'ಕ್ಷಮೆ ಕೇಳಿ' ಎಂದ ವೈದ್ಯರು ದೀದಿಗೆ ಹಾಕಿದ 6 ಷರತ್ತುಗಳೇನು?
ಕೋಲ್ಕತ್ತಾ, ಜೂನ್ 15: ಪಶ್ಚಿಮ ಬಂಗಾಳದಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ವೈದ್ಯರ ಮುಷ್ಕರ ಇಂದೂ ಮುಂದುವರಿದಿದೆ. ಈಗಾಗಲೇ ಮುನ್ನೂರಕ್ಕೂ ಹೆಚ್ಚು ವೈದ್ಯರು ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ನಡುವೆ ವೈದ್ಯರನ್ನು ಸಂಧಾನಕ್ಕೆ ಆಮಂತ್ರಿಸಿದ ಮಮತಾ ಬ್ಯಾನರ್ಜಿ ಅವರ ಕರೆಗೆ ಪ್ರತಿಕ್ರಿಯೆ ನೀಡಿದ ವೈದ್ಯರು, ಮಾತುಕತೆಗೆ ನೀವೇ ಬನ್ನಿ, ನಮ್ಮ ಬಳಿ ಭೇಷರತ್ ಕ್ಷಮೆ ಕೇಳಿ ಎಂದು ಆಗ್ರಹಿಸಿದ್ದಾರೆ! ಜೊತೆಗೆ ತಮ್ಮ ಬೇಡಿಕೆಗಳ ಪಟ್ಟಿಯನ್ನೂ ಅವರು ವಿವರಿಸಿದ್ದಾರೆ.
300 ವೈದ್ಯರ ರಾಜೀನಾಮೆ, ಬಂಗಾಳದಲ್ಲಿ ಮುಗಿಲು ಮುಟ್ಟಿದ್ದ ಆಕ್ರೋಶ
ಒಟ್ಟು ಆರು ಬೇಡಿಕೆಗಳೊಂದಿಗೆ ವೈದ್ಯರು ಮುಷ್ಕರ ನಡೆಸುತ್ತಿದ್ದು, ಅವುಗಳನ್ನು ಈಡೇರಿಸದೆ ಇದ್ದರೆ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರವೂ ವೈದ್ಯರ ಬೇಡಿಕೆಗಳನ್ನು ಆಲಿಸಿ, ಅಗತ್ಯ ಪರಿಹಾರ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ 48 ಗಂಟೆಗಳ ಗಡುವು ನೀಡಿದೆ.
ಜೂನ್ 10 ರಂದು 80 ವರ್ಷ ವಯಸ್ಸಿನ ರೋಗಿಯೊಬ್ಬರನ್ನು ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಆದರೆ ಅವರ ಸಾವಿಗೆ ಕಿರಿಯ ವೈದ್ಯರೊಬ್ಬರ ನಿರ್ಲಕ್ಶ್ಯವೇ ಕಾರಣ ಎಂದು ದೂರಿ, ರೋಗಿಯ ಸಂಬಂಧಿಗಳು ಪರಿಬೊನೊ ಮುಖರ್ಜಿ ಎಂಬ ವೈದ್ಯರ ಮೇಲೆ ದಾಳಿ ನಡೆಸಿದ್ದರು. ಇದರಿಂದಾಗಿ ತೀವ್ರವಾಗಿ ಗಾಯಗೊಂಡ ವೈದ್ಯರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಸಹಜವಾಗಿ ಸಂಭವಿಸಿದ ಘಟನೆಗೆ, ವೈದ್ಯರನ್ನು ಹೊಣೆಯಾಗಿಸುವುದು ಸರಿಯಲ್ಲ, ಆಸ್ಪತ್ರೆಯ ಹಾಸ್ಟೆಲ್ ಆವರಣದಲ್ಲೇ ವೈದ್ಯರ ಮೇಲೆ ದಾಳಿ ನಡೆಯುತ್ತಿದ್ದರೂ ವೈದ್ಯರ ರಕ್ಷಣೆಗೆ ಯಾರೂ ಇರಲಿಲ್ಲ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಿಗೆ ಭದ್ರತೆ ಒದಗಿಸಬೇಕು ಎಂಬುದನ್ನೂ ಸೇರಿ ಆರು ಬೇಡಿಕೆಗಳನ್ನುವೈದ್ಯರು ಪಶ್ಚಿಮ ಬಂಗಾಳ ಸರ್ಕಾರದ ಮುಂದಿಟ್ಟಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮುಷ್ಕರ ಏಕೆ? ಹಿನ್ನೆಲೆಯೇನು?
ಅಷ್ಟಕ್ಕೂ ವೈದ್ಯರು ಹಾಕಿರುವ ಆರು ಷರತ್ತುಗಳು ಯಾವವು?
ಷರತ್ತು-1
ಮೊದಲನೇ ಷರತ್ತೆಂದರೆ, ಹಲ್ಲೆಗೊಳಗಾದ ವೈದ್ಯರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭೇತಿ ಮಾಡಬೇಕು, ಮತ್ತು ಈ ಘಟನೆಯನ್ನು ಖಂಡಿಸಿ ಸರ್ಕಾರದ ವತಿಯಿಂದ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಬೇಕು.
ಷರತ್ತು-2
ಘಟನೆಯ ಕುರಿತು ಕೂಡಲೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಧ್ಯಸ್ಥಿಕೆ ವಹಿಸಬೇಕು. ಅಂದು ನಿಜವಾಗಿಯೂ ನಡೆದಿದ್ದೇನು ಎಂಬ ಬಗ್ಗೆ ವೈದ್ಯರೊಂದಿಗೆ ಮಾತುಕತೆ ನಡೆಸಬೇಕು.
2 ಗಂಟೆಯೊಳಗೆ ಸೇವೆಗೆ ಮರಳಿದರೆ ಸರಿ, ಇಲ್ಲಾಂದ್ರೆ... ವೈದ್ಯರಿಗೆ ಮಮತಾ ವಾರ್ನಿಂಗ್
ಷರತ್ತು- 3
ಅಂದು ಎನ್ ಆರ್ ಎಸ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಯುತ್ತಿದ್ದರೂ ರಕ್ಷಣೆಗೆ ಆಗಮಿಸದ ಪೊಲೀಸರ ನಡೆಯ ಬಗ್ಗೆ ತನಿಖೆ ನಡೆಸಲು ಸರ್ಕಾರ ಮುಂದಾಗಬೇಕು.
ಷರತ್ತು- 4
ಅಂದು ವೈದ್ಯರ ಮೇಲೆ ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಮತ್ತು ಸಾಕ್ಷಿಗಳನ್ನು ಆಲಿಸಬೇಕು.
ಬಂಗಾಳದಲ್ಲಿ ವಾಸವಿದ್ದರೆ ಬೆಂಗಾಲಿ ಕಲಿಯಲೇಬೇಕು: ದೀದಿ ಎಚ್ಚರಿಕೆ
ಷರತ್ತು- 5
ಮುಷ್ಕರ ಆರಂಭವಾದಾಗಿನಿಂದ ಕಿರಿಯ ವೈದ್ಯರ ವಿರುದ್ಧ ಪಶ್ಚಿಮ ಬಂಗಾಳದಾದ್ಯಂತ ದಾಖಲಾಗಿರುವ ಎಲ್ಲಾ ಸುಳ್ಳು ಪ್ರಕರಣಗಳನ್ನು ಭೇಷರತ್ ಹಿಂಪಡೆಯಬೇಕು.
ಷರತ್ತು -6
ಆರೋಗ್ಯ ಸೌಲಭ್ಯಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸುಧಾರಿಸಬೇಕು ಮತ್ತು ಆಸ್ಪತ್ರೆಗಳಲ್ಲಿ ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು.