ರಾಜಕೀಯ ಹೊಡೆದಾಟದ ನಡುವೆ ಮಗುವಿಗೆ ಗುಂಡಿಕ್ಕಿದ ದುಷ್ಕರ್ಮಿಗಳು
ಕೋಲ್ಕತಾ, ಆಗಸ್ಟ್ 31: ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಜಗಳದ ನಡುವೆ ಮೂರು ವರ್ಷದ ಮುಗ್ಧ ಮಗುವೊಂದು ಗುಂಡೇಟಿನಿಂದ ತೀವ್ರ ಗಾಯಗೊಂಡ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಮಾಲ್ಡಾದಲ್ಲಿ ಪಂಚಾಯತ್ ಸಮಿತಿಯ ರಚನೆ ವೇಳೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಆ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ.
ಮಾಣಿಕ್ಚಾಕ್ ಗ್ರಾಮದಿಂದ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಪುತುಲ್ ಮಂಡಲ್ ಅವರ ಮಗ ಮೃಣಾಲ್ ಮಂಡಲ್ ಗಾಯಗೊಂಡ ನತದೃಷ್ಟ ಮಗು.

ಆಗಸ್ಟ್ 28 ಮತ್ತು 29ರಂದು ಮಾಣಿಕ್ಚಾಕ್ ಗ್ರಾಮ ಪಂಚಾಯಿತಿ ಚುನಾವಣೆ ಮುಗಿದ ಬಳಿಕ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷ ಏರ್ಪಟ್ಟಿತ್ತು.
18 ಸೀಟುಗಳನ್ನು ಹೊಂದಿರುವ ಈ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಹತ್ತು ಸೀಟುಗಳನ್ನು ಗೆದ್ದಿದ್ದರೆ, ಟಿಎಂಸಿ ಆರರಲ್ಲಿ ಜಯಭೇರಿ ಬಾರಿಸಿತ್ತು. ಇನ್ನು ಸಿಪಿಐ (ಎಂ) ಮತ್ತು ಕಾಂಗ್ರೆಸ್ ತಲಾ ಒಂದು ಸೀಟುಗಳಲ್ಲಿ ಗೆದ್ದಿದ್ದವು.
ಬಿಜೆಪಿಯಿಂದ ಗೆದ್ದಿದ್ದ ಪುತುಲ್, ಹಣದ ಆಮಿಷಕ್ಕೆ ಒಳಗಾಗಿ ಟಿಎಂಸಿಗೆ ಸೇರಲು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ.
ಗ್ರಾಮ ಪಂಚಾಯಿತಿಯ ಪ್ರಧಾನ್ ಅವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಬಿಜೆಪಿ ಮತ್ತು ಟಿಎಂಸಿ ತಲಾ 9 ಮತಗಳನ್ನು ಪಡೆದಿದ್ದರಿಂದ ಟೈ ಆಗಿತ್ತು. ಬಳಿಕ ಟಾಸ್ ಹಾರಿಸಿದಾಗ ಬಿಜೆಪಿ ಜಯಗಳಿಸಿತ್ತು.
ಇದಾದ ಬಳಿಕ ಎರಡೂ ಪಕ್ಷಗಳ ನಡುವೆ ಹಿಂಸಾಚಾರ ಉಂಟಾಗಿತ್ತು. ಕೆಲವು ಅಪರಿಚಿತ ದುಷ್ಕರ್ಮಿಗಳು ಪುತುಲ್ ಅವರ ಮನೆಯ ಮೇಲೆ ದಾಳಿ ನಡೆಸಿದ್ದರು. ಆಗ ಅವರ ಹಾರಿಸಿದ ಗುಂಡು ಪುತುಲ್ ಅವರ ಮೂರು ವರ್ಷದ ಮಗ ಮೃಣಾಲ್ನ ತಲೆಗೆ ಹೊಕ್ಕಿದೆ.












Click it and Unblock the Notifications