ಮುಖ್ಯಮಂತ್ರಿ ಧರಣಿ ಕೂರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ: ಯೋಗಿ
ಪುರುಲಿಯಾ (ಪಶ್ಚಿಮ ಬಂಗಾಲ), ಫೆಬ್ರವರಿ 5: ಮುಖ್ಯಮಂತ್ರಿಯೊಬ್ಬರು ಧರಣಿ ಕೂರುತ್ತಾರೆ ಅಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದಕ್ಕಿಂತ ನಾಚಿಕೆಗೇಡು ಯಾವುದೂ ಇಲ್ಲ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ಇಲ್ಲಿ ಪ.ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿ ಕಾರಿದ್ದಾರೆ.
ಶಾರದಾ ಚಿಟ್ ಫಂಡ್ ಹಾಗೂ ರೋಸ್ ವ್ಯಾಲಿ ಹಗರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ ಮೂರರಂದು ಕೋಲ್ಕತ್ತಾದ ನಗರ ಕಮಿಷನರ್ ರಾಜೀವ್ ಕುಮಾರ್ ರ ವಿಚಾಣೆಗಾಗಿ ಅವರ ನಿವಾಸದ ಬಳಿ ಸಿಬಿಐ ಅಧಿಕಾರಿಗಳು ಬಂದಿದ್ದರು. ಆ ವೇಳೆ ಅಧಿಕಾರಿಗಳನ್ನು ತಡೆದ ಪಶ್ಚಿಮ ಬಂಗಾಲ ಪೊಲೀಸರು, ತಮ್ಮ ವಶಕ್ಕೆ ಪಡೆದಿದ್ದರು.

ಆ ನಂತರ ಸ್ಥಳಕ್ಕೆ ಬಂದ ಮಮತಾ ಬ್ಯಾನರ್ಜಿ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ 'ಸಂವಿಧಾನ ಉಳಿಸಿ' ಎಂಬ ಘೋಷಣೆ ಅಡಿಯಲ್ಲಿ ಧರಣಿ ಆರಂಭಿಸಿದರು. ಈ ಧರಣಿಯ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೆಂಡ ಕಾರಿದ್ದಾರೆ. ಭ್ರಷ್ಟ ಅಧಿಕಾರಿಗಳನ್ನು ಮಮತಾ ಬ್ಯಾನರ್ಜಿ ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಂಗಳವಾರ ಬೆಳಗ್ಗೆಯಿಂದ ಯೋಗಿ ಆದಿತ್ಯನಾಥ್ ಭಾಷಣ ಕೇಳುವ ಸಲುವಾಗಿ ಜನರು ಕಾದಿದ್ದರು. ನಾಲ್ಕು ಗಂಟೆಗಳ ಹಗ್ಗಜಗ್ಗಾಟದ ನಂತರ ಅವರು ಪುರುಲಿಯಾಗೆ ಬಂದರು. ಕಳೆದ ಭಾನುವಾರದಂದು ಹೇಗೆ ಯೋಗಿ ಆದಿತ್ಯನಾಥ್ ಹೆಲಿಕಾಪ್ಟರ್ ಇಳಿಸಲು ಇಲ್ಲಿನ ರಾಜ್ಯ ಸರಕಾರ ಅನುಮತಿ ನೀಡಿರಲಿಲ್ಲವೋ ಅದೇ ರೀತಿ ಮಂಗಳವಾರ ಕೂಡ ಅವಕಾಶ ನೀಡಲಿಲ್ಲ.
ಕೊನೆಗೆ ಜಾರ್ಖಂಡ್ ನ ಬೊಕಾರೊದಲ್ಲಿ ಹೆಲಿಕಾಪ್ಟರ್ ಇಳಿಸಿ, ಅಲ್ಲಿಂದ ಐವತ್ತು ಕಿ.ಮೀ. ದೂರ ರಸ್ತೆ ಮಾರ್ಗದಲ್ಲಿ ಬಂದರು. ಕೊನೆ ಕ್ಷಣದ ತನಕ ಈ ಸಭೆ ನಡೆಯುವ ಬಗ್ಗೆ ಅನುಮಾನ ಇತ್ತು. ಏಕೆಂದರೆ, ಸಭೆ ನಡೆಸಲು ಪಡೆದ ಅನುಮತಿ ಪತ್ರದಲ್ಲಿ ಸಮಸ್ಯೆಗಳಿವೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದರು.
ಭ್ರಷ್ಟ ಅಧಿಕಾರಿಗೆ ಮಮತಾ ಬ್ಯಾನರ್ಜಿ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿದ ಯೋಗಿ, ಕಮಿಷನರ್ ರಾಜೀವ್ ಕುಮಾರ್ ರನ್ನು ಸಿಬಿಐ ಮುಂದೆ ಹಾಜರಾಗುವಂತೆ ಕೋರ್ಟ್ ನಿರ್ದೇಶನ ನೀಡಿದೆ. ಅದಕ್ಕೆ ಸಹಕಾರ ನೀಡಲು ಮಮತಾ ಸಿದ್ಧವಿದ್ದಲ್ಲಿ ಈ ಧರಣಿ ಏಕೆ? ಪಶ್ಚಿಮ ಬಂಗಾಲ ಈ ಭ್ರಷ್ಟ ವ್ಯವಸ್ಥೆಯಿಂದ ಹೊರಗೆ ಬರಲಿದೆ ಎಂದು ಹೇಳಿದರು.












Click it and Unblock the Notifications