ಪಶ್ಚಿಮ ಬಂಗಾಳ ರೈತರಿಗೆ ಮಮತಾ ಅನ್ಯಾಯ ಮಾಡಿದ್ದಾರೆ; ನಡ್ಡಾ
ಕೋಲ್ಕತ್ತಾ, ಫೆಬ್ರುವರಿ 06: ಪಶ್ಚಿಮ ಬಂಗಾಳ ಜನರು ತೃಣಮೂಲ ಕಾಂಗ್ರೆಸ್ನ ಮಮತಾ ಬ್ಯಾನರ್ಜಿಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅದು ಸಾಬೀತಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಜೆ.ಪಿ. ನಡ್ಡಾ ಟೀಕೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದ ಸಲುವಾಗಿ ಶನಿವಾರ ನಡ್ಡಾ ಭೇಟಿ ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ರಥಯಾತ್ರೆಯಲ್ಲಿ ಮೊದಲ ದಿನ ಪಾಲ್ಗೊಂಡು ಮಾತನಾಡಿದ ಅವರು, ತೃಣಮೂಲ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿದ ನಂತರ ಸಮಗ್ರ ಅಭಿವೃದ್ಧಿಯನ್ನು ಜನರು ಕಾಣಲಿದ್ದಾರೆ ಎಂದು ಭರವಸೆ ನೀಡಿದರು. ಮುಂದೆ ಓದಿ...

ಮಮತಾ ಬ್ಯಾನರ್ಜಿ ಬಗ್ಗೆ ವ್ಯಂಗ್ಯ
ನಾನು ಬಂಗಾಳಕ್ಕೆ ಬಂದಾಗ ಎಲ್ಲಿ ಹೋದರೂ ದೀದಿ ಹಾಗೂ ಆಕೆಯ ಸಂಬಂಧಿ (ಅಭಿಷೇಕ್ ಬ್ಯಾನರ್ಜಿ) ಕೈಕಟ್ಟಿ ನಿಂತಿರುವ ಫೋಟೊ ಕಾಣಿಸುತ್ತದೆ. ಆದರೆ ಈಗ ಬಂಗಾಳದ ಜನ ನಿಮಗೆ ನಮಸ್ಕಾರ ಮಾಡಿ ಗುಡ್ ಬೈ ಹೇಳಲು ಸಿದ್ಧವಾಗಿದ್ದಾರೆ ಎಂದು ವ್ಯಂಗ್ಯ ಮಾಡಿದರು.

ರೈತರ ಜೊತೆ ನಡ್ಡಾ ಸಂವಾದ
ಪಶ್ಚಿಮ ಬಂಗಾಳದ ಮಲ್ದಾ ಜಿಲ್ಲೆಯ ಸಹಾಪುರದಲ್ಲಿ ರೈತರ ಜೊತೆ ಸಂವಾದ ನಡೆಸಿದ ನಡ್ಡಾ, ಪ್ರಧಾನಿ ನರೇಂದ್ರ ಮೋದಿಯವರಿಗೆ ನೀವು ಬೆಂಬಲ ನೀಡಿದರೆ ಅವರು ಬಂಗಾಳವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಾರೆ. ರೈತರ ಏಳಿಗೆಯೂ ಸಾಧ್ಯವಾಗಲಿದೆ ಎಂದು ಭರವಸೆ ನೀಡಿದರು. ರೈತರೊಂದಿಗೆ ಕುಳಿತು ಊಟ ಮಾಡಿದರು.

"ಪಶ್ಚಿಮ ಬಂಗಾಳ ರೈತರಿಗೆ ದೀದಿ ಅನ್ಯಾಯ ಮಾಡಿದ್ದಾರೆ"
ನೀವು ಮೋದಿಜೀಗೆ ಆಶೀರ್ವದಿಸಿ ಪಶ್ಚಿಮ ಬಂಗಾಳದಲ್ಲಿ ಕಮಲ ಅರಳುವಂತೆ ಮಾಡಿದದರೆ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳೂ ಅರಳುತ್ತವೆ. ರೈತರ ಪರವಾಗಿ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ ಎಂದರು. ತಮ್ಮ ಅಹಂಕಾರದ ಕಾರಣದಿಂದಾಗಿ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನವನ್ನು ಇಲ್ಲಿನ ರೈತರು ಪಡೆದುಕೊಳ್ಳಲು ಬಿಡಲಿಲ್ಲ. ಆದರೆ ಇಲ್ಲಿನ 25ಲಕ್ಷ ರೈತರು ಸ್ವಯಂ ದಾಖಲಾದ ನಂತರ ಈ ಯೋಜನೆಗೆ ಮುಂದೆ ಬಂದರು ಎಂದು ಹೇಳಿದರು.

"ಜೈಶ್ರೀರಾಮ್ ಎಂದರೆ ಮಮತಾಗೆ ಯಾಕಷ್ಟು ಕೋಪ?"
"ಜೈಶ್ರೀರಾಮ್" ಘೋಷಣೆ ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಸುದ್ದಿ ಮಾಡಿತು. ಆದರೆ ಜೈಶ್ರೀರಾಮ್ ಎಂದರೆ ಮಮತಾ ದೀದಿಗೆ ಯಾಕಷ್ಟು ಕೋಪ ಎಂದು ಪ್ರಶ್ನಿಸಿ ಮತ್ತೆ ಮಮತಾ ಬ್ಯಾನರ್ಜಿಯೆಡೆಗೆ ಮಾತಿನ ಬಾಣ ನೆಟ್ಟರು.
ಇದೇ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು 294 ಸೀಟುಗಳಿಗೆ ಚುನಾವಣೆ ಸಿದ್ಧತೆ ನಡೆಯುತ್ತಿದೆ. ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ಬಿರುಸಿನ ಪೈಪೋಟಿ ಸೃಷ್ಟಿಯಾಗಿದೆ.












Click it and Unblock the Notifications