ದೀದಿ ಆಟ ಶುರು ಎನ್ನುತ್ತಿದ್ದರೆ, ಬಿಜೆಪಿ ವಿಕಾಸ ಶುರು ಎನ್ನುತ್ತಿದೆ; ಮೋದಿ
ಕೋಲ್ಕತ್ತಾ, ಮಾರ್ಚ್ 18: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರ "ಖೇಲಾ ಹೋಬೆ" ಘೋಷಣೆಗೆ ಸವಾಲು ಹಾಕಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ, ಅಭಿವೃದ್ಧಿ ಹಾಗೂ ಶಿಕ್ಷಣ ಗುಣಮಟ್ಟವನ್ನು ಸುಧಾರಿಸುವ ಪ್ರತಿಜ್ಞೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಗುರುವಾರ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, "ದೀದಿ ಖೇಲಾ ಹೋಬೆ (ಆಟ ಶುರು) ಎಂದು ಹೇಳುತ್ತಿದ್ದಾರೆ. ಬಿಜೆಪಿ ಕೆಲಸ ಶುರು ಎನ್ನುತ್ತಿದೆ, ವಿಕಾಸ ಶುರು ಎನ್ನುತ್ತಿದೆ, ಶಿಕ್ಷಣ ಶುರು ಎನ್ನುತ್ತಿದೆ. ಪಶ್ಚಿಮ ಬಂಗಾಳದಲ್ಲಿ ವಿಕಾಸ ಆರಂಭವಾಗುವ ದಿನ ಹತ್ತಿರ ಬರಲಿದೆ" ಎಂದು ಚುನಾವಣೆಯಲ್ಲಿ ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಡ ಸರ್ಕಾರ ಹಾಗೂ ಟಿಎಂಸಿ ಸರ್ಕಾರ ಇಲ್ಲಿ ಕೈಗಾರಿಕೆಗಳು ಅಭಿವೃದ್ಧಿಯಾಗಲು ಬಿಡಲಿಲ್ಲ. ನೀರಾವರಿಗೆ ಅಗತ್ಯವಿರುವ ಕೆಲಸವೂ ಇಲ್ಲಿ ನಡೆದಿಲ್ಲ. ರೈತರ ಸಮಸ್ಯೆಗಳನ್ನು ಹಾಗೇ ಬಿಟ್ಟು ತೃಣಮೂಲ ಕಾಂಗ್ರೆಸ್ ತನ್ನ ಆಟವನ್ನಷ್ಟೇ ಆಡುತ್ತಿದೆ ಎಂದು ದೂರಿದ್ದಾರೆ.

ಇಷ್ಟು ವರ್ಷವಾದರೂ ದೀದಿಯಿಂದ ಇಲ್ಲಿ ಒಂದು ಸೇತುವೆಯನ್ನೂ ಕಟ್ಟಲು ಸಾಧ್ಯವಾಗಿಲ್ಲ. ಈಗ ಕೈಗಾರಿಕೆ, ಅಭಿವೃದ್ಧಿ ಕುರಿತು ಮಾತನಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಇಲ್ಲಿ ಅಧಿಕಾರಕ್ಕೆ ಬಂದ ನಂತರ ಆದ್ಯತೆಯನುಸಾರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು. ಡಬಲ್ ಇಂಜಿನ್ ಸರ್ಕಾರ ಬಂದಾಗ ಇಲ್ಲಿನ ಜನರ ಜೀವನವೂ ಸುಲಭವಾಗುವುದು ಎಂದು ಭರವಸೆ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27ರಂದು ಚುನಾವಣೆ ಆರಂಭವಾಗಲಿದ್ದು, ಮೇ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಸದ್ಯಕ್ಕೆ ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಭಾರೀ ಪೈಪೋಟಿ ಇದೆ.












Click it and Unblock the Notifications