ದೇಶದಲ್ಲಿ ಮಹಾ ತುರ್ತುಪರಿಸ್ಥಿತಿ: ಮಮತಾ ಬ್ಯಾನರ್ಜಿ ಆರೋಪ
ಕೋಲ್ಕತಾ, ಜೂನ್ 25: ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ಮತ್ತೆ ಗುಡುಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಳೆದ ಐದು ವರ್ಷಗಳಿಂದ ದೇಶವು 'ಸೂಪರ್ ಎಮೆರ್ಜೆನ್ಸಿ' (ಮಹಾ ತುರ್ತುಪರಿಸ್ಥಿತಿ) ಅನುಭವಿಸುತ್ತಿದೆ ಎಂದು ಆರೋಪಿಸಿದ್ದಾರೆ.
'ಇಂದು 1975ರಲ್ಲಿ ಘೋಷಿತವಾದ ತುರ್ತು ಪರಿಸ್ಥಿತಿಯ ವಾರ್ಷಿಕೋತ್ಸವ. ಕಳೆದ ಐದು ವರ್ಷಗಳಲ್ಲಿ ದೇಶವು ಸೂಪರ್ ಎಮರ್ಜೆನ್ಸಿಯನ್ನು ನೋಡುತ್ತಿದೆ. ನಾವು ಇತಿಹಾಸದಿಂದ ನಮ್ಮ ಪಾಠ ಕಲಿಯಬೇಕು. ದೇಶದಲ್ಲಿನ ಪ್ರಜಾಸತ್ತಾತ್ಮಕ ಸಂಸ್ಥೆಗಳ ರಕ್ಷಣೆಗೆ ಹೋರಾಡಬೇಕು' ಎಂದು 1975ರ ತುರ್ತು ಪರಿಸ್ಥಿತಿ ಹೇರಿಕೆಯ 44ನೇ ವರ್ಷದ ಸಂದರ್ಭದಲ್ಲಿ ಅವರು ಕಿಡಿಕಾರಿದರು.
ಮಮತಾ ಬ್ಯಾನರ್ಜಿ ಅವರು ಸೂಪರ್ ಎಮರ್ಜೆನ್ಸಿ ಕುರಿತು ಮಾತನಾಡುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಈ ಹಿಂದೆಯೂ ಅವರು ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಹಾ ತುರ್ತುಪರಿಸ್ಥಿತಿ ಹೇರಿಕೆ ಮಾಡಿದೆ ಎಂದು ಆರೋಪಿಸಿದ್ದರು.

ಇನ್ನೊಂದೆಡೆ ಪ್ರಧಾನಿ ಮೋದಿ ಅವರು ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಭಾಗಿಯಾದವರನ್ನು ನೆನಪಿಸಿಕೊಂಡಿದ್ದಾರೆ.
'ತುರ್ತು ಪರಿಸ್ಥಿತಿ ಹೇರಿಕೆಯನ್ನು ಉಗ್ರವಾಗಿ ಮತ್ತು ನಿರ್ಭಯದಿಂದ ವಿರೋಧಿಸಿದ ಪ್ರತಿಯೊಬ್ಬರನ್ನೂ ದೇಶ ವಂದಿಸುತ್ತದೆ' ಎಂದಿದ್ದಾರೆ.
'ತುರ್ತು ಪರಿಸ್ಥಿತಿಯ ವಿರುದ್ಧ ತೀವ್ರವಾಗಿ ಹಾಗೂ ಭಯವಿಲ್ಲದೆ ಪ್ರತಿರೋಧಿಸಿದ ಮಹನೀಯರಿಗೆ ಭಾರತ ವಂದಿಸುತ್ತದೆ. ಅಧಿಕಾರಶಾಹಿ ಮನಸ್ಥಿತಿ ವಿರುದ್ಧ ಭಾರತದ ಪ್ರಜಾಪ್ರಭುತ್ವದ ಸಂಸ್ಕೃತಿ ಅದನ್ನು ಯಶಸ್ವಿಯಾಗಿ ಹತ್ತಿಕ್ಕಿತು' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು 1975ರ ಜೂನ್ 25ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. 1977ರವರೆಗೂ 21 ತಿಂಗಳ ಕಾಲ ಅದು ಜಾರಿಯಲ್ಲಿತ್ತು.












Click it and Unblock the Notifications