ನಿರ್ಮಾಣ ಸಂದರ್ಭದಲ್ಲಿ ರೈತರು ಹೊಲ-ಗದ್ದೆಗಳನ್ನು ಭೂಸ್ವಾಧೀನಪಡಿಸಿಕೊಳ್ಳಬೇಕೆಂಬ ವಿಷಯ ಚರ್ಚೆಯಾಗಲಿದೆ.
ಬಿಗಿ ಪೊಲೀಸ್ ಬಂದೋಬಸ್ತ್; ಮುಖ್ಯಮಂತ್ರಿಗಳು ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ವಿಜಯನಗರ, ಬಳ್ಳಾರಿ, ರಾಯಚೂರು, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳ ಪೊಲೀಸರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಬಸವರಾಜ ಬೊಮ್ಮಾಯಿಗೆ ವಿವಿಧ ಇಲಾಖೆಯ ಸಚಿವರು ಸಾಥ್ ನೀಡಲಾಗಿದ್ದಾರೆ.
ಪೊಲೀಸರೊಂದಿಗೆ ಬಿಜೆಪಿ ಕಾರ್ಯಕರ್ತರ ವಾಗ್ವಾದ; ಬಸವರಾಜ ಬೊಮ್ಮಾಯಿಗೆ ಸ್ವಾಗತ ಕೋರಲು ಬಿಜೆಪಿ ಕಾರ್ಯಕರ್ತರು ಹೆಲಿಪ್ಯಾಡ್ ಒಳಗೆ ಪ್ರವೇಶಿಸಿದ್ದು, ತಾವು ಒಳಕ್ಕೆ ಬರುತ್ತೇವೆ ಎಂದು ಎಎಪಿ ಕಾರ್ಯಕರ್ತರು ಅವಕಾಶ ಕೇಳಿದ್ದಾರೆ. ಆದರೆ ಪೊಲೀಸರು ಆಪ್ ಕಾರ್ಯಕರ್ತರಿಗೆ ಹೆಲಿಪ್ಯಾಡ್ ಆವರಣದ ಪ್ರವೇಶಿಸಲು ನಿರಾಕರಿಸಿದ್ದಾರೆ. ನಂತರ ಬಿಜೆಪಿ ಕಾರ್ಯಕರ್ತರನ್ನೂ ಹೊರಗೆ ಕಳುಹಿಸುವಂತೆ ಆಪ್ ಕಾರ್ಯಕರ್ತರು ಪ್ರತಿಭಟಿಸಿದರು.
ಈ ವೇಳೆ ಪೊಲೀಸರು, ಬಿಜೆಪಿ ಕಾರ್ಯಕರ್ತರನ್ನು ಹೊರ ಕಳುಹಿಸಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ಬಿಜೆಪಿ ಕಾರ್ಯಕರ್ತರು ವಾಗ್ವಾದ ನಡೆಸಿದ ಘಟನೆಯೂ ನಡೆದಿದೆ. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅಧ್ಯಕ್ಷ ಯಮನೂರಪ್ಪ ಚೌಡಕಿ ಏಕವಚನದಲ್ಲಿ ಪೊಲೀಸರೊಂದಿಗೆ ಏಕ ವಚನದಲ್ಲಿ ವಾಗ್ವಾದ ನಡೆಸಿದ್ದಾರೆ, ಪೊಲೀಸ್ ಭಾಷೆ ನಮ್ಮ ಮುಂದೆ ಇಟ್ಕೋಬೇಡ, ನಿನ್ನ ಕೆಲಸ ನೀ ಮಾಡು ನನ್ನ ಕೆಲಸ ನಾ ಮಾಡ್ತೀನಿ ಎಂದು ಚೌಡಕಿ ಪೊಲೀಸರಿಗೆ ಏಕ ವಚನದಲ್ಲಿ ಟೀಕಿಸಿದರು.
Recommended Video