ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಬಿಜೆಪಿಗೇ ಮತ ಹಾಕುತ್ತಾರೆ; ತ್ರಿವೇದಿ
ಕೋಲ್ಕತ್ತಾ, ಮಾರ್ಚ್ 13: ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಬಿಜೆಪಿಗೇ ಮತ ಹಾಕುವುದಾಗಿ ತಮಗೆ ತಿಳಿಸಿದ್ದು, ಅಲ್ಪಸಂಖ್ಯಾತ ಸಮುದಾಯಗಳು ಈಗ ಸಮಾಜದ ಮುಖ್ಯ ವಾಹಿನಿಗೆ ಬರಲು ಬಯಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಬಿಜೆಪಿ ನಾಯಕ ದಿನೇಶ್ ತ್ರಿವೇದಿ ಹೇಳಿದ್ದಾರೆ.
"ಟೈಮ್ಸ್ ನೌ" ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, "ಪಶ್ಚಿಮ ಬಂಗಾಳದಿಂದ ಕೆಲವು ಮುಸ್ಲಿಮರು ನನಗೆ ಕರೆ ಮಾಡಿದ್ದರು. ಈ ಬಾರಿ ತಾವು ಬಿಜೆಪಿಗೇ ಮತ ಹಾಕುವುದಾಗಿ ತಿಳಿಸಿದ್ದಾರೆ" ಎಂದು ಹೇಳಿದರು.
ಬಿಜೆಪಿ ಸೇರಿದ ತಮಗೆ ಯಾವ ಸ್ಥಾನ ನೀಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ತ್ರಿವೇದಿ, ದೇಶ ಹಾಗೂ ಜನರ ಸೇವೆ ಮಾಡುವುದು ನನ್ನ ವೈಯಕ್ತಿಕ ಆಸೆ. ಒಂದು ಸ್ಥಾನದಲ್ಲಿರುವುದು ಪ್ರಕ್ರಿಯೆಯಷ್ಟೆ. ಅದೇ ಗುರಿಯಲ್ಲ ಎಂದು ಹೇಳಿದ್ದಾರೆ. ಮಾ, ಮತಿ, ಮನುಷ್ ಈ ಮೂಲ ನೀತಿ ಹಾಗೂ ತತ್ವಗಳು ನಶಿಸಿಹೋಗುತ್ತಿದೆ. ಇಲ್ಲಿನ ಜನರು ಕೋಪಗೊಂಡಿದ್ದಾರೆ. ಆದರೆ ಇದು ಬಂಗಾಳದ ಸಂಸ್ಕೃತಿಯಲ್ಲ ಎಂದು ಮಾತನಾಡಿದ್ದಾರೆ.

ತೃಣಮೂಲ ಕಾಂಗ್ರೆಸ್ ರಚನೆಯಾದ ಸಂದರ್ಭ ನಾವು 5000, 7000, 10,000 ರೂಪಾಯಿಗಾಗಿ ಪರದಾಡುತ್ತಿದ್ದೆವು. ಈಗ ಚುನಾವಣಾ ತಂತ್ರಗಾರನಿಗೇ ಕೋಟಿಗಟ್ಟಲೆ ಹಣ ಸುರಿಯುತ್ತಿದ್ದಾರೆ. ಇದೆಲ್ಲಾ ಯಾರ ಹಣ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ.
ಇದೇ ಮಾರ್ಚ್ 6ರಂದು ದಿನೇಶ್ ತ್ರಿವೇದಿ ಟಿಎಂಸಿಯಿಂದ ಬಿಜೆಪಿ ಸೇರಿದ್ದರು. ತನ್ನ ರಾಜ್ಯದಲ್ಲಿ ಗಲಭೆ ವಾತಾವರಣವಿದ್ದು, ಇದನ್ನು ತಡೆಯಲು ತನ್ನಿಂದ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಇಲ್ಲಿ ನನಗೆ ಉಸಿರು ಕಟ್ಟಿದಂಥ ವಾತಾವರಣವಿದೆ ಎಂದು ಹೇಳಿದ್ದ ತ್ರಿವೇದಿ ರಾಜ್ಯಸಭೆ ಸದಸ್ಯತ್ವಕ್ಕೆ ಫೆ.12ರಂದು ರಾಜೀನಾಮೆ ಘೋಷಿಸಿದ್ದರು. ಇನ್ನು ಕೆಲವೇ ದಿನಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ತ್ರಿವೇದಿ ತೊಡಗಿಕೊಂಡಿದ್ದಾರೆ.












Click it and Unblock the Notifications