''ಬೆಂಗಾಳಿ ಬ್ರಾಹ್ಮಣ ಯುವತಿ ರಿಯಾ ವಿರುದ್ಧ ದೂರು ಹಾಸ್ಯಾಸ್ಪದ''
ಕೋಲ್ಕತಾ, ಸೆ.11: ಸುಶಾಂತ್ ಸಿಂಗ್ ಸಾವಿನ ಪ್ರಕರಣ, ಡ್ರಗ್ಸ್ ಸೇವನೆ, ಪೂರೈಕೆ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ನಟಿ ರಿಯಾ ಚಕ್ರವರ್ತಿ ಪರ ಲೋಕಸಭೆ ವಿಪಕ್ಷ ನಾಯಕ, ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ದನಿಯೆತ್ತಿದ್ದಾರೆ. ಬೆಂಗಾಳಿ ಬ್ರಾಹ್ಮಣ ಯುವತಿ ರಿಯಾ ವಿರುದ್ಧ ದೂರು ದಾಖಲಿಸಿರುವುದು, ಆರೋಪಗಳೆಲ್ಲವೂ ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ.
ಕಾನೂನಿಗೆ ಎಲ್ಲರೂ ತಲೆಬಾಗಬೇಕು ಆದರೆ, ಟಿವಿ ಮಾಧ್ಯಮಗಳು ಪ್ರತ್ಯೇಕವಾಗಿ ಕಾನೂನು ಹೊಂದಿದಂತೆ ಕಾಣುತ್ತಿವೆ. ಯಾರು ಅಪರಾಧಿ ಎಂದು ಅವರೇ ನಿರ್ಧರಿಸಿಬಿಡುತ್ತಿದ್ದಾರೆ ಎಂದು ಟೀಕಿಸಿದರು. ರಿಯಾರನ್ನು ಎನ್ ಡಿ ಪಿಎಸ್ ಕಾಯ್ದೆಯಡಿಯಲ್ಲಿ ಬಂಧಿಸಿರುವುದು ನಗೆಪಾಟಲಿನ ವಿಷಯ. ಮಾಧ್ಯಮಗಳು ನ್ಯಾಯಾಂಗ ವ್ಯವಸ್ಥೆಯ ಅಶುಭಸೂಚಕವಾಗಿವೆ. ರಿಯಾ ತಂದೆ ನ್ಯಾಯಕ್ಕಾಗಿ ಆಗ್ರಹಿಸಿರುವುದು ಯಾರಿಗೂ ಕೇಳಿಸುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಭಾರತೀಯ ಸೇನೆಯ ಮಾಜಿ ಅಧಿಕಾರಿಯೊಬ್ಬರು, ದೇಶಕ್ಕಾಗಿ ಸೇವೆ ಸಲ್ಲಿಸಿದವರ ಮಗಳು ರಿಯಾ, ಬೆಂಗಾಲಿ ಬ್ರಾಹ್ಮಣ ಮಹಿಳೆ, ಸುಶಾಂತ್ ಸಿಂಗ್ ಕೇಸಿನಲ್ಲಿ ಸಿಗಬೇಕಿರುವ ನ್ಯಾಯವನ್ನು ಬಿಹಾರಕ್ಕೆ ಸಿಗಬೇಕಿರುವ ನ್ಯಾಯ ಎಂದು ಬಿಂಬಿಸಲಾಗುತ್ತಿದೆ. ಪ್ರಾದೇಶಿಕತೆ ರಾಜಕೀಯ ದಾಳ ಉರುಳಿಸಲಾಗಿದೆ ಎಂದು ಟೀಕಿಸಿದರು.

ಮಾಧ್ಯಮಗಳ ತಮ್ಮದೇ ನ್ಯಾಯಾಂಗ ವ್ಯವಸ್ಥೆ
ಮಾಧ್ಯಮಗಳು ತಮ್ಮದೇ ನ್ಯಾಯಾಂಗ ವ್ಯವಸ್ಥೆ ರೂಪಿಸಿಕೊಂಡಂತೆ ತೋರುತ್ತಿದೆ. ರಿಯಾ ತಂದೆ ಕೋರುತ್ತಿರುವ ನ್ಯಾಯದ ಬಗ್ಗೆ ಯಾಕೆ ಯಾರು ಮಾತನಾಡುತ್ತಿಲ್ಲ. ನ್ಯಾಯಾಂಗ ವ್ಯವಸ್ಥೆ ಎಲ್ಲರಿಗೂ ಸಮಾನವಾಗಿ ಸಲ್ಲಬೇಕಿಲ್ಲವೇ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಟ್ವೀಟ್ ಮಾಡಿದ್ದಾರೆ.

ರಿಯಾ ಸಿಲುಕಿಸಿರುವುದು ಷಡ್ಯಂತ್ರದಂತೆ ತೋರುತ್ತಿದೆ
ಸುಶಾಂತ್ ಇಡೀ ದೇಶಕ್ಕೆ ನಟನಾಗಿದ್ದ. ಬಿಜೆಪಿಯವರು ಆತನನ್ನು ಬಿಹಾರಿ ನಟ ಎಂದು ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಆತನ ಹೆಸರನ್ನು ಬಳಸಿಕೊಳ್ಳತೊಡಗಿದ್ದಾರೆ.
ರಿಯಾ ಚಕ್ರವರ್ತಿ ಅವರನ್ನು ಆತ್ಮಹತ್ಯೆ ಪ್ರಚೋದನೆ, ಕೊಲೆ ಯತ್ನ, ಆರ್ಥಿಕ ಅವ್ಯವಹಾರ ಹೀಗೆ ಯಾವುದೇ ಪ್ರಕರಣದಲ್ಲಿ ಸಿಲುಕಿಸದೇ ಎನ್ ಡಿ ಪಿಎಸ್ ಕಾಯ್ದೆಯಡಿಯಲ್ಲಿ ಸಿಲುಕಿಸಿರುವುದು ಷಡ್ಯಂತ್ರದಂತೆ ತೋರುತ್ತಿದೆ.

ಮುಂಬೈನ ಬೈಕುಲಾ ಜೈಲಿನಲ್ಲಿರಿಸಲಾಗಿದೆ
ಕೇಂದ್ರ ಸರ್ಕಾರದ ನಿರ್ದೇಶನದಂತೆ ತನಿಖಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸಮುದ್ರ ಮಂಥನ ಮಾಡಿ ಅಮೃತ ಜೇನು ತೆಗೆಯುವ ಬದಲು ಡ್ರಗ್ಸ್ ಹೊರತೆಗೆದಿದ್ದಾರೆ. ಸುಶಾಂತ್ ಕೇಸಿನಲ್ಲಿ ಯಾರನ್ನು ಅಪರಾಧಿಯಾಗಿಸುವುದು ಎಂದು ಹುಡುಕುತ್ತಿದ್ದಾರೆ ಎಂದು ಕಿಡಿಕಾರಿದರು.
ಮೂರು ದಿನಗಳ ಕಾಲ ಕಸ್ಟಡಿಯಲ್ಲಿದ್ದ ರಿಯಾಳನ್ನು ವಿಚಾರಣೆ ನಂತರ ಮಂಗಳವಾರದಂದು ಬಂಧಿಸಲಾಗಿದ್ದು ,ಸೆಪ್ಟೆಂಬರ್ 22ರ ತನಕ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಮುಂಬೈನ ಬೈಕುಲಾ ಜೈಲಿನಲ್ಲಿರಿಸಲಾಗಿದೆ.

ಮಾದಕ ವಸ್ತು ನಿಯಂತ್ರಣ ದಳದ ತನಿಖೆ
ಜೂನ್ 14ರಂದು 34 ವರ್ಷ ವಯಸ್ಸಿನ ಬಿಹಾರ ಮೂಲದ ನಟ ಸುಶಾಂತ್ ಸಿಂಗ್ ಅವರ ದೇಹವು ಬಾಂದ್ರಾದ ಅವರ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಕಗ್ಗಂಟಾಗಿರುವ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷೆ ವರದಿ ಮಹತ್ವ ಪಡೆದುಕೊಂಡಿತ್ತು. ನಂತರ ಸುಶಾಂತ್ ಡ್ರಗ್ಸ್ ಸೇವನೆ ಬಗ್ಗೆ ತನಿಖೆ ಆರಂಭವಾಗಿ ರಿಯಾ ಚಕ್ರವರ್ತಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಡ್ರಗ್ ಪೆಡ್ಲರ್ ಗಳ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ನಟಿ ರಿಯಾ ಚಕ್ರವರ್ತಿ ಸೋದರ ಶೋವಿಕ್, ಬಾಣಸಿಗ ದೀಪೇಶ್, ಸ್ಯಾಮುಯಲ್ ಮಿರಾಂಡರನ್ನು ಮಾದಕ ವಸ್ತು ನಿಯಂತ್ರಣ ದಳ(ಎನ್ ಸಿಬಿ)ದವರು ಈಗಾಗಲೇ ಕಸ್ಟಡಿಗೆ ಪಡೆದುಕೊಂಡಿದೆ.












Click it and Unblock the Notifications